ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಒತ್ತು ನೀಡಬೇಕು. ಪರಿಸರವೇ ನಮ್ಮ ಬದುಕಿನ ಭಾಗವಾಗಬೇಕು.

ಬೀಜದ ಉಂಡೆ ತಯಾರಿಸಿ ಗುಡ್ಡದಲ್ಲಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಒತ್ತು ನೀಡಬೇಕು. ಪರಿಸರವೇ ನಮ್ಮ ಬದುಕಿನ ಭಾಗವಾಗಬೇಕು ಎಂದು ಎಂಎಸ್‌ಪಿಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ನರೇಂದ್ರಕುಮಾರ ಬಲ್ಡೋಟ ಹೇಳಿದರು.

ಪತಂಜಲಿ ಯೋಗ ಸಮಿತಿಯಿಂದ ಬಲ್ಡೋಟ ಪಾರ್ಕ್‌ನಲ್ಲಿ ಶನಿವಾರ ಆಯೋಜಿಸಿದ್ದ ಬೀಜದ ಉಂಡೆ ತಯಾರಿಸಿ ಜೋಳದರಾಶಿ ಗುಡ್ಡದಲ್ಲಿ ಹಾಕುವ (ಬೀಜ ಸಿಂಪರಣೆ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪತಂಜಲಿ ಯೋಗ ಸಮಿತಿಯು ಹೊಸಪೇಟೆಯಲ್ಲಿ ಉತ್ತಮ ಕಾರ್ಯಯಕ್ರಮ ಕೈಗೊಳ್ಳುವುದರ ಜೊತೆಗೆ ಯೋಗ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಬರುತ್ತಿದ್ದು, ನಗರದ ನಾಗರಿಕರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖಪಾತ್ರ ವಹಿಸುತ್ತಿದೆ. ಪರಿಸರ ಕುರಿತು ಅರಿವು ಮೂಡಿಸುತ್ತಿದೆ. ಎಂಎಸ್‌ಪಿಎಲ್‌ ಸಂಸ್ಥೆ ಹೊಸಪೇಟೆ, ಕೊಪ್ಪಳ, ಸುತ್ತಮುತ್ತಲ ಪ್ರದೇಶಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಪೋಷಿಸಿಕೊಂಡು ಬರುತ್ತಿದೆ. ನಗರದಲ್ಲಿ ತಾಪಮಾನ ಕಡಿಮೆಯಾಗಿದೆ, ಆದಾಗ್ಯೂ ಮತ್ತಷ್ಟು ಗಿಡನೆಡುವ ಅವಶ್ಯಕತೆ ಇದೆ ಎಂದರು.

ಪತಂಜಲಿ ಯೋಗ ಸಮಿತಿ ಹತ್ತು ಸಾವಿರಕ್ಕೂ ಹೆಚ್ಚು ಬೀಜ ಉಂಡೆಗಳನ್ನು ತಯಾರಿಸಿ ಜೋಳದರಾಶಿ ಗುಡ್ಡದಲ್ಲಿ ಹಾಕುವುದರ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಬೀಜದ ಉಂಡೆಗಳು ಮಳೆ ಬಂದಾಗ ಮೊಳಕೆಯೊಡೆದು ಹುಟ್ಟುತ್ತವೆ, ಇದರಿಂದ ಸಸಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಪರಿಸರವಾದಿ ಪ್ರಭಾಕರ, ಬಲ್ಡೋಟ ಪಾರ್ಕ್‌ ಪತಂಜಲಿ ಯೋಗ ಸಮಿತಿ ಸಂಚಾಲಕರು ಮತ್ತು ಯೋಗಮಿತ್ರ ಶ್ರೀನಿವಾಸ ಮಂಚಿಕಂಟಿ ಮಾತನಾಡಿದರು.

ಮುಖಂಡರಾದ ಭೂಪಾಳ ರಾಘವೇಂದ್ರ ಶೆಟ್ಟರು, ಗೊಗ್ಗ ಚನ್ನಬಸವರಾಜ, ಅಶ್ವಿನ್‌ ಕೊತಂಬರಿ, ಕಾಕುಬಾಳ್ ರಾಜೇಂದ್ರ, ಸಾಲಿ ಬಸವರಾಜ್, ಕಿರಣ ಕುಮಾರ್, ಅನಂತ ಜೋಶಿ ಮತ್ತು ಪತಂಜಲಿ ಯೋಗ ಪರಿವಾರದ ಸದಸ್ಯರು, ಸಾರ್ವಜನಿಕರು ಇದ್ದರು.