ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ನಾಡಿನ ಯುವ ಜನತೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಯ ಸಂವರ್ಧನೆಗೆ ದುಡಿಯಬೇಕು ಎಂದು ಆಡಳಿತ ಅಧಿಕಾರಿ ಪ್ರೊ.ಐ.ಎಸ್. ಕಾಳಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಾಡಿನ ಯುವ ಜನತೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಯ ಸಂವರ್ಧನೆಗೆ ದುಡಿಯಬೇಕು ಎಂದು ಆಡಳಿತ ಅಧಿಕಾರಿ ಪ್ರೊ.ಐ.ಎಸ್. ಕಾಳಪ್ಪನವರ ಹೇಳಿದರು.ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ವೇದಿಕೆ ಸಹಯೋಗದೊಂದಿಗೆ ದತ್ತಿ ಉಪನ್ಯಾಸ ಹಾಗೂ ಕನ್ನಡ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಸ್ಪರ್ಧಾತ್ಮಕ ಜಗತ್ತಿನ ಇಂಗ್ಲೀಷ್ ಭಾಷೆಯ ಜೊತೆಗೆ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಿದೆ. ಶರಣರು ಕಾಯಕವನ್ನು ಶ್ರದ್ಧೆ, ನಿಷ್ಠ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು, ಪ್ರಾಮಾಣಿಕತೆ ಕಾಯಕದಿಂದ ದೇವರ ದರ್ಶನ ಎಂದರು.
ಉಪನ್ಯಾಸಕ ಬಸವರಾಜ ಕುಂಬಾರ ಮಾತನಾಡಿ, ೧೨ನೇ ಶತಮಾನದ ಶರಣ ಸಂತರು ಕಾಯಕದಲ್ಲಿ ಶಿವಪೂಜೆ, ಶಿವಭಕ್ತಿ, ಶಿವಭಜನೆಯಲ್ಲಿ ನಿಷ್ಠೆಯನ್ನು ಹೊಂದಿದ್ದರು. ಇಂತಹ ಶರಣರ ಸಾಲಿನಲ್ಲಿ ಕುಂಬಾರ ಗುಂಡಣ್ಣ ಸಹ ಒಬ್ಬರು. ಶರಣ ಸಂತರು ಭೌತಿಕ ಸಂಪತ್ತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಆಂತರಿಕ ಶ್ರೀಮಂತರಾಗಿದ್ದರು. ಸಮಾಜದ ಮೌಢ್ಯತೆಗಳನ್ನು ಕಿತ್ತು ಎಸೆಯುವ, ಸಮಾನತೆಯ ಸಮಾಜ ನಿರ್ಮಾಣದಲ್ಲಿ ಶರಣ ಸಂಸ್ಕೃತಿ ಪ್ರಮುಖವಾಗಿತ್ತು ಎಂದು ಹೇಳಿದರು.ಜಿ.ಬಿ.ಸಾಲಕ್ಕಿ ಮಾತನಾಡಿ, ನಿರ್ಲಕ್ಷಿತ ಶರಣರ ಸ್ಮರಿಸುವ ಕಾರ್ಯ ಮತ್ತು ಅವರ ಕುರಿತು ಮಾತನಾಡುವ ಕೆಲಸ ಆಗಬೇಕು ಹಾಗೂ ಕನ್ನಡ ಭಾಷೆ ಸಂಘ ಮತ್ತು ದತ್ತಿ ಉಪನ್ಯಾಸ ಸಾರ್ಥಕವಾಗಬೇಕು ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ್ ಕಂಚಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳಕಟ್ಟೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಂ.ಎಸ್.ಮಧಭಾವಿ, ಪ್ರಾಚಾರ್ಯೆ ಡಾ.ಭಾರತಿ ಖಾಸನಿಸ್, ನಿವೃತ್ತ ಪ್ರಾಚಾರ್ಯ ಡಾ.ವಿ.ಡಿ.ಐಹೊಳಿ, ಕನ್ನಡ ಸಂಘದ ಮುಖ್ಯಸ್ಥ ಡಾ.ಮಂಜುನಾಥ ಕೋರಿ, ಶರಣ ಸಾಹಿತ್ಯ ಪರಿಷತ್ ಯುವ ವೇದಿಕೆಯ ಅಧ್ಯಕ್ಷ ಅಮರೇಶ ಸಾಲಕ್ಕಿ, ಪಲ್ಲವಿ ಹಿರೇಮಠ ಮುಂತಾದವರು ಇದ್ದರು.