ಮನುಕುಲದ ನಾಗರಿಕತೆಯ ವಿಕಾಸಕ್ಕೆ ವಿಶ್ವಕರ್ಮ ಸಮುದಾಯದ ಕಾಣಿಕೆ ಅನನ್ಯವಾಗಿದ್ದು, ಅದನ್ನು ಯುವ ಸಮುದಾಯಕ್ಕೆ ತಿಳಿಸುವ ಕೆಲಸವಾಗಬೇಕಿದೆ ಎಂದು ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ ಹೇಳಿದರು.
ಹುಬ್ಬಳ್ಳಿ:
ಮನುಕುಲದ ನಾಗರಿಕತೆಯ ವಿಕಾಸಕ್ಕೆ ವಿಶ್ವಕರ್ಮ ಸಮುದಾಯದ ಕಾಣಿಕೆ ಅನನ್ಯವಾಗಿದ್ದು, ಅದನ್ನು ಯುವ ಸಮುದಾಯಕ್ಕೆ ತಿಳಿಸುವ ಕೆಲಸವಾಗಬೇಕಿದೆ ಎಂದು ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ ಹೇಳಿದರು.ಅವರು ನವನಗರದಲ್ಲಿ ವಿಶ್ವಕರ್ಮ ವಿಕಾಸ ಸಮಿತಿ ಟ್ರಸ್ಟ್ ವತಿಯಿಂದ ಪ್ರಥಮ ಬಾರಿಗೆ ಏರ್ಪಡಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಮೂಲಪುರುಷ ವಿಶ್ವಕರ್ಮನ ಕುರಿತು ಧಾರವಾಡ ಸರ್ಕಾರಿ ಚಿತ್ರಕಲಾ ಶಾಲೆಯ ಪ್ರಾಚಾರ್ಯ ಹಾಗೂ ಹಿರಿಯ ಕಲಾವಿದ ಪ್ರೊ. ಎಸ್.ಕೆ. ಪತ್ತಾರ, ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ಪಾಲಿಕೆ ಉಪ ಆಯುಕ್ತ ಡಾ. ಸಂತೋಷ ಆನಿ ಶೆಟ್ಟರ ಮಾತನಾಡಿದರು.ವಿಶ್ವಕರ್ಮ ಪೂಜಾ ಮಹೋತ್ಸವದ ಅಂಗವಾಗಿ ಪಂಚಾಕ್ಷರಿ ನಗರದಲ್ಲಿರುವ ಶ್ರೀಕಾಳಿಕಾ ದೇವಸ್ಥಾನದಲ್ಲಿ ಸೋಮಾಚಾರ್ಯ ಕಡ್ಲಾಸ್ಕರ ಅವರಿಂದ ವಿಶ್ವಕರ್ಮ ಹೋಮ ಜರುಗಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನವನಗರದ ಬಸವೇಶ್ವರ ವೃತ್ತದಿಂದ ಆರಂಭವಾದ ವಿಶ್ವಕರ್ಮನ ಭಾವಚಿತ್ರದ ಶೋಭಾಯಾತ್ರೆಯಲ್ಲಿ ಸಮಾಜ ಬಾಂಧವರು ಮತ್ತು ಪೂರ್ಣ ಕುಂಭ ಹಾಗೂ ಆರತಿಯೊಂದಿಗೆ ಸುಮಂಗಲಿಯರು ಪಾಲ್ಗೊಂಡಿದ್ದರು.
ವಿಶ್ವಕರ್ಮ ವಿಕಾಸ ಸಮಿತಿ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಮಾಯಾಚಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಕಣಾಚಾರ್ಯ ಕರವೀರಕರ, ವಿಶ್ವಚೇತನ ಮಹಿಳಾ ಮಂಡಳದ ಅಧ್ಯಕ್ಷೆ ಮೀನಾಕ್ಷಿ ಬಡಿಗೇರ, ಶ್ರೀ ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷ ಮೌನೇಶ ರಟ್ಟಿಹಳ್ಳಿ ಉಪಸ್ಥಿತರಿದ್ದರು.