ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಳವಳ್ಳಿ ಟೀಮ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಂದಿನ ಆಗಸ್ಟ್ 15ರಂದು ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಐತಿಹಾಸಿಕ ರಕ್ತದಾನ ಶಿಬಿರ ಯಶಸ್ವಿಯಾಗಲಿ ಎಂದು ಚಿತ್ರನಟ ರಕ್ಷಕ್ ಬುಲೆಟ್ ಆಶಿಸಿದರು.

ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ರಕ್ತದಾನ ಶಿಬಿರದ ಪ್ರಚಾರದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರರಿಗೆ ಮತ್ತು ದೇಶ ಕಾಯುವ ಯೋಧರಿಗೆ ಗೌರವ ಅರ್ಪಿಸುವ ಹಿನ್ನೆಲೆಯಲ್ಲಿ 26 ಗಂಟೆಗಳ ಕಾಲ ರಕ್ತಸಂಗ್ರಹ ಮಾಡುವ ಟಾರ್ಗೆಟ್ ಹಾಕಿಕೊಂಡು ನಡೆಸುತ್ತಿರುವ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಸಾವಿರಾರು ಜನರ ಪ್ರಾಣ ಉಳಿಸಲು ನೆರವಾಗಬೇಕೆಂದು ಮನವಿ ಮಾಡಿದರು.

ರಕ್ತದಾನ ಶಿಬಿರದ ಸ್ವಯಂ ಸೇವಕ ಮಹೇಶ್‌ಕುಮಾರ್ ಮಾತನಾಡಿ, ಮಳವಳ್ಳಿ ತಾಲೂಕು ರಕ್ತದಾನ ಶಿಬಿರ ನಡೆಸುವುದರಲ್ಲಿ ರಾಜ್ಯದಲ್ಲಿಯೇ ಮಾದರಿ ಎನ್ನುವ ಹೆಸರು ಪಡೆದಿದೆ. ಯುವಕ ಮಿತ್ರರು, ಹಿರಿಯ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಸಹಯೋಗದಲ್ಲಿ ಜಾತಿ, ಧರ್ಮ, ಪಕ್ಷ ಎಲ್ಲಾವನ್ನು ಮೀರಿ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. 2026ರ ವರ್ಷದ ನೆನೆಪಿನಲ್ಲಿ 2026 ಯೂನಿಟ್ ರಕ್ತ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಈ ಸಾಧನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದರು.

ಶಿಬಿರಕ್ಕೆ ಮಂಡ್ಯ ಮಿಮ್ಸ್, ಬೆಂಗಳೂರಿನ ಕಿದ್ವಾಯಿ, ಮೈಸೂರಿನ ಕೆಆರ್ ಆಸ್ಪತ್ರೆ, ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಸಂಗ್ರಹಿಸುವ ರಕ್ತದ ಯೂನಿಟ್‌ಗಳನ್ನು ನೀಡಲು ಚಿಂತನೆ ನಡೆಸಲಾಗಿದೆ. ಹೆಚ್ಚು ಪ್ರಚಾರಗೊಳಿಸುವ ಹಿನ್ನೆಲೆಯಲ್ಲಿ ವಿಶೇಷವಾಗಿ ಪ್ರಚಾರದ ಲೋಗೋ ಬಿಡುಗಡೆಗಳಿಸಲಾಗಿದೆ. ಡೀಸಿ, ಎಸ್ಪಿ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು, ಸಾರ್ವಜನಿಕರು, ಯುವಕರು ರಕ್ತದಾನ ಶಿಬಿರ ಯಶಸ್ವಿಗೆ ಕೈಜೋಡಿಸಲಿದ್ದಾರೆ ಎಂದರು.


ಹೊರ ಜಿಲ್ಲೆ ಮತ್ತು ರಾಜ್ಯಗಳಿಗೂ ಹೆಚ್ಚಿನ ಪ್ರಚಾರಗೊಳಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣವನ್ನು ಸಂಪೂರ್ಣ ಬಳಸಿಕೊಳ್ಳಲಾಗುವುದು. ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಬಿರಕ್ಕೆ ಭಾಗವಹಿಸುವಂತೆ ಮಾನವಿ ಮಾಡಿಕೊಳ್ಳಲಾಗುವುದು. ಹೋಬಳಿ ಮಟ್ಟದ ಸಭೆ ನಡೆಸಿ ಪ್ರತಿಯೊಂದು ಗ್ರಾಮದ ಯುವಕರು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಶ್ರಮಿಸಲಾಗುವುದು ಎಂದರು.

ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಯುವಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಸಲಹೆ ಸಹಕಾರವನ್ನು ನೀಡಿದರು.