ಸಾರಾಂಶ
ಮೂಲ್ಕಿ : ತುಳುನಾಡಿನ ಸಂಸ್ಕೃತಿ ಸಂಪ್ರದಾಯದ ಸಂಕೇತವಾಗಿರುವ ಕಂಬಳವು ತುಳುನಾಡಿನ ಮನೋರಂಜನಾ ಕ್ರೀಡೆಯಾಗಿದ್ದು, ಜೊತೆಗೆ ಧಾರ್ಮಿಕ ನಂಬಿಕೆಯಿಂದ ಕೂಡಿದೆ. ಅರಸು ಪರಂಪರೆಯಿಂದ ನೂರಾರು ವರ್ಷಗಳಿಂದ ಈ ಕಂಬಳ ನಡೆದುಕೊಂಡು ಬಂದಿರುವುದು ಅಭಿನಂದನೀಯ. ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕೆಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆಯ ಆವರಣದಲ್ಲಿ ಮೂಲ್ಕಿ ಸೀಮೆ ಅರಸು ಕಂಬಳ ಉದ್ಘಾಟಿಸಿ ಮಾತನಾಡಿದರು.
ಬೆಳಗ್ಗೆ ಅರಮನೆಯ ನಾಗಬನದಲ್ಲಿ ವೆಂಕಟರಾಜ ಉಡುಪ ಅತ್ತೂರುಬೈಲು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ, ಅರಮನೆಯ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿಯಲ್ಲಿ ಪೂಜೆ, ನಂತರ ಅರಮನೆಯ ಜಟ್ಟಿ ಎತ್ತುಗಳು ಮತ್ತು ಎರುಬಂಟ ಸಹಿತ ಕಂಬಳ ಕರೆಗೆ ಬಂದು ಶಿಮಂತೂರು ಆದಿಜನಾರ್ದನ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಪ್ರಸಾದವನ್ನು ಕಂಬಳದ ಕರೆಗೆ ಹಾಕಿ ಕಂಬಳಕ್ಕೆ ಚಾಲನೆ ನೀಡಲಾಯಿತು. ಅರಮನೆಯ ಧರ್ಮಚಾವಡಿಯಲ್ಲಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ವಿವಿಧ ಸಂಪ್ರದಾಯಗಳು ನಡೆಯಿತು. ನಂತರ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಿತು.
ಈ ಸಂದರ್ಭ ವಿದ್ವಾನ್ ಪಂಜ ಭಾಸ್ಕರ ಭಟ್, ವೈ.ಗಣೇಶ್ ಭಟ್ ಏಳಿಂಜೆ, ಶಾಸಕ ಉಮಾನಾಥ ಕೋಟ್ಯಾನ್, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಹಳೆಯಂಗಡಿ ಪ್ರಿಯದರ್ಶಿನಿ ಕೊ-ಅಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್, ನಟ ಅಶ್ವಥ್, ನಿರೂಪಕಿ ಶ್ವೇತಾ ಆಚಾರ್ಯ, ವಕೀಲರಾದ ಚಂದ್ರಶೇಖರ್ ಕಾಸಪ್ಪಯ್ಯನವರ ಮನೆ, ಸುವರ್ಣ ಮೂಲಸ್ಥಾನದ ಸುಚೀಂದ್ರ ಅಮೀನ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಧರ್ಮಾನಂದ ಶೆಟ್ಟಿಗಾರ್, ಮೂಲ್ಕಿ ಅರಮನೆಯ ಆಶಾಲತಾ, ಗೌತಮ್ ಜೈನ್, ರಕ್ಷಾ ಎಂ., ಪವಿತ್ರೇಶ್ ಜೈನ್, ಬಂಕಿ ನಾಯಕರು, ಗೀತಾಂಜಲಿ ಸುವರ್ಣ, ಸುನೀಲ್ ಆಳ್ವ, ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.