ಭಾವಸಾರ ಕ್ಷತ್ರಿಯ ಸಮಾಜ ಶ್ರೀಮಂತ ಸಮಾಜವಾಗಿದೆ. ಸರ್ಕಾರದ ಯಾವುದೇ ಅನುದಾನವನ್ನು ಬಳಸಿಕೊಳ್ಳದೆ ಸುಮಾರು ₹2.5 ಕೋಟಿ ವೆಚ್ಚದಲ್ಲಿ ಶ್ರೀಮಂತ ದೇವಾಲಯವನ್ನು ಕಟ್ಟಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಹೇಳಿದ್ದಾರೆ.

- ಚನ್ನಗಿರಿ ಶ್ರೀ ವಿಠಲ ರುಕುಮಾಯಿ ನೂತನ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಭಾವಸಾರ ಕ್ಷತ್ರಿಯ ಸಮಾಜ ಶ್ರೀಮಂತ ಸಮಾಜವಾಗಿದೆ. ಸರ್ಕಾರದ ಯಾವುದೇ ಅನುದಾನವನ್ನು ಬಳಸಿಕೊಳ್ಳದೆ ಸುಮಾರು ₹2.5 ಕೋಟಿ ವೆಚ್ಚದಲ್ಲಿ ಶ್ರೀಮಂತ ದೇವಾಲಯವನ್ನು ಕಟ್ಟಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಹೇಳಿದರು.

ಬುಧುವಾರ ಪಟ್ಟಣದ ಗಣಪತಿ ವೃತ್ತದಲ್ಲಿ ಶ್ರೀ ವಿಠ್ಠಲ ರುಕುಮಾಯಿ ನೂತನ ದೇವಾಲಯ ಲೋಕಾರ್ಪಣೆ, ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಗೋಪುರ ಕಲಶಾರೋಹಣದ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೇವಾಲಯಗಳು ಭವ್ಯವಾಗಿ ನಿರ್ಮಾಣಗೊಂಡಂತೆ ಮನುಷ್ಯರಲ್ಲಿಯೂ ಸಹಕಾರ, ಸಹಬಾಳ್ವೆ, ಸನ್ನಡತೆಯಂತಹ ಗುಣಗಳು ಬರಬೇಕಾಗಿದೆ. ಪರಿಸರ, ಕೃಷಿ, ಆಡಳಿತ, ಆರೋಗ್ಯದಲ್ಲಿ ಸುಧಾರಣೆ ತರಲು ರಾಜ್ಯದಲ್ಲಿರುವ 3 ಸಾವಿರ ಮಠಾಧೀಶರ ನೇತೃತ್ವದಲ್ಲಿ ಸರ್ವೋದಯದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ದೇವಾಲಯಗಳನ್ನು ಕಟ್ಟುವಾಗ ಇರುವ ಸಂಘಟನೆ, ಹುಮ್ಮಸ್ಸು ಕೊನೆಯವರೆಗೂ ಇರಬೇಕಾಗಿದೆ. ದೇವಾಲಯ ಕಟ್ಟಿದ ನಂತರ ಪ್ರತಿದಿನ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಬೇಕು. ಶಾಸಕನಾಗಿದ್ದ ಸಂದರ್ಭ ಈ ದೇವಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೆ. ಸಮಾಜ ಬಾಂಧವರ ಸಹಕಾರದಿಂದ ಇಷ್ಟೊಂದು ಸುಂದರ ದೇವಾಲಯ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿ, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಜಿ.ಪಿ. ರವಿಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜದ ಪ್ರಮುಖರಾದ ಗಜೇಂದ್ರ, ಕುಬೇಂದ್ರೋಜಿ ರಾವ್, ಡಿ.ಸಿ. ಕುಮಾರ ಸ್ವಾಮಿ, ಪಿ.ಬಿ.ನಾಯಕ, ಚ.ಮ. ಗುರುಸಿದ್ದಯ್ಯ, ಅಮಾನುಲ್ಲಾ, ಮೂರ್ತಿ, ಜ್ಯೋತಿ ಕೊಟ್ರೇಶ್ ಕೋರಿ, ರಾಮಚಂದ್ರ ಪ್ರಜಾಪತ್, ಸಿ.ಕೆ.ಎಚ್. ಮಹೇಶ್ವರಪ್ಪ, ಪ.ನ.ಕೃಷ್ಣ ಉಪಾಧ್ಯ, ಶಾಮ್ ಸುಂದರ್, ರಾಜಣ್ಣ ಸೇರಿದಂತೆ ಪಟ್ಟಣದ ಎಲ್ಲ ಸಮಾಜಗಳ ಪ್ರಮುಖರು ಹಾಜರಿದ್ದರು.

- - -

-19ಕೆಸಿಎನ್ಜಿ1: ಧಾರ್ಮಿಕ ಸಮಾರಂಭವನ್ನು ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ನೆರವೇರಿಸಿದರು. ಪಾಂಡೋಮಟ್ಟಿ ಶ್ರೀ, ಹಿರೇಮಠದ ಶ್ರೀ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತಿತರರು ಇದ್ದರು.