ಸಾರಾಂಶ
ಚಿತ್ರದುರ್ಗ: ನ್ಯಾಯಾಲಯ ಪ್ರಜಾಪ್ರಭುತ್ವದಲ್ಲಿ ನ್ಯಾಯ ಕೊಡುವ ಅಂಗ. ಅದೇ ರೀತಿ ಪತ್ರಿಕಾರಂಗ ಸಂವಿಧಾನದ ನಾಲ್ಕನೆ ಅಂಗ. ಸರ್ಕಾರ ತಪ್ಪು ಮಾಡಿದಾಗ ನೈಜ ಸುದ್ದಿಗಳನ್ನು ಪ್ರಕಟಿಸಿ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಟಿದ ಅವರು, ಮಾನ ನಷ್ಟ ಮೊಕದ್ದಮೆ, ನ್ಯಾಯಾಲಯ ನಿಂದನೆ ಇವೆರಡು ಪತ್ರಕರ್ತರ ಮುಂದಿರುವ ಸವಾಲುಗಳು ಎಂದರು. ದೌರ್ಜನ್ಯ, ದಬ್ಬಾಳಿಕೆ, ಕಿರುಕುಳದಿಂದ ಸಾರ್ವಜನಿಕರು ಹೇಗೆ ಕಾನೂನು ಮೂಲಕ ರಕ್ಷಣೆ ಪಡೆದುಕೊಳ್ಳಬಹುದೆಂಬುದನ್ನು ಮಾಧ್ಯಮಗಳು ಬರವಣಿಗೆ ಮೂಲಕ ಅರಿವು ಮೂಡಿಸಬೇಕಿದೆ. ಪತ್ರಕರ್ತನಾದವನು ದೇಶದ ಗಡಿ ಕಾಯುವ ಸೈನಿಕನಿದ್ದಂತೆ. ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಯಾವುದೇ ಒಂದು ಸುದ್ದಿಯನ್ನು ಪ್ರಕಟಿಸುವ ಮುನ್ನ ಸಾಕ್ಷಿ, ಮತ್ತು ಸಂಗತಿಯನ್ನು ಗ್ರಹಿಸಬೇಕು. ಸತ್ಯ, ನಿಖರತೆ, ವಸ್ತುನಿಷ್ಠತೆಯನ್ನು ಪತ್ರಕರ್ತ ಮೈಗೂಡಿಸಿಕೊಂಡರೆ ಎಂತಹ ಸಂದರ್ಭದಲ್ಲಾದರೂ ಸಮಸ್ಯೆಗೆ ಒಳಗಾಗುವುದಿಲ್ಲ. ಪತ್ರಿಕಾ ಸ್ವಾತಂತ್ರ್ಯ ದಮನ ಮಾಡಿದರೆ ಪ್ರಜಾಪ್ರಭುತ್ವದ ಮೇಲೆ ಹಲ್ಲೆ ನಡೆಸಿದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ ಎನ್ನುವುದನ್ನು ಅವರು ಉಲ್ಲೇಖಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಪತ್ರಕರ್ತರ ಅಹೋಬಲಪತಿ ಮಾತನಾಡಿ, ಪತ್ರಕರ್ತನಾದವನು ಎಲ್ಲವನ್ನು ಬಲ್ಲೆ ಎಂಬ ಭ್ರಮೆಯಲ್ಲಿರಬಾರದು. ಸುದ್ದಿಯನ್ನು ಪ್ರಕಟಿಸುವ ತವಕದಲ್ಲಿ ಕೆಲವೊಮ್ಮೆ ಮಾನ ನಷ್ಟಕ್ಕೊಳಗಾಗಬೇಕಾಗುತ್ತದೆ. ನ್ಯಾಯಾಂಗ ನಿಂದನೆಯಾಗದಂತೆಯೂ ಎಚ್ಚರಿಕೆಯಿಂದ ಸುದ್ದಿ ಪ್ರಕಟಿಸುವ ಚಾಣಾಕ್ಷತನ ಪತ್ರಕರ್ತನಿಗಿರಬೇಕು. ಅದಕ್ಕಾಗಿ ಪತ್ರಕರ್ತ ಇಂತಹ ಉಪನ್ಯಾಸಗಳ ಮೂಲಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು ಎಂದರು. ಮಾನನಷ್ಟ ಮೊಕದ್ದಮೆ ಹಾಗೂ ನ್ಯಾಯಾಂಗ ನಿಂದನೆ ಕುರಿತು ಹೈಕೋರ್ಟ್ ವಕೀಲ ಎಂ.ವಿ.ರೇವಣಸಿದ್ದಯ್ಯ ಮಾತನಾಡಿ, ಪತ್ರಿಕೆಗಳಲ್ಲಿ ಮಾನಹಾನಿಗೆ ಸಂಬಂಧಪಟ್ಟಂತೆ ಸುದ್ದಿ ಪ್ರಕಟವಾದರೆ ಅದಕ್ಕೆ ಸಂಬಂಧಪಟ್ಟಂತೆ ಶೇ.10 ರಿಂದ 20 ರಷ್ಟು ಜನ ಮಾತ್ರ ನ್ಯಾಯಾಲಯದ ಮೊರೆ ಹೋಗುತ್ತಾರೆ. ಇದರಲ್ಲಿ ಶೇ.10ರಷ್ಟು ಜನ ಮಾತ್ರ ಮುಂದುವರೆಯುತ್ತಾರೆ ಇದರಲ್ಲಿಯೂ ಸಹಾ ಶೇ.5 ರಷ್ಟು ಜನ ಮಾತ್ರ ನ್ಯಾಯಾ ಸಿಗುವವರೆಗೂ ಹೋರಾಟವನ್ನು ಮಾಡುತ್ತಾರೆ. ಪತ್ರಕರ್ತರಾದವರು ನ್ಯಾಯಾಲಯದ ತೀರ್ಪಿನ ಬಗ್ಗೆ ಪತ್ರಿಕೆಗಳಲ್ಲಿ ಬರೆಯಬಹುದಾಗಿದೆ. ಆದರೆ ಅದಕ್ಕೆ ತಕ್ಕ ಸಾಕ್ಷಿ, ಪುರಾವೆಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ತಿಳಿಸಿದರು.
ನ್ಯಾಯಾಲಯದ ಸುದ್ದಿಗಳನ್ನು ಪ್ರಕಟ ಮಾಡಿದರೆ ನ್ಯಾಯಾಂಗ ನಿಂದನೆಯಾಗುವುದಿಲ್ಲ, ನ್ಯಾಯಾಲದ ವಿರುದ್ಧ ಏನಾದರೂ ಸುದ್ದಿ ಪ್ರಕಟವಾದರೆ ಮಾತ್ರ ನ್ಯಾಯಾಂಗ ನಿಂದನೆಯಾಗುತ್ತದೆ. ತಮ್ಮ ಪತ್ರಿಕೆಗಳಲ್ಲಿ ನ್ಯಾಯಾಲಯದ ಬಗ್ಗೆಯಾಗಲೀ ನ್ಯಾಯಾಧೀಶರ ಬಗ್ಗೆ ಬರೆಯುವಾಗ ಸರಿಯಾದ ಸಾಕ್ಷಿಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ಗೌಡಗೆರೆ ಅಧ್ಯಕ್ಷತೆ ವಹಿಸಿದ್ದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂ, ಎಸ್ಜೆಎಂ ಕಾನೂನು ಕಾಲೇಜು ಪ್ರಾಧ್ಯಾಪಕಿ ಸುಮನ ಅಂಗಡಿ ವೇದಿಕೆಯಲ್ಲಿದ್ದರು.ನಿಹಾರಿಕ ಪ್ರಾರ್ಥಿಸಿದರು, ವಿನಾಯಕ ಸ್ವಾಗತಿಸಿದರು. ನಾಕಿಕೆರೆ ತಿಪ್ಪೇಸ್ವಾಮಿ ನಿರೂಪಿಸಿದರು.