ಪ್ರತಿಯೊಬ್ಬ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸವಲತ್ತುಗಳು ತಲುಪಲಿ ಎಂದು ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಬಾಲಚಂದ್ರನ್ ಎಸ್. ಹೇಳಿದರು.
ಕೊಪ್ಪಳ: ಪ್ರತಿಯೊಬ್ಬ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸವಲತ್ತುಗಳು ತಲುಪಲಿ ಎಂದು ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಬಾಲಚಂದ್ರನ್ ಎಸ್. ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಯ ಸವಲತ್ತು ಎಲ್ಲರಿಗೂ ತಲುಪಿಸಬೇಕು. ಯುವ ನಿಧಿ ಸೌಲಭ್ಯ ಕುರಿತು ಇಲಾಖಾ ವತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ನಿರುದ್ಯೋಗ ಯುವಕರು ಯುವ ನಿಧಿ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಂತೆ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗೃಹಲಕ್ಷ್ಮೀ ಫಲಾನುಭವಿಗಳಿಗೆ ಜನವರಿ-2026ರ ವರೆಗೆ ಅನುದಾನ ಜಮೆಯಾಗಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಸಭೆಯಲ್ಲಿ ಗಮನಕ್ಕೆ ತಂದರು. ನಿಯಂತ್ರಣ ಫಲಕದಲ್ಲಿ ಮಾಹಿತಿಯು ಅಪ್ಡೇಟ್ ಆಗಿಲ್ಲ ಎಂದು ಸಭೆಗೆ ತಿಳಿಸಿದರು.ಐಟಿ, ಜಿಎಸ್ಟಿ ನೋಂದಣಿಯಾದ ಫಲಾನುಭವಿಗಳು ಸೌಲಭ್ಯ ಪಡೆಯಲು ಅನರ್ಹರಾಗಿರುತ್ತಾರೆ. ಒಮ್ಮೆ ನೋಂದಣಿಯಾದಲ್ಲಿ ಸೌಲಭ್ಯ ದೊರೆಯುವದಿಲ್ಲ ಎಂದರು. ಇದು ರಾಜ್ಯಮಟ್ಟದ ಸಮಸ್ಯೆಯಾಗಿರುವದರಿಂದ ಮುಖ್ಯಮಂತ್ರಿಗಳ ಗಮನಕ್ಕೆ ಇದೆ. ಇದನ್ನು ಮತ್ತೊಮ್ಮೆ ಜಿಲ್ಲಾ ಮಟ್ಟದ ಸಭೆಯ ಮೂಲಕ ರಾಜ್ಯಮಟ್ಟದ ಸಭೆಯ ಗಮನಕ್ಕೆ ತರಲಾಗುವದು ಎಂದು ಅಧ್ಯಕ್ಷ ಬಾಲಚಂದ್ರನ್ ಎಸ್ ತಿಳಿಸಿದರು.
ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ, ಮುಂಡರಗಿ ಫಲಾನುಭವಿಯೊಬ್ಬರಿಗೆ ಸೂಕ್ತ ದಾಖಲೆಗಳು ಇಲ್ಲದ ಪ್ರಯುಕ್ತ ಇದು ವರೆಗೆ ಅನುದಾನ ಬಂದಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ವಿವರಿಸಿದರು. ಅಧ್ಯಕ್ಷರು ಮಾತನಾಡಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮರಣ ಹೊಂದಿದಲ್ಲಿ ಅವರ ಖಾತೆಗೆ ಅನುದಾನ ಜಮೆಯಾಗುತ್ತದೆ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿ ಮರಣ ಹೊಂದಿದ ಬಗ್ಗೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ ವಿವರ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಗೃಹಜ್ಯೋತಿ ಯೋಜನೆಯ ಫಲಾನುಭವಿ ವಿವರವನ್ನು ಗ್ರಾಪಂವಾರು ಮಾಹಿತಿ ಸಲ್ಲಿಸುವಂತೆ ಅಧ್ಯಕ್ಷರು ಜೆಸ್ಕಾಂಗೆ ಸೂಚಿಸಿದರು.ಸದಸ್ಯರಾದ ದೇವರಾಜ ನಡುವಿನಮನಿ ಮಾತನಾಡಿ, ಕೊಪ್ಪಳ ನಗರದ 26ನೇ ವಾರ್ಡಿನ ಹೇಮರಡ್ಡಿ ಮಲ್ಲಮ್ಮನ ಗುಡಿ ಜಂಗಲ್ ಕಟಿಂಗ್ ,11 ಕೆವಿ ಮಾರ್ಗ ಬದಲಾವಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬಾಡಿಗೆ ಮನೆಯಲ್ಲಿ ವಾಸಿಸುವ ಫಲಾನುಭವಿಗಳು ಅದನ್ನು ಬಿಟ್ಟು ಹೋದಲ್ಲಿ ಡಿ-ಲಿಂಕ್ ಮೂಲಕ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಈ ಹಿಂದೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯನ್ನು ರದ್ದುಪಡಿಸಿ ಎಲ್ಟಿ-1 ಯೋಜನೆ ಮಾಡಲಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದರು.ಸದಸ್ಯರಾದ ಮಾನ್ವಿ ಪಾಶಾ ಮಾತನಾಡಿ, ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಮಾರ್ಗದಲ್ಲಿ ಜಂಗಲ್ ಕಟಿಂಗ್ ಹಾಗೂ ಇನ್ನಿತರ ದುರಸ್ಥಿ ಕಾರ್ಯನಿರ್ವಹಿಸಬೇಕು ಎಂದು ಜೆಸ್ಕಾಂಗೆ ತಿಳಿಸಿದರು.
ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ, ಪಡಿತರ ಧಾನ್ಯ ಕಳ್ಳ ಸಾಗಾಣಿಕೆ ಮಾಡಿದ ಬಗ್ಗೆ ಮಾಧ್ಯಮದಲ್ಲಿ ಬರುವ ಮೊದಲು ಇಲಾಖಾಧಿಕಾರಿಗಳು ಈ ಕುರಿತು ನಿಗಾವಹಿಸಬೇಕು ಎಂದರು. ಮುಂದಿನ ಸಭೆಯಲ್ಲಿ 7 ಗ್ಯಾಸ್ ಏಜೆನ್ಸಿ ಮಾಲೀಕರು ಹಾಜರಿರುವಂತೆ ತಿಳಿಸಿದರು.ಘಟಕ ವ್ಯವಸ್ಥಾಪಕರು ಮಾತನಾಡಿ, ಕೊಪ್ಪಳದಿಂದ ಬೀದರ್ ಗೆ ಪ್ರಯಾಣಿಸಲು ಸ್ಲೀಪರ್ ಕೊಚ್ ವಾಹನವನ್ನು ಪ್ರಾರಂಭಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿದರು.ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ ನಡುವಿನಮನಿ, ಜ್ಯೋತಿ ಗೊಂಡಬಾಳ, ಅನ್ವರ್ ಹುಸೇನ ಗಡಾದ, ಮಾನ್ವಿ ಪಾಶಾ, ಅನ್ನದಾನಯ್ಯಸ್ವಾಮಿ, ರಾಮಣ್ಣ ಚೌಡ್ಕಿ ಪಂಚ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು, ತಾಲೂಕ ಪಂಚಾಯಿತಿ ಸಿಬ್ಬಂದಿ ಇದ್ದರು.