ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಕ್ಫ್ ಮಂಡಳಿಯು ಒಂದು ಬೋರ್ಡ್ ಇಟ್ಟು, ಜಮೀನನ್ನು ವಶಪಡಿಸಿಕೊಳ್ಳುವ ಕಾನೂನನ್ನು ಸರ್ಕಾರ ಮೊದಲು ಹಿಂಪಡೆಯಲಿ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಗಳೇ ಸಾರ್ವಜನಿಕರ ಉಪಯೋಗಕ್ಕಾಗಿ ರೈತರು ಅಥವಾ ಸಾರ್ವಜನಿಕರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ವೇಳೆ ಪರಿಹಾರ ನೀಡುತ್ತದೆ. ಆದರೆ, ವಕ್ಫ್ ಮಂಡಳಿ ಒಂದು ಬೋರ್ಡ್ ಹಾಕಿ ಆಸ್ತಿ ತನ್ನದೆನ್ನುವುದು ಎಷ್ಟು ಸರಿ ಎಂದು ಹೇಳಿದರು.
ಸರ್ಕಾರ ಭೂ ಸ್ವಾಧೀನಪಡಿಸಿಕೊಂಡ ಜಾಗದ ವಿಚಾರ ಪರಿಹಾರಕ್ಕೆ ಮುಗಿಯದೇ, ನ್ಯಾಯಾಲಯದ ಮೆಟ್ಟಿಲೇರಿದರೆ ಕೋರ್ಟ್ ಹೇಳುವ ಪರಿಹಾರ ನೀಡಿ, ಜಮೀನುಗಳನ್ನು ವಶಪಡಿಸಿಕೊಳ್ಳಬೇಕು. ಆದರೆ, ವಕ್ಫ್ ಮಂಡಳಿ ಸರ್ಕಾರಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಬೋರ್ಡ್ ಹಾಕಿ, ಇದು ನಮಗೆಬೇಕೆಂದು ವಶಪಡಿಸಿಕೊಳ್ಳುವುದೇ ಖಂಡನೀಯ ಎಂದು ಆಕ್ಷೇಪಿಸಿದರು.ಸರ್ಕಾರ ಮೊದಲು ವಕ್ಫ್ ಮಂಡಳಿಯ ಇಂತಹ ಕಾನೂನನ್ನು ತಕ್ಷಣ ಹಿಂಪಡೆಯಬೇಕು. ವಕ್ಫ್ ಮಂಡಳಿ ವಶಪಡಿಸಿಕೊಂಡ ರೈತರು, ಹಿಂದೂ ಧಾರ್ಮಿಕ ಕೇಂದ್ರಗಳ ಆಸ್ತಿಗಳನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಇದು ಕೇವಲ ಮಾತಿನಲ್ಲೇ ಉಳಿದು, ರೈತರ ಆಸ್ತಿಗಳು ವಕ್ಫ್ ಬೋರ್ಡ್ ನ ಹೆಸರಿನಲ್ಲೇ ಉಳಿದರೆ, ಅದಕ್ಕೆ ಪರಿಣಾಮವನ್ನು ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
* ಧರ್ಮ ಸಂಸ್ಕಾರ ನೀಡುವ ಕೆಲಸ ಶ್ರದ್ಥೆ ಮಾಡಿ
ದಾವಣಗೆರೆ: ಲಿಂಗ ದೀಕ್ಷೆ ಪಡೆದವರು ಧರ್ಮ ಸಂಸ್ಕಾರವನ್ನೂ ನೀಡುವ ಕೆಲಸವನ್ನು ಅಷ್ಟೇ ಶ್ರದ್ಥೆ, ಆಸಕ್ತಿಯಿಂದ ಮಾಡಬೇಕು ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಹಳೆ ಪಿಬಿ ರಸ್ತೆಯ ಶ್ರೀಶೈಲ ಮಠದಲ್ಲಿ ಬುಧವಾರ ಶ್ರೀಶೈಲ ಜಗದ್ಗುರು ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ 38ನೇ ಪುಣ್ಯಾರಾಧನೆ, ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ 13ನೇ ವಾರ್ಷಿಕ ಪುಣ್ಯ ಸ್ಮರಣೋತ್ಸವ ಅಂಗವಾಗಿ 50ಕ್ಕೂ ಹೆಚ್ಚು ವಟುಗಳಿಗೆ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಲಿಂಗದೀಕ್ಷೆ ನೀಡಿ ಮಾತನಾಡಿದ ಅವರು, ದೀಕ್ಷೆ ಪಡೆದವರು ಧರ್ಮ ಸಂಸ್ಕಾರವನ್ನು ನೀಡುವ ಕೆಲಸ ತಪ್ಪದೇ ಮಾಡಬೇಕು ಎಂದರು.ಸ್ವಾಮಿಗಳ ಕೈಯಲ್ಲಿ ದಂಡ ಕೊಡುವುದು ದೌರ್ಜನ್ಯ ಮಾಡುವುದಕ್ಕಲ್ಲ. ಜೋಳಿಗೆ ಕೊಡುವುದು ಭಕ್ತರು ನೀಡಿದ್ದನ್ನು ತಂದು, ಮನೆ ತುಂಬಿಕೊಳ್ಳುವುದಕ್ಕಲ್ಲ. ಆದ್ದರಿಂದ ಲಿಂಗದೀಕ್ಷೆ ಪಡೆದ ವಟುಗಳು ದಂಡ, ಜೋಳಿಗೆ ಹಿಡಿದು, ಧರ್ಮ ಸಂಸ್ಕಾರ ನೀಡುವ ಕೆಲಸವನ್ನು ಮಾಡಬೇಕು. ಭಕ್ತರ ಮನೆ ಮನೆಗೆ ಹೋದ ವೇಳೆ ಲಿಂಗ ಪೂಜೆ, ಲಿಂಗ ಕಟ್ಟಿರುವುದು, ವಿಭೂತಿ ಹಂಚಿರುದನ್ನು ಗಮನಿಸುವುದೂ ನಿಮ್ಮ ಜವಾಬ್ಧಾರಿ ಎಂದು ಅವರು ತಿಳಿಸಿದರು.
ನಂತರ ನಡೆದ ಉಭಯ ಲಿಂಗೈಕ್ಯ ಜಗದ್ಗುರುಗಳ ಭಾವಚಿತ್ರ ಮೆರವಣಿಗೆ ಶ್ರೀಶೈಲ ಮಠದಿಂದ ಶ್ರೀ ಮಠದ ಆನೆ, ಪೂರ್ಣ ಕುಂಭ, ಕಳಸ, ಕನ್ನಡಿ, ಸಕಲ ಮಂಗಳ ವಾದ್ಯ ವೈಭವದಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸದ್ಯೋಜಾತ ಮಠದ ಬಳಿ ಕೊನೆಗೊಂಡಿತು. ಆವರಗೊಳ್ಳ ಮಠದ ಓಂಕಾರ ಸ್ವಾಮಿಗಳು ಸೇರಿದಂತೆ ಇತರರು ಇದ್ದರು.