ಸಾರಾಂಶ
ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಭೂತಾರಾಧನೆಯ ಒಳಗೆ ಕಲೆ ಇದೆ. ಅದನ್ನು ಹೆಕ್ಕಿ ತೆಗೆದು ರಂಗಕ್ಕೆ ತರುವ ಕೆಲಸ ಆಗಬೇಕು ಎಂದು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಆಶಿಸಿದರು.ಅವರು ಭಾನುವಾರ ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.ಅಮೃತ ಸೋಮೇಶ್ವರ ಅವರು ಭೂತಾರಾಧನೆಯ ಪಾಡ್ದನಗಳನ್ನು ಇಟ್ಟುಕೊಂಡು ರಂಗಪ್ರಯೋಗ ನಡೆಸಿದ್ದರು. ಅಂಥ ಪ್ರಯೋಗಗಳು ಅಂದಿನ ಆಧುನಿಕ ರಂಗಭೂಮಿಯಲ್ಲಿ ಹೆಚ್ಚಿಗೆ ಆಗಿಲ್ಲ. ಇದು ಜೇನು ಗೂಡಿಗೆ ಕೈ ಹಾಕುವ ಕೆಲಸ ಎಂದು ಗೊತ್ತು. ಆದರೆ ಸಂಪ್ರದಾಯಸ್ಥರು ಕೂಡ ಇದಕ್ಕೆ ಪ್ರೋತ್ಸಾಹವನ್ನು ನೀಡಬೇಕು. ಆಗ ಭೂತಾರಾಧನೆ ನಮ್ಮ ನಾಡಿನ, ನಮ್ಮ ದೇಶದ ಗಡಿ ದಾಟಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯವ್ಯಕ್ತಪಡಿಸಿದರು.ಭಾರತೀಯ ಆಧುನಿಕ ರಂಗಭೂಮಿ ಎಂದರೆ ಉತ್ತರ ಭಾರತದ ಕಡೆಗೆ ನೋಡಲಾಗುತ್ತಿತ್ತು. ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್ ಮುಂತಾದವರ ಪ್ರಯೋಗ, ಕುವೆಂಪು, ತೇಜಸ್ವಿ ಮುಂತಾದವರ ಬರಹಗಳು ರಂಗಭೂಮಿಗೆ ಬಂದು ಪ್ರಯೋಗಗಳಾಗುತ್ತಿರುವುದರಿಂದ ಈಗ ಕರ್ನಾಟಕದ ಕಡೆಗೆ ತಿರುಗಿ ನೋಡುವಂತಾಗಿದೆ. ಮೈಸೂರು ಮತ್ತು ಅವಿಭಜಿತ ದಕ್ಷಿಣ ಕನ್ನಡವು ಆಧುನಿಕ ರಂಗಭೂಮಿಯ ರಾಜಧಾನಿಯಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪ್ರತಿವಾರ ಕಾರ್ಯಕ್ರಮಗಳಾಗಬೇಕು ಎಂಬ ಕನಸು ಹೊತ್ತು ವಿ.ಎಸ್. ಆಚಾರ್ಯ ಅವರು ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರ ಕಟ್ಟಿದ್ದರು. ಆದರೆ, ಸುಮನಸಾ ಮಾತ್ರ ವರ್ಷಕ್ಕೊಮ್ಮೆ ಬಳಸಿಕೊಳ್ಳುತ್ತಿದ್ದಾರೆ. ಉಳಿದವರು ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಗೀತಂ ಗಿರೀಶ್ ಅವರಿಗೆ ರಂಗಸನ್ಮಾನ ನೀಡಿ ಗೌರವಿಸಲಾಯಿತು. ಬಾವುಟ ಸಿಕ್ಕಿಸಿ ದೋಣಿ ಸಾಗಿಸುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಉದ್ಘಾಟಿಸಲಾಯಿತು.ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಉದ್ಯಮಿ ದಿವಾಕರ ಸಾಲ್ಯಾನ್, ಸಾಯಿಬಾಬಾ ಮಂದಿರದ ಧರ್ಮದರ್ಶಿ ತೋಟದಮನೆ ದಿವಾಕರ ಶೆಟ್ಟಿ, ಸುಮನಸಾ ಕೊಡವೂರು ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ವಂದಿಸಿದರು. ನಾಗೇಶ್ ಪ್ರಸಾದ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಯಣ ಬೆಂಗಳೂರು ಇವರು ‘ತಲ್ಕಿ’ ನಾಟಕ ಪ್ರದರ್ಶಿಸಿದರು.