ಅತೀ ವೇಗ, ನಿರ್ಲಕ್ಷ್ಯದಿಂದ ಕ್ರೂಸರ್‌ ಓಡಿಸಿ ಲಾರಿಗೆ ಗುದ್ದಿದ ಪರಿಣಾಮ 7 ಜನ ಸ್ನೇಹಿತರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ರಾಷ್ಟ್ರೀಯ ಹೆದ್ದಾರಿ ೫೨ರಲ್ಲಿ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಆರತಿಬೈಲ್‌ ಘಟ್ಟದ ಬಳಗಾರ ಕ್ರಾಸ್ ಬಳಿ ಗುರುವಾರ ನಸುಕಿನ 1.30 ಗಂಟೆಯಲ್ಲಿ ನಡೆದಿದೆ.

ಯಲ್ಲಾಪುರ : ಅತೀ ವೇಗ, ನಿರ್ಲಕ್ಷ್ಯದಿಂದ ಕ್ರೂಸರ್‌ ಓಡಿಸಿ ಲಾರಿಗೆ ಗುದ್ದಿದ ಪರಿಣಾಮ 7 ಜನ ಸ್ನೇಹಿತರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ರಾಷ್ಟ್ರೀಯ ಹೆದ್ದಾರಿ ೫೨ರಲ್ಲಿ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಆರತಿಬೈಲ್‌ ಘಟ್ಟದ ಬಳಗಾರ ಕ್ರಾಸ್ ಬಳಿ ಗುರುವಾರ ನಸುಕಿನ 1.30 ಗಂಟೆಯಲ್ಲಿ ನಡೆದಿದೆ. ಕ್ರೂಸರ್‌ನಲ್ಲಿದ್ದವರು ಧಾರವಾಡದವರಾಗಿದ್ದು, ಎಲ್ಲರೂ ಸ್ನೆಹಿತರಾಗಿದ್ದರು.

ಬಸವರಾಜ ಕನಕನವರ (೪೮), ಅಭಿಷೇಕ ಈಶ್ವರ (೨೮), ಅಕ್ಷಯ (೨೬), ಅಭಿಷೇಕ (೨೬), ಸಂಜಯ ಅಂಗಡಿ (೩೮) ಹಾಗೂ ಮಂಜುನಾಥ ಅಶೋಕ ಚುಳಕಿ (೩೩), ಸಚಿನ್‌ (26) ಮೃತರು.

ಪ್ರವಾಸಕ್ಕೆ ಕ್ರೂಸರ್‌ನಲ್ಲಿ ಹೊರಟಿದ್ದರು

9 ಜನ ಗೆಳೆಯರು ಒಟ್ಟಾಗಿ ಗೋಕರ್ಣ, ಧರ್ಮಸ್ಥಳ, ಕೊಲ್ಲೂರು ಪ್ರವಾಸಕ್ಕೆ ಕ್ರೂಸರ್‌ನಲ್ಲಿ ಹೊರಟಿದ್ದರು. ಆರತಿಬೈಲ್ ಘಟ್ಟದ ಬಳಗಾರ ಕ್ರಾಸ್ ಬಳಿ ಎದುರಿನಿಂದ ಬಂದ ಲಾರಿಗೆ ಕ್ರೂಸರ್‌ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಐದು ಜನ ಮೃತಪಟ್ಟಿದ್ದಾರೆ. ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಮಂಜುನಾಥ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸಚಿನ್ ಸಾವನ್ನಪ್ಪಿದ್ದಾರೆ.

ನರಗುಂದದ ತುಪ್ಪದಕುರಹಟ್ಟಿ ಮೂಲದ ಹಾಲಿ ಧಾರವಾಡದ ನಿವಾಸಿ ಶಿವರಾಜ ಗುರಪ್ಪ ಮಡಿವಾಳರ (೨೨), ಕಲಘಟಗಿ ರೋಡ್‌ನ ಚನ್ನಬಸು ಬಸಲಿಂಗಯ್ಯ ಸಂಪಗಾಂವಿಮಠ (೨೮) ಗಾಯಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ಚಾಲಕನ ನಿರ್ಲಕ್ಷ್ಯದಿಂದ ಅವಘಡ:

ಕ್ರೂಸರ್‌ ವಾಹನ ಚಲಾಯಿಸುತ್ತಿದ್ದ ಸಂಜಯ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇವರು ಅತೀ ವೇಗ, ನಿರ್ಲಕ್ಷ್ಯದಿಂದ ವಾಹವನ್ನು ಸಂಪೂರ್ಣವಾಗಿ ಬಲ ಬದಿಯಲ್ಲಿಯೇ ಓಡಿಸುತ್ತಿದ್ದರು. ಇದರಿಂದಾಗಿ ವಾಹನವು ಅಂಕೋಲಾದಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್‌ ನೀಡಿದ ದೂರಿನ ಮೇರೆಗೆ ಯಲ್ಲಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ದೀಪನ್, ಡಿವೈಎಸ್ಪಿ ಗೀತಾ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಶಾಸಕ ಶಿವರಾಮ ಹೆಬ್ಬಾರ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿದರು. ಅಲ್ಲದೆ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಈ ದುರ್ಘಟನೆಯಿಂದ ಉಂಟಾದ ನೋವಿನಲ್ಲಿ ತಾವು ಸಹ ಭಾಗಿಯಾಗಿರುವುದಾಗಿ ತಿಳಿಸಿದರು.