ಸೊಸೆ, ಮೊಮ್ಮಗನ ಜೀವನಕ್ಕೆ ಸರ್ಕಾರ ವ್ಯವಸ್ಥೆ ಮಾಡಲಿ

| Published : Jun 09 2025, 11:48 PM IST

ಸೊಸೆ, ಮೊಮ್ಮಗನ ಜೀವನಕ್ಕೆ ಸರ್ಕಾರ ವ್ಯವಸ್ಥೆ ಮಾಡಲಿ
Share this Article
  • FB
  • TW
  • Linkdin
  • Email

ಸಾರಾಂಶ

ದರ್ಶನ್ ಗ್ಯಾಂಗ್ ನಿಂದ ಹತ್ಯಗೊಳಗಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಹೇಳಿಕೆ । ಫಾಸ್ಟ್ ಟ್ರಾಕ್ ಕೋರ್ಟಗೆ ಪ್ರಕರಣ ವರ್ಗಾಯಿಸಲು ಮನವಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸೊಸೆ ಹಾಗೂ ಮೊಮ್ಮಗನ ಜೀವನಕ್ಕೆ ರಾಜ್ಯ ಸರ್ಕಾರ ಏನಾದರೂ ವ್ಯವಸ್ಥೆ ಮಾಡಲಿ. ಈ ಸಂಬಂಧ ಇದುವರೆಗೂ ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲವೆಂದು ನಟ ದರ್ಶನ್ ಗ್ಯಾಂಗ್ ನಿಂದ ಹತ್ಯಗೊಳಗಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಹೇಳಿದರು.

ರೇಣುಕಸ್ವಾಮಿ ಹತ್ಯೆಯಾಗಿ ಒಂದು ವರ್ಷ ಸಂದ ಹಿನ್ನಲೆ ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ರ ಶೋಕ ನಿರಂತರ ಎಂಬಂತೆ ನೋವು ಕಾಡುತ್ತಿದೆ. ಸರ್ಕಾರ, ಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ. ನಟ ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ನಮ್ಮನ್ನು ಸಂಪರ್ಕಿಸಿಲ್ಲ, ನಾವು ಯತ್ನಿಸಿಲ್ಲ. ಅಂಥ ಸಂದರ್ಭ ಬಂದರೆ ಸಮಾಜದ ಮುಖಂಡರು ನಿರ್ಧಾರಿಸುತ್ತಾರೆ. ಪುತ್ರನ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು. ನಮ್ಮ ಸೊಸೆಗೆ ಸರ್ಕಾರ ಕೆಲಸ ಕೊಡಲಾಗುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಮಾನವೀಯ ನೆಲೆಗಟ್ಟಿನಲ್ಲಿ ಸೊಸೆಗೆ ನೌಕರಿ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಮೊಮ್ಮಗನ ಆರೈಕೆ ಆಟ ಪಾಟದಲ್ಲಿ ನೋವು ಮರೆಯುತ್ತಿದ್ದೇವೆ. ಸರ್ಕಾರ ಭರವಸೆ ಕೊಟ್ಟಂತೆ ನಡೆದಿಲ್ಲ. ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸರ್ಕಾರ ಪ್ರಕರಣವನ್ನು ಪಾಸ್ಟ್ ಟ್ರಾಕ್ ಕೋರ್ಟಗೆ ನಿಯೋಜಿಸಿ ಶೀಘ್ರ ಇತ್ಯರ್ಥ ಪಡಿಸಬೇಕೆಂದು ಕಾಶಿನಾಥ ಶಿವನ ಗೌಡ ಆಗ್ರಹಿಸಿದ್ದಾರೆ.

ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮಾತನಾಡಿ, ಡಿ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆಯಾಗಿ ಒಂದು ವರ್ಷವಾಗಿದ್ದು ಆ ನೋವನ್ನು ಮರೆಯಲು ಇಂದಿಗೂ ಆಗುತ್ತಿಲ್ಲ. ಸರಕಾರ ನನ್ನ ಸೊಸೆಯ ಭವಿಷ್ಯಕ್ಕೆ ಒಂದು ಆಧಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಮಾತನಾಡಿ, ಕೊಲೆಯಾದ ದಿನದ ನಕ್ಷತ್ರ ಪ್ರಕಾರ ಆತ್ಮಶಾಂತಿಗೆ ಪೂಜೆ ಮಾಡಲಾಗಿದೆ. ಸಹನಾಗೆ 26 ವರ್ಷ, ಹಾಗಾಗಿ ನೌಕರಿ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ ಅಂದಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ನೀಡಬೇಕು. ಮಗುವನ್ನು ನೋಡಿದರೆ ನಮಗೆ ತುಂಬಾ ದುಃಖ ಅನಿಸುತ್ತೆ. ದೇಶದ ಕಾನೂನು ಇತಿಹಾಸದಲ್ಲಿ ಕೊಲೆ ಮಾಡಿದವರು ಯಾರೂ ಕಾನೂನಿಂದ ತಪ್ಪಿಸಿಕೊಂಡಿಲ್ಲ. ಹಾಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಅನ್ನೋ ಭರವಸೆ ಇದೆ ಎಂದರು. ರೇಣುಕಾಸ್ವಾಮಿ ಪತ್ನಿ ಸಹಾನ ಮಾತನಾಡಿ, ನಮ್ಮ ಯಜಮಾನರು ಕೊಲೆಯಾಗಿ ಒಂದು ವರ್ಷವಾಗಿದ್ದು ಸರ್ಕಾರ ನನ್ನ ಹಾಗೂ ಮಗುವಿನ ಭವಿಷ್ಯಕ್ಕೆ ನೆರವಾಗಬೇಕೆಂದು ಮನವಿ ಮಾಡಿದರು.