ಕಾಂಗ್ರೆಸ್ ಸರ್ಕಾರ ಜನತೆ ಕ್ಷಮೆ ಕೇಳಲಿ: ಮಾಜಿ ಡಿಸಿಎಂ ಕಾರಜೋಳ

| Published : Jan 31 2024, 02:19 AM IST

ಸಾರಾಂಶ

ಲೋಕಾಪುರ: ಬಿಜೆಪಿ ಸರ್ಕಾರದಲ್ಲಿ ಶೇ.೪೦ರಷ್ಟು ಕಮಿಷನ್ ಕುರಿತು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 8 ತಿಂಗಳಾದರೂ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್‌ ಕರ್ನಾಟಕ ಜನತೆಯ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗ್ರಹಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ೨೦೧೩ ರಿಂದ ೨೦೨೩ರವರೆಗೆ ನಡೆದ ಭ್ರಷ್ಟಾಚಾರ ಆರೋಪದ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಬಿಜೆಪಿ ಸರ್ಕಾರದಲ್ಲಿ ಶೇ.೪೦ರಷ್ಟು ಕಮಿಷನ್ ಕುರಿತು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 8 ತಿಂಗಳಾದರೂ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್‌ ಕರ್ನಾಟಕ ಜನತೆಯ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗ್ರಹಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ೨೦೧೩ ರಿಂದ ೨೦೨೩ರವರೆಗೆ ನಡೆದ ಭ್ರಷ್ಟಾಚಾರ ಆರೋಪದ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬರ ಬಂದಿದ್ದು, ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ ರೈತರಿಗೆ ಮೇವು ಬ್ಯಾಂಕ್‌, ಗೋಶಾಲೆ ತೆರೆಯದೇ ಖಾಲಿ ಕೈಯಲ್ಲಿ ಕುಳಿತ ಕೃಷಿಕರಿಗೆ ಉದ್ಯೋಗ ಸೃಷ್ಟಿಸದೇ ಅನ್ಯಾಯ ಮಾಡುತ್ತಿದೆ. ಇದರಿಂದ ರೈತರು, ಕೃಷಿ ಕಾರ್ಮಿಕರು ಅನ್ನಕ್ಕಾಗಿ ಗುಳೆ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ನಮ್ಮ ಸರ್ಕಾರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಕಾಮಗಾರಿ ಪ್ರಾರಂಭಿಸಿದ್ದೆವು. ಆದರೆ ಈವರೆಗೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕಮಿಷನ್ ಕೊಟ್ಟವರಿಗೆ ಮಾತ್ರ ಕಾಮಗಾರಿಗೆ ಬಿಲ್‌ ಮಾಡುವ ಕಾರ್ಯ ಮಾಡುತ್ತಿದೆ. ಇಂತಹ ಸರ್ಕಾರ ಸ್ವಾತಂತ್ರ್ಯ ನಂತರ ಇದೇ ಮೊದಲು ಬಾರಿ ನೋಡುತ್ತಿದ್ದೇವೆ. ಜನತೆ ಕಾಂಗ್ರೆಸ್‌ ಸರ್ಕಾರ ವಿರುದ್ಧ ಬೇಸತ್ತು ಹೋಗಿದ್ದಾರೆ ಎಂದು ಆಪಾದಿಸಿದರು.

ಐದು ಗ್ಯಾರಂಟಿಗಳಲ್ಲಿ ಹಲವಾರು ಜನರು ಅವಕಾಶ ವಂಚಿತರಾಗಿದ್ದು, ಶೇ.100ರಷ್ಟು ನಿರುದ್ಯೋಗಿ ಪದವೀಧರರಿಗೆ ಹಾಗೂ ಮಹಿಳೆಯರಿಗೆ ಯುವನಿಧಿ ಹಾಗೂ ಗೃಹಲಕ್ಷ್ಮೀ ಭಾಗ್ಯ ನೀಡಬೇಕು ಎಂದು ಆಗ್ರಹಿಸಿದರು. ನಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನಮ್ಮದೆಂದು ಉದ್ಘಾಟನೆ, ಅಡಿಗಲ್ಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಈ ವೇಳೆ ಕೆ.ಆರ್. ಮಾಚಪ್ಪನವರ, ಹಣಮಂತ ತುಳಸಿಗೇರಿ, ಲೋಕಣ್ಣ ಕತ್ತಿ, ನಾಗಪ್ಪ ಅಂಬಿ, ಸೋನಪ್ಪಿ ಕುಲಕರ್ಣಿ, ರಾಜು ಯಡಹಳ್ಳಿ ಇತರರು ಇದ್ದರು.