ಅಹಿಂಸೆ ಮಾರ್ಗದಲ್ಲಿ ಹೋರಾಟ ನಡೆಸಿದರೆ ನಿಜವಾಗಿಯೂ ಗೆಲುವು ಸಾಧಿಸಬಹುದು ಎಂದು ಏಕತಾ ಪರಿಷತ್‌ನ ಸಂಸ್ಥಾಪಕರು ಹಾಗೂ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಪಿ.ಬಿ.ರಾಜಗೋಪಾಲ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಸರ್ಕಾರದ ಪ್ರಸ್ತಾಪಿತ ಔಟರ್ ರಿಂಗ್ ರಸ್ತೆಗೆ ಭೂಮಿ ಕಳೆದುಕೊಳ್ಳುತ್ತಿರುವ 26 ಹಳ್ಳಿಗಳ ಎಲ್ಲ ಜನರು ಜಾತಿ, ಧರ್ಮ, ಭಾಷೆ, ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು, ಒಗ್ಗೂಡಿ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸತ್ಯ, ಅಹಿಂಸೆ ಮಾರ್ಗದಲ್ಲಿ ಹೋರಾಟ ನಡೆಸಿದರೆ ನಿಜವಾಗಿಯೂ ಗೆಲುವು ಸಾಧಿಸಬಹುದು ಎಂದು ಏಕತಾ ಪರಿಷತ್‌ನ ಸಂಸ್ಥಾಪಕರು ಹಾಗೂ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಪಿ.ಬಿ.ರಾಜಗೋಪಾಲ್ ತಿಳಿಸಿದ್ದಾರೆ.

ತುಮಕೂರು ತಾಲೂಕು ಶೂಲದ ಅಂಜನೇಯ ದೇವಾಲಯದ ಬಳಿ ಭೂ ಬಳಕೆ ಮತ್ತು ಭೂ ಹೊದಿಕೆ ನೀತಿಗೆ ಒತ್ತಾಯಿಸಿ, ಅವೈಜ್ಞಾನಿಕ ರಿಂಗ್ ರಸ್ತೆ ವಿರೋಧಿಸಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಒಂದು ಯೋಜನೆಯಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಸಾಮಾಜಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸದೆ, ರೈತರೊಂದಿಗೆ ಸಮಾಲೋಚನೆ ನಡೆಸದೆ ರಚಿಸಿರುವ ಡಿಪಿಆರ್ ಅತ್ಯಂತ ಅವೈಜ್ಞಾನಿಕವಾಗಿದೆ. ಇದರ ವಿರುದ್ಧದ ಹೋರಾಟ ನ್ಯಾಯಯುತವಾಗಿದೆ. ಹಾಗಾಗಿ ನಿಮ್ಮ ಹೋರಾಟದ ಜೊತೆಗೆ ನಾನು ಸದಾ ಇದ್ದೇ ಇರುತ್ತೇನೆ ಎಂದರು.

ವಿದ್ಯಾವಂತ ಯುವಜನರು ಈ ರೀತಿಯ ಅನ್ಯಾಯಕ್ಕೆ ಒಳಗಾದ ರೈತರು, ಕಾರ್ಮಿಕರು ಹಾಗೂ ಜನರ ಧ್ವನಿಯನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸವನ್ನು ಮಾಡಬೇಕಿದೆ. ಈ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಪ್ರಶ್ನಿಸುವ, ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಡಾ.ಮಂಜುನಾಥ್ ಮಾಡಿದ್ದಾರೆ. ಡಿಪಿಆರ್‌ನಲ್ಲಿರುವ ಎಲ್ಲಾ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ನಿಮ್ಮ ಹೋರಾಟಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ಹಾಗಾಗಿ ವ್ಯವಸ್ಥೆಯ ವಿರುದ್ಧ ನಾವೆಲ್ಲರೂ ಹೋರಾಟಕ್ಕೆ ಮುಂದಾಗಬೇಕಿದೆ. ನಿಮ್ಮ ಧ್ವನಿಯನ್ನು, ಪ್ರತಿರೋಧವನ್ನು ಆಳುವವರ ಮಟ್ಟಕ್ಕೆ ತಲುಪಿಸಲು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಪಿ.ವಿ.ರಾಜಗೋಪಾಲ್ ಅಭಯ ನೀಡಿದರು.

ಚಿತ್ರನಟ ಹಾಗೂ ಪರಿಸರವಾದಿ ಸುರೇಶ ಹೆಬ್ಲಿಕರ್ ಮಾತನಾಡಿ, ರೈತರ ಕೃಷಿ ಭೂಮಿಯನ್ನು ಭೂ ಸ್ವಾಧೀನ ಪಡಿಸಿಕೊಂಡು ನಡೆಸುವ ಯಾವುದೇ ಅಭಿವೃದ್ದಿ ಯೋಜನೆಯೂ ಪರಿಸರ ಸ್ನೇಹಿಯಾಗಿರಲು ಸಾಧ್ಯವಿಲ್ಲ. ಮುಂದೊಂದು ದಿನ ನಾವು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಬಹುದು.ಇದರ ಬಗ್ಗೆ ಯುವಜನರಿಗೆ ಪರಿಜ್ಞಾನವೇ ಇಲ್ಲದಂತಾಗಿದೆ.ಔಟರ್ ರಿಂಗ್ ರಸ್ತೆಯಿಂದ ಈ ಭಾಗದ ಲಕ್ಷಾಂತರ ಜನರು ಊಟ ಕಳೆದುಕೊಳ್ಳುವುದರ ಜೊತೆಗೆ, ಜನರ ಬದುಕು ಬೀದಿಗೆ ಬೀಳಲಿದೆ. ನಿಮ್ಮ ಹೋರಾಟ ಪ್ರಜಾಸತ್ತಾತ್ಮಕವಾಗಿ ಇದ್ದ ಎಂತಹ ಸರಕಾರಗಳು ಮಣಿಯಲೇ ಬೇಕು. ನಮ್ಮ ಮುಂದೆ ಅನೇಕ ಉದಾಹರಣೆಗಳಿವೆ ಎಂದರು.

ಗಾಂಧಿ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕ ಡಾ.ಮಂಜುನಾಥ್ ಮಾತನಾಡಿ, ಒಂದು ಯೋಜನೆಯ ಕುರಿತ ವಿಸ್ಕೃತ ವರದಿ(ಡಿಪಿಆರ್), ಈ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ತಿಳಿದಿರಬೇಕು. ಆದರೆ ಈ ಯೋಜನೆ ಕುರಿತು ಭೂಮಿ ಕಳೆದುಕೊಳ್ಳುವ ರೈತರಷ್ಟೇ ಅಲ್ಲ,ರೈತ ಸಂಘಟನೆಗಳು, ಹೋರಾಟಗಾರರನ್ನು ಎಲ್ಲರನ್ನು ಕತ್ತಲೆಯಲ್ಲಿ ಇಡಲಾಗಿದೆ. ರೈತರೊಂದಿಗೆ ಚರ್ಚೆ ನಡೆಸದೆ,ಪಂಚಾಯಿತಿಗಳಿಂದ ಎನ್.ಒ.ಸಿ. ಪಡೆಯದೆ, ವಿವಿಧ ಇಲಾಖೆಗಳೊಂದಿಗೆ, ರೈತರೊಂದಿಗೆ ಚರ್ಚಿ ನಡೆಸದೆ, ಡಿಪಿಆರ್. ತಯಾರಿಸಿ, ಎಲ್ಲ ರೀತಿಯ ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ಕೇಂದ್ರ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ,ಅನುಮೋದನೆ ಪಡೆಯಲಾಗಿದೆ. ಹಾಗಾಗಿ ಇದೊಂದು ಜನವಿರೋಧಿ, ರೈತವಿರೋಧಿ, ಪರಿಸರ ವಿರೋಧಿ ಡಿಪಿಆರ್ ಆಗಿದೆ ಎಂಬ ಆಂಶವನ್ನು ಸಂತ್ರಸ್ಥ ರೈತರ ಮುಂದಿಟ್ಟರು.

ಪರಿಸರವಾದಿ ಹಾಗೂ ಸಂಯುಕ್ತ ಹೋರಾಟ-ಕರ್ನಾಟಕದ ಸಂಚಾಲಕ ಸಿ.ಯತಿರಾಜು ಮಾತನಾಡಿ, ಜಗತ್ತಿನಲ್ಲಿ ಬದುಕಿರುವ ಜನಸಂಖ್ಯೆಗೂ,ಲಭ್ಯವಿರುವ ಭೂಮಿಗೆ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲದೆ ಲಭ್ಯವಿರುವ ಭೂಮಿಯ ಶೇ40ರಷ್ಟು ಭೂಮಿ ಬಂಜರು ಬಿದ್ದಿದೆ. ಹಾಗಾಗಿ ಭೂಮಿಯ ಬೆಲೆ ಗಗನಕ್ಕೇರುತ್ತಿದ್ದು, ಸರಕಾರದ ಯೋಜನೆಗಳಿಗೆ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಾವೆಲ್ಲರೂ ನಿರ್ಣಾಯಕ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಕೆ.ದೊರೆರಾಜು ಮಾತನಾಡಿ, ಗಾಂಧಿ ಮಾರ್ಗದಲ್ಲಿ ನಡೆದರೆ, ನಮ್ಮ ಹೋರಾಟ ನಿಜಕ್ಕೂ ಸತ್ಯದಿಂದ ಕೂಡಿದ್ದರೆ ಗೆಲುವು ನಮ್ಮದೆ. ಆಳುವ ಸರ್ಕಾರಗಳು ನಮ್ಮನ್ನು ಬೆದರಿಸುವ, ಹಿಬ್ಬಾಗಿಸುವ ಕೆಲಸವನ್ನು ಮಾಧ್ಯಮಗಳು, ಪೊಲೀಸ್ ಮೂಲಕ ಮಾಡುತ್ತಲೇ ಬಂದಿವೆ. ಹಾಗಾಗಿ ಈ ಎಚ್ಚರಿಕೆಯನ್ನು ಇಟ್ಟುಕೊಂಡೇ ಹೋರಾಟ ರೂಪಿಸಬೇಕಾಗಿದೆ ಎಂದರು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ವಿಭಾಗೀಯ ಕಾರ್ಯದರ್ಶಿ ದೊಡ್ಡಮಾಳಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಎಐಕೆಕೆಎಂಎಸ್‌ನ ಎಸ್.ಎನ್ ಸ್ವಾಮಿ,ಎಐಕೆಎಸ್ ಕಂಬೇಗೌಡ, ಪಂಡಿತ್ ಜವಹರ್, ದೊಡ್ಡನಂಜಯ್ಯ, ಲೋಕೇಶ್.ಬಿ., ರವೀಶ್ ಮತ್ತಿತರರು ಉಪಸ್ಥಿತರಿದ್ದರು.