ಕನ್ನಡಪ್ರಭ ವಾರ್ತೆ ಹಾಸನ

ಹೋಟೆಲ್ ಹಾಗೂ ಮನೆಗಳಿಗೆ ಸಮರ್ಪಕವಾಗಿ ಸಿಲಿಂಡರ್ ಪೂರೈಕೆ ಮಾಡುವಂತೆ ಜೆಡಿಎಸ್ ಜಿಲ್ಲಾ ಮಾಧ್ಯಮ ವಕ್ತಾರ ರಘು ಹೊಂಗೆರೆ ಒತ್ತಾಯಿಸಿದ್ದಾರೆ.ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಕೆಲ ದಿನಗಳ ನಂತರ ಹಾಸನಕ್ಕೂ ಯುದ್ಧದ ಬಿಸಿ ತಟ್ಟಿದೆ. ನಗರದ ಬಹುತೇಕ ಹೋಟೆಲ್‌ಗಳು ಕಮರ್ಷಿಯಲ್ ಸಿಲಿಂಡರ್‌ ಇಲ್ಲದೆ ಬಾಗಿಲು ಮುಚ್ಚಿವೆ. ಇದು ಕೇವಲ ಹೋಟೆಲ್ ಸಮಸ್ಯೆಯಲ್ಲ, ಕೆಲ ಆಸ್ಪತ್ರೆಗಳಿಗೂ ಸಮಸ್ಯೆ ಎದುರಾಗಿದೆ. ಇದರಿಂದ ರೋಗಿಗಳಿಗೂ ಬಹಳ ತೊಂದರೆಯಾಗಿದೆ ಎಂದಿದ್ದಾರೆ. ಹೋಟೆಲ್ ಬಂದ್ ಆಗಿರುವುದರಿಂದ ಕಾರ್ಮಿಕರಿಗ ಕೆಲಸ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತ ಪದೇ ಪದೆ ಜಿಲ್ಲೆಯಲ್ಲಿ ಗ್ಯಾಸ್ ಸಮಸ್ಯೆ ಇಲ್ಲ ಅಂತ ಹೇಳುತ್ತಿದ್ದರೂ ಏಕೆ ಪೂರೈಕೆ ಮಾಡಲಾಗುತ್ತಿಲ್ಲ. ರಾಜ್ಯ ಸರ್ಕಾರ ಮಾತೆತ್ತಿದರೆ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ, ಇದೇನಾ ಸರ್ಕಾರದ ಜವಾಬ್ದಾರಿ ಎಂದು ರಘು ಪ್ರಶ್ನಿಸಿದ್ದಾರೆ.ಈಗಾಗಲೇ ಹಲವು ಹೋಟೆಲ್ ಬಾಗಿಲು ಬಂದ್ ಆಗಿರುವುದರಿಂದ ಮಾಲೀಕರಿಗೆ ಒಂದು ರೀತಿಯ ನಷ್ಟವಾಗಿದ್ದರೆ, ಕಾರ್ಮಿಕರು ಬದುಕು ಕಟ್ಟಿಕೊಟ್ಟಲು ಪರದಾಡುವಂತಾಗಿದೆ, ಒಂದು ಹೊತ್ತಿನ ಊಟಕ್ಕೂ ತೊಂದರೆ ಪಡುವಂತಾಗಿದೆ. ಮಾತೆತ್ತಿದರೆ ನಾವು ಬಡವರ ಪರ, ಕಾರ್ಮಿಕರ ಪರ ಎನ್ನುವ ಸರ್ಕಾರದ ಬದ್ಧತೆ ಇದೇನಾ ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದಾರೆ. ಈ ನಡುವೆ ಅನೇಕ ಗ್ಯಾಸ್ ಏಜೆನ್ಸಿಯವರು ಕೊರತೆಯನ್ನೇ ಬಂಡವಾಳ ಮಾಡಿಕೊಂಡು ಅಡುಗೆ ಹಾಗೂ ವಾಣಿಜ್ಯ ಸಿಲಿಂಡರ್‌ಗಳನ್ನು ಮೂರರಿಂದ ನಾಲ್ಕು ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಬೀದಿ ಬದಿ ಹೋಟೆಲ್ ನಡೆಸುವರು, ಚಿಕನ್, ಮಟನ್ ಅಂಗಡಿ ಮಾಲೀಕರು ಒಂದು ದಿನ ವ್ಯಾಪಾರ ನಿಲ್ಲಿಸಿದರೂ ಮುಂದೆ ಕಷ್ಟವಾಗಲಿದೆ ಎಂದು, ಏಜೆನ್ಸಿಯವರು ಕೇಳಿದಷ್ಡು ಹಣ ಕೊಟ್ಟು ವಾಣಿಜ್ಯ ಸಿಲಿಂಡರ್ ಖರೀದಿ ಮಾಡುತ್ತಿದ್ದಾರೆ. ಗ್ರಾಹಕರು ನೇರವಾಗಿ ಕೇಳಿದರೆ, ಸಿಲಿಂಡರ್ ಇಲ್ಲ ಎನ್ನುವವರು, ಕಾಳಸಂತೆಯಲ್ಲಿ ಮಾರಾಟ ಮಾಡಲು ಎಲ್ಲಿಂದ ತರುತ್ತಾರೆ ಎಂದಿರುವ ಅವರು, ಈ ರೀತಿಯ ಅಕ್ರಮಗಳು ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.ಇದನ್ನು ನೋಡಿದರೆ ಕಾಳಸಂತೆ ದಂಧೆಕೋರರಿಗೆ ಯಾರು ಬೆಂಬಲ ನೀಡುತ್ತಿದ್ದಾರೆ ಎಂಬುದು ಬಯಲಾಗಬೇಕು. ಏಕೆಂದರೆ ಕೆಲ ಸಣ್ಣಪುಟ್ಟ ಬೀದಿ ಬದಿ ವ್ಯಾಪಾರಿಗಳು ಹೋಟೆಲ್ ಉದ್ಯಮವನ್ನೇ ಮುಖ್ಯ ಆಧಾರವಾಗಿಸಿಕೊಂಡಿದ್ದಾರೆ. ಅಂಥವರಿಗೆ ಸಿಲಿಂಡರ್ ಕೊಡದೆ ಇದ್ದರೆ ಹೇಗೆ ಎಂದಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಮೊದಲು ಕಾಳಸಂತೆ ವ್ಯಾಪಾರಕ್ಕೆ ಕಡಿವಾಣ ಹಾಕುವ ಮೂಲಕ ಗೃಹಬಳಕೆ ಹಾಗೂ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಗೃಹಬಳಕೆ ಗ್ರಾಹಕರು ೨೬ ದಿನಗಳಲ್ಲ, ತಿಂಗಳು ಕಳೆದರೂ ಬುಕ್ ಮಾಡಿದ ಸಿಲಿಂಡರ್ ಮನೆ ಸೇರುತ್ತಿಲ್ಲ. ಇದರಿಂದ ಮಕ್ಕಳ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಮನೆಯವರು ಅದರಲ್ಲೂ ತಾಯಂದಿರು ಅನೇಕ ರೀತಿಯ ತೊಂದರೆ ಪಡುವಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಸಮರ್ಪಕವಾಗಿ ಸಿಲಿಂಡರ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಘು ಆಗ್ರಹಿಸಿದ್ದಾರೆ.