ಪುಸ್ತಕ ಸಂಸ್ಕೃತಿ ಬೆಳೆಯಲಿ: ಡಾ. ಬಸವಲಿಂಗ ಪಟ್ಟದೇವರು

| Published : Feb 14 2024, 02:16 AM IST

ಪುಸ್ತಕ ಸಂಸ್ಕೃತಿ ಬೆಳೆಯಲಿ: ಡಾ. ಬಸವಲಿಂಗ ಪಟ್ಟದೇವರು
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಹೆಚ್ಚಾಗಿ ಸಾಹಿತ್ಯಿಕ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು.

ಕನ್ನಡಪ್ರಭ ವಾರ್ತೆ ಯಾದಗಿರಿ

ಇಂದಿನ ಯುವಜನರು ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ಸಾಹಿತ್ಯಿಕ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ವತಿಯಿಂದ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವಕ್ಕೆ ಭಾಜನರಾದ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಅವರ ಅಭಿನಂದನೆ ಸಮಾರಂಭ, ಪುಸ್ತಕಗಳ ಬಿಡುಗಡೆ, ಯುವ ಸಾಧಕರಿಗೆ ಸಗರನಾಡು ಯುವಚೇತನ ಪ್ರಶಸ್ತಿ ಪ್ರಧಾನ ಸಮಾರಂಭ, ಚಿತ್ರ ಕಲೆ ಹಾಗೂ ವಿಶಿಷ್ಟ ಕಲಾಕೃತಿಗಳು ಹಾಗೂ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಸರಕಾರ ಇಂದು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸ್ವಾಗತರ್ಹ. ಯುವಜನರು ಶರಣ ತತ್ವ, ವಚನ ಸಾಹಿತ್ಯ, ಬಸವ ಪರಂಪರೆ ಅಧ್ಯಯನ ಮಾಡಬೇಕು. ಅದರೊಂದಿಗೆ ಹೆಚ್ಚು ಹೆಚ್ಚಾಗಿ ಸಾಹಿತ್ಯ, ಸಂಸ್ಕೃತಿ, ಕಲೆ, ಪರಂಪರೆ ಇವುಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಳೆದ ಹಲವು ದಶಕಗಳ ಬಸವತತ್ವ ಪ್ರಸಾರದ ಕಾರ್ಯದಲ್ಲಿ ತೊಡಗಿರುವ ಭಾಲ್ಕಿ ಹಿರೆಮಠದ ಕಾಯಕವನ್ನು ಗುರುತಿಸಿ ಹಂಪಿ ವಿಶ್ವವಿಧ್ಯಾಲಯ ನಾಡೋಜ ಗೌರವನೀಡಿ ಗೌರವಿಸಿದೆ. ಆ ಪ್ರಯುಕ್ತ ಯಾದಗಿರಿ ಜಿಲ್ಲೆಯ ಎಲ್ಲಾ ಆತ್ಮಿಯ ಬಳಗ ಪ್ರೀತಿ ವಿಶ್ವಾಸ ತೋರಿ ಗೌರವಿಸುತ್ತಿರುವುದಕ್ಕೆ ಭಾಲ್ಕಿ ಹಿರೇಮಠ ಅಭಿನಂದಿಸುತ್ತದೆ ಎಂದು ಹೇಳಿದರು.

ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಕರ್ನಾಟಕ ಬಸವ ಪರಂಪರೆಯ ಎಲ್ಲಾ ಮಠಗಳಿಗೆ ಭಾಲ್ಕಿ ಹಿರೇಮಠ ಮಾದರಿಯಾಗಿ ನಿಲ್ಲಬಲ್ಲದು. ಭಾಲ್ಕಿಯ ಪೂಜ್ಯರು ಬಸವತತ್ವದ ಜೊತೆಗೆ ಶಿಕ್ಷಣ, ದಾಸೋಹ, ಅಕ್ಷರ ಪರಂಪರೆ ಬೆಳೆಸುತ್ತಿದ್ದಾರೆ. ಪೂಜ್ಯರು ಯಾದಗಿರಿ ಜಿಲ್ಲೆಗೆ ಆಗಮಿಸಿ ಅತಿಥ್ಯ ಸ್ವಿಕರಿಸುತ್ತಿರುವುದು ಜಿಲ್ಲೆಯ ಬಸವ ಬಳಗಕ್ಕೆ ಹೆಚ್ಚು ಖುಷಿತಂದಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾಕಾಲ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು, ಇದುವರೆಗೂ 38 ಪುಸ್ತಕಗಳನ್ನು ಪ್ರಕಟಿಸಿ ಬಿಡುಗಡೆಗೋಳಿಸಿದೆ ಎಂದು ಹೇಳಿದರು.

ಲೇಖಕಿ ಡಾ. ಉಮಾದೇವಿ.ಆರ್.ಮಟ್ಟಿ ಅವರ “ತ್ರೀವೆಣಿಯವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು” ಕೃತಿಯ ಕುರಿತು, ಲೇಖಕಿ ಡಾ. ಜಯದೇವಿ ಗಾಯಕವಾಡ ಇನ್ನೊಂದು ಕೃತಿ ಡಾ. ಪದ್ಮಾಕರ್ ಅಶೋಕಕುಮಾರ ಮಟ್ಟಿರವರ “ಯಶವಂತ ಚಿತ್ತಾಲರ ಕಥೆಯಾದಳು ಹುಡಗಿ” ಕೃತಿಯ ಕುರಿತು ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ್ ಮಾತನಾಡಿದರು.

ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು, ಲೇಖಕರಾದ ಡಾ. ಅಶೋಕ ಮಟ್ಟಿ, ಡಾ. ಉಮಾದೇವಿ ಮಟ್ಟಿ ಪಾಲ್ಗೊಂಡಿದ್ದರು. ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ: ವಿವಿಧ ಕ್ಷೇತ್ರದ ಸೇವೆಯಲ್ಲಿ ತೊಡಗಿರುವ ಯುವ ಸಾಧಕರಾದ ಡಾ. ಸಂತೋಷ ನವಲಗುಂದ ಮಳ್ಳಿ, ಡಾ. ಸಂತೋಷ ಕುಮಾರ ಎಸ್. ಕಂಬಾರ, ಮಲ್ಲಿಕಾರ್ಜುನ ಅರಣಿ ಗಾಜರಕೋಟ, ಮಾಳಪ್ಪ ಯಾದವ ಕಾಡಂಗೇರಾ, ಶಿವರೆಡ್ಡಿ ಅರಿಕೇರಾ ಬಿ., ಪ್ರಕಾಶ ವಜ್ಜಲ್ ಮಾರಲಭಾವಿ, ದೇವಿಂದ್ರಪ್ಪ ಧೋತ್ರೆ ಕಿಲ್ಲನಕೇರಿ, ಮಲ್ಲಿಕಾರ್ಜುನ ಕೋಟಿಗೇರಾ, ಶ್ರೀಕಾಂತ ವಿಶ್ವಕರ್ಮ, ಬಸಪ್ಪ ಕುಪ್ಪಿ ಇವರುಗಳಿಗೆ ಸಗರನಾಡು ಯುವಚೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜತೆಗೆ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಮಟ್ಟದ ಲಕ್ಷ್ಮಮ್ಮ ನಾಗೇಗೌಡ ಜಾನಪದ ದತ್ತಿ ಪ್ರಶಸ್ತಿ ಪುರಸ್ಕ್ರತರಾದ, ಭಾಗಿರತಿ ಸಂಗಣ್ಣ ದೊರನಹಳ್ಳಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಗುರುಪ್ರಸಾದ ವೈಧ್ಯ ನಿರೂಪಿಸಿದರು. ದಾವಲಸಾಬ ಅತ್ತಾರ ಪ್ರಾರ್ಥಿಸಿದರು. ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ಶ್ರೀಕಾಂತ ರತ್ತಳ ವಂದಿಸಿದರು. ಪ್ರಮುಖರಾದ ಡಾ. ಸುಭಾಶ್ಚಂದ್ರ ಕೌಲಗಿ, ಡಾ. ಭೀಮರಾಯ ಲಿಂಗೇರಿ, ಅಯ್ಯಣ್ಣ ಹುಂಡೇಕಾರ, ಬಸವಂತರಾಯಗೌಡ ಪಾಟೀಲ್, ನಾಗೇಂದ್ರ ಜಾಜಿ, ಚನ್ನಪ್ಪ ಠಾಣಗುಂದಿ, ನಬಿಲಾಲ ಮಖಾಂದಾರ, ಶಿವಶರಣಪ್ಪ ಹೆಡಿಗಿನಾಳ, ದೇವರಾಜ ವರಕನಳ್ಳಿ, ಅಂಬ್ರೇಶ ಹಸಮಕಲ್, ಮಲ್ಲು ಬಾದ್ಯಾಪುರ, ಶಿವು ಬಳಿಚಕ್ರ ಸೇರಿದಂತೆ ಇತರರಿದ್ದರು.