ಪತ್ತಿನ ಸಹಕಾರ ಸಂಘ ಶಿಕ್ಷಕರ ಸಂಕಷ್ಟಗಳಿಗೆ ನೆರವಾಗಲಿ: ಶಾಸಕ ಶರತ್ ಬಚ್ಚೇಗೌಡ ಸಲಹೆ

| Published : Jan 10 2025, 12:48 AM IST

ಪತ್ತಿನ ಸಹಕಾರ ಸಂಘ ಶಿಕ್ಷಕರ ಸಂಕಷ್ಟಗಳಿಗೆ ನೆರವಾಗಲಿ: ಶಾಸಕ ಶರತ್ ಬಚ್ಚೇಗೌಡ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಳೆದ ಮೂರು ವರ್ಷಗಳ ಹಿಂದೆ ಈ ಸಂಘ ಸ್ಥಾಪಿಸಿದ್ದು 523 ಸದಸ್ಯರನ್ನೊಳಗೊಂಡಿದೆ. ಸುಮಾರು 49 ಲಕ್ಷ ಠೇವಣಿ ಇರಿಸಲಾಗಿದೆ, ಪ್ರತಿ ವರ್ಷ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಸಂಘದ ಸದಸ್ಯತ್ವ ಪಡೆಯಬೇಕು. ಪ್ರಸಕ್ತ 2025- 26ನೇ ಸಾಲಿನಲ್ಲಿ ಗರಿಷ್ಠ ೧ ಕೋಟಿ ರು. ಠೇವಣಿ ಸಂಗ್ರಹದ ಗುರಿ ಹೊಂದಿದ್ದೇವೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಸಂಕಷ್ಟಗಳು ಪ್ರತಿಯೊಬ್ಬರಿಗೂ ಬರುವುದರಿಂದ ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘ ಶಿಕ್ಷಕರ ಸಂಕಷ್ಟಗಳಿಗೆ ನೆರವಾಗುವುದರ ಮೂಲಕ ಉನ್ನತ ಮಟ್ಟಕ್ಕೆ ದಾಪುಗಾಲಿಡಲಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಟಿಜಿ ಬಡಾವಣೆಯ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಇಲಾಖೆ ನೌಕರರು ಒಗ್ಗಟ್ಟಾಗಿ ಪತ್ತಿನ ಸಹಕಾರ ಸಂಘ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಎಲ್ಲಾ ಸರ್ಕಾರಿ ಇಲಾಖೆಯ ನೌಕರರು ಈ ಸಂಘದ ಪ್ರಯೋಜನ ಪಡೆಯಬಹುದು. ಸಂಘದ ಸದಸ್ಯರ ಕುಟುಂಬದವರು ಆರೋಗ್ಯ ವಿಮೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಸಂಘದಲ್ಲಿ ಪ್ರತಿಯೊಬ್ಬ ಶಿಕ್ಷಕರು ಸದಸ್ಯತ್ವ ಪಡೆಯುವ ಮೂಲಕ ಆರ್ಥಿಕ ವಹಿವಾಟು ವೃದ್ಧಿಸುವಂತೆ ಮಾಡಬೇಕು. ಆಗ ಮಾತ್ರ ಸಂಘ ಲಾಭಾಂಶದತ್ತ ಸಾಗಿ, ಸಾಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯ ಎಂದರು.

ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಂ ಮುನಿರಾಜ್ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ಈ ಸಂಘ ಸ್ಥಾಪಿಸಿದ್ದು 523 ಸದಸ್ಯರನ್ನೊಳಗೊಂಡಿದೆ. ಸುಮಾರು 49 ಲಕ್ಷ ಠೇವಣಿ ಇರಿಸಲಾಗಿದೆ, ಪ್ರತಿ ವರ್ಷ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಸಂಘದ ಸದಸ್ಯತ್ವ ಪಡೆಯಬೇಕು. ಪ್ರಸಕ್ತ 2025- 26ನೇ ಸಾಲಿನಲ್ಲಿ ಗರಿಷ್ಠ ೧ ಕೋಟಿ ರು. ಠೇವಣಿ ಸಂಗ್ರಹದ ಗುರಿ ಹೊಂದಿದ್ದೇವೆ ಎಂದರು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್‌ ಮೂರ್ತಿ, ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರ್‌ಗೌಡ, ಮುಖಂಡರಾದ ಬಿ.ವಿ ಬೈರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಮುನಿಶಾಮಯ್ಯ, ಸರ್ಕಾರಿ ನೌಕರರ ಪತ್ತಿನ ಸಂಘದ ಉಪಾಧ್ಯಕ್ಷ ಶಂಕರಪ್ಪ ಸೇರಿ ಹಲವಾರು ಮುಖಂಡರು ಹಾಜರಿದ್ದರು.