ಸಂವಿಧಾನದ ಆಶಯದಂತೆ ಕೊಳಗೇರಿಗಳು ನವನಗರವಾಗಲಿ

| Published : Nov 25 2025, 01:30 AM IST

ಸಂವಿಧಾನದ ಆಶಯದಂತೆ ಕೊಳಗೇರಿಗಳು ನವನಗರವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಆಶಯದ ಅಡಿಯಲ್ಲಿ ಕೊಳಗೇರಿಗಳು ನವನಗರ ಆಗಬೇಕೆಂದು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ ಪ್ರಕಾಶ್ ಎಂ. ಶೇಟ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಸಂವಿಧಾನದ ಆಶಯದ ಅಡಿಯಲ್ಲಿ ಕೊಳಗೇರಿಗಳು ನವನಗರ ಆಗಬೇಕೆಂದು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ ಪ್ರಕಾಶ್ ಎಂ. ಶೇಟ್ ತಿಳಿಸಿದರು.

ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮನ-ಮನೆಗೂ ಸಂವಿಧಾನ ಕುರಿತು ಸಂವಾದ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿದರು.

ಕೊಳಗೇರಿ ಎಂಬುದು ಭೌತಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಬದಲಾಗಬೇಕು. ಸಂವಿಧಾನದ ಆಶಯದ ಅಡಿಯಲ್ಲಿ ತಾರತಮ್ಯ ರಹಿತ ಸಮ ಸಮಾಜವನ್ನು ಕಟ್ಟಬೇಕು. ಹಾಗಾಗಿ ಈ ಮನ ಮನೆಗೂ ಸಂವಿಧಾನ ಕಾರ್ಯಕ್ರಮ ಚಾಲನೆಯಾಗಿದೆ. ಇದರ ಅನುಕೂಲವನ್ನು ಪ್ರತಿಯೊಬ್ಬರು ಪಡೆದುಕೊಂಡು ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು. ಹಾಗಾದರೆ ಮಾತ್ರ ಸಂವಿಧಾನಕ್ಕೆ ಸಂವಿಧಾನ ರಚನಕಾರರಿಗೆ ನಾವು ನೀಡುವ ಗೌರವವಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಹಪ್ರಾಧ್ಯಾಪಕ ಡಾ. ನಾಗಭೂಷಣ ಬಗ್ಗನಡು, ಭಾರತದಲ್ಲಿ 3600 ಕ್ಕೂ ಅಧಿಕ ಜಾತಿಗಳಿವೆ. ಸಾಕಷ್ಟು ಉಪಪಂಗಡಗಳಿವೆ. ಕರ್ನಾಟಕದಲ್ಲಿ 1500 ಕ್ಕೂ ಹೆಚ್ಚು ಜಾತಿಗಳಿವೆ. ಕುಲಕಸುಬಿನ ಆಧಾರದ ಮೇಲೆ ಜಾತಿ ತೀರ್ಮಾನವಾಗುತ್ತದೆ. ಸಂವಿಧಾನ ರಚನೆಯಾಗಿ 75 ವರ್ಷಗಳ ಫಲವಾಗಿ ನಾವಿಂದು ಜಾತಿ ಧರ್ಮದ ಭೇದವಿಲ್ಲದೆ ಸಾಮರಸ್ಯದ ಬದುಕು ನಡೆಸುತ್ತಿದ್ದೇವೆ ಎಂದರು.

ಕರ್ನಾಟಕ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ನರಸಿಂಹಮೂರ್ತಿ, ಸಂಪನ್ಮೂಲ ವ್ಯಕ್ತಿ ಜನಾರ್ದನ ಕೆಸರಗದ್ದೆ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ಸಂವಿಧಾನ ಸ್ನೇಹಿತರ ಬಳಗದ ಪೂರ್ಣ ಮತ್ತು ಅಶ್ವಿನಿ ಉಪಸ್ಥಿತರಿದ್ದರು.