ಸಿಎಂ ಸವಾಲಿಗೆ ಬಿಜೆಪಿಗರು ಉತ್ತರಿಸಲಿ: ಸಚಿವ ರಾಜಣ್ಣ

| Published : Feb 11 2024, 01:50 AM IST / Updated: Feb 11 2024, 04:52 PM IST

ರಾಜಣ್ಣ
ಸಿಎಂ ಸವಾಲಿಗೆ ಬಿಜೆಪಿಗರು ಉತ್ತರಿಸಲಿ: ಸಚಿವ ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದಿಂದ ನಮಗೆ ಅನ್ಯಾಯ ಆಗಿರುವ ಕುರಿತು ಸಿಎಂ ಸಿದ್ದರಾಮಯ್ಯನವರು ಅಂಕಿ-ಅಂಶಗಳ ಪ್ರಕಾರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ಕೇಂದ್ರ ಸರ್ಕಾರದಿಂದ ನಮಗೆ ಅನ್ಯಾಯ ಆಗಿರುವ ಕುರಿತು ಸಿಎಂ ಸಿದ್ದರಾಮಯ್ಯನವರು ಅಂಕಿ-ಅಂಶಗಳ ಪ್ರಕಾರ ಹೇಳಿದ್ದಾರೆ. ಅದೆಲ್ಲಾ ಸುಳ್ಳು ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದೂ ಅವರು ಸವಾಲು ಹಾಕಿದ್ದಾರೆ. ಈ ಬಗ್ಗೆ ಬಿಜೆಪಿಗರು ಉತ್ತರ ನೀಡಲಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ತಾಲೂಕಿನ ಅಗಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ರಾಜಕೀಯ ಡೊಂಬರಾಟ ಎಂಬ ಮಾಜಿ ಸಿಎಂ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಕ್ಕೆ ಅನ್ಯಾಯ ಆದಾಗ ನೋಡಿಕೊಂಡು ಸುಮ್ನೆ ಕೂರಬೇಕು ಅನ್ನೋದಕ್ಕೆ ಯಡಿಯೂರಪ್ಪ ಬೆಂಬಲ ಇದೆಯಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಹೇಳಿದಂತೆ ಈಶ್ವರಪ್ಪನವರ ಮೆದುಳು-ಬಾಯಿಗೂ ಸಂಬಂಧ ಕಟ್ಟಾಗಿದೆ. ಮಾಧ್ಯಮಗಳಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದರು. ಬಳಿಕ ಹಾಗೆ ಹೇಳಿಲ್ಲ ಅಂದರು ಎಂದು ವ್ಯಂಗ್ಯವಾಡಿದರು.

ದೇಶ ವಿಭಜನೆ ಕುರಿತು ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶ ಒಗ್ಗಟ್ಟಾಗಿ ಇರಬೇಕು ಎಂಬ ಕಾರಣಕ್ಕೆ ರಾಜೀವ್ ಗಾಂಧಿ ಜೀವತ್ಯಾಗ ಮಾಡಿದ್ದರು. 

ಆಪರೇಷನ್ ಬ್ಲ್ಯೂ ಸ್ಟಾರ್ ಮಾಡಿದ್ದು ಯಾರು, ಮಾಡದಿದ್ದರೆ ಪಂಜಾಬ್ ರಾಜ್ಯ ನಮ್ಮಲ್ಲಿ ಇರುತ್ತಿರಲಿಲ್ಲ, ಅದಕ್ಕಾಗಿ ಇಂದಿರಾಗಾಂಧಿ ಹತ್ಯೆ ಆಯಿತು. ದೇಶಕ್ಕೋಸ್ಕರ ಬಿಜೆಪಿಯವರ ಕೊಡುಗೆ ಏನು?, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲ್ಲ ಅಂತಾ ಬ್ರಿಟಿಷರಿಗೆ ಬರೆದುಕೊಟ್ಟು ಬಂದವರ ಸಂತತಿಯೇ ಈ ಬಿಜೆಪಿಯದು ಹರಿಹಾಯ್ದರು.

ನಾವು ಡಿ.ಕೆ. ಸುರೇಶ್ ಹೇಳಿಕೆ ಸಮರ್ಥನೆ ಮಾಡಲ್ಲ, ದೇಶ ಒಗ್ಗಟ್ಟಿಗೋಸ್ಕರ ನಮ್ಮ ಕಾಂಗ್ರೆಸ್ ಮುಖಂಡರು ತ್ಯಾಗ, ಬಲಿದಾನ ಮಾಡಿದ್ದಾರೆ. ಅದು ಉಳಿಯಬೇಕು, ವ್ಯರ್ಥ ಆಗಬಾರದು. ದೇಶದ ಒಗ್ಗಟ್ಟಿಗೆ ಕೇಡು ಮಾಡುವ ಮಾತು ಯಾರೇ ಆಡಿದರೂ ಅದನ್ನು ನಾವು ಖಂಡಿಸುತ್ತೇವೆ ಎಂದರು.

ಅಹಿಂದ ನಾಯಕರು ಮೀಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಹಿಂದ ನಾಯಕರ ಮೀಟಿಂಗ್‌ಗೆ ನಾನೂ ಹೋಗಬೇಕಿತ್ತು. ಆದರೆ ಹೋಗೋಕಾಗಲಿಲ್ಲ, ನಾವು ಅಹಿಂದ ನಾಯಕರಲ್ಲ, ಜನನಾಯಕರು. 

ಎಲ್ಲಾ ವರ್ಗದ ಜನರ ಮತ ಪಡೆದು ಆಯ್ಕೆಯಾಗಿದ್ದೇವೆ. ಪಕ್ಷವನ್ನು ಹೆಚ್ಚು ಬಲ ಪಡಿಸಲು ಮೀಟಿಂಗ್ ಸೇರಿರ್ತೀವಿ ಅಷ್ಟೇ. ಮೀಟಿಂಗ್ ಮಾಡೋದು, ಪಕ್ಷದ ಸತ್ವ ಕಡಿಮೆ ಮಾಡಲು ಅಲ್ಲ ಎಂದರು.

ಡಿಸಿಎಂ ಹುದ್ದೆ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆ ಗೊಂದಲ ಬೇಡ. ಆ ಬಗ್ಗೆ ಮಾತಾಡಬೇಡಿ ಎಂದು ಅಧ್ಯಕ್ಷರು ಸೂಚನೆ ಕೊಟ್ಟಿದಾರೆ, ನಾನು ಮಾತಾಡಲ್ಲ, ಅಧ್ಯಕ್ಷರ ಮಾತಿಗೆ ಮನ್ನಣೆ ನೀಡಿ ನಾನು ಮಾತಾಡಲ್ಲ, ಚುನಾವಣೆ ಬಳಿಕ ನೋಡೋಣ ಎಂದರು.

ಐವರು ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಶಿವಕುಮಾರ್ ಸ್ವಾಮೀಜಿ ಅನ್ನ ದಾಸೋಹ, ಬಡ ಮಕ್ಕಳಿಗೆ ವಿದ್ಯೆ ನೀಡಿದವರು. 

ಅವರಿಗೆ ಭಾರತ ರತ್ನ ಕೊಡಬೇಕು ಎಂದು ಮೊದಲಿನಿಂದಲೂ ನಮ್ಮ ಒತ್ತಾಯ ಇದೆ. ಈಗ ಐವರಿಗೆ ಪ್ರಶಸ್ತಿ ಕೊಟ್ಟಿದ್ದಾರೆ. ಇಷ್ಟು ವರ್ಷ ಏಕೆ ಕೊಡಲಿಲ್ಲ, ಲೋಕಸಭಾ ಚುನಾವಣೆ ಬಂದಿದೆ ಎಂದು ಕೊಟ್ಟಿದ್ದಾರೆ ಎಂದರು.