ಕೇರಳ ಮಾದರಿಯಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಲಿ: ರಾಘವೇಂದ್ರ ಹಿಟ್ನಾಳ

| Published : Sep 20 2024, 01:32 AM IST

ಕೇರಳ ಮಾದರಿಯಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಲಿ: ರಾಘವೇಂದ್ರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳ ಮಾದರಿಯಲ್ಲಿ ನಮ್ಮ ರಾಜ್ಯ ಸಹ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ । ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೇರಳ ಮಾದರಿಯಲ್ಲಿ ನಮ್ಮ ರಾಜ್ಯ ಸಹ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದಲ್ಲಿ ಕೊಪ್ಪಳ ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರ ಪ್ರಶಸ್ತಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರಾಗಿ ರಾಷ್ಟ್ರದ ಅತ್ಯುನ್ನತ ಸ್ಥಾನ ಪಡೆದವರು ಸರ್ವಪಲ್ಲಿ ರಾಧಾಕೃಷ್ಣನ್‌ರವರು. ಶಿಕ್ಷಕರು ನಮ್ಮ ದೇಶದ ನಿರ್ಮಾಪಕರು. ಶಿಕ್ಷಣದಿಂದಲೇ ಎಲ್ಲವೂ ಸಾಧಿಸಲು ಸಾಧ್ಯ. ಕೇರಳದ ಶಿಕ್ಷಣ ಎಲ್ಲರಿಗೂ ಮಾದರಿಯಾಗಿದೆ. ನಮ್ಮ ರಾಜ್ಯವನ್ನೂ ಸಹ ಆ ಸ್ಥಾನಕ್ಕೆ ಒಯ್ಯುವ ಶಕ್ತಿ ಶಿಕ್ಷಕರಿಗಿದೆ ಎಂದರು.

ಹಳೆ ಮೈಸೂರು ಭಾಗಗಳಿಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ. ಸರ್ಕಾರ ಶಾಲೆಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದರೂ ಶೈಕ್ಷಣಿಕ ಪ್ರಗತಿ ಕಂಡುಬರುತ್ತಿಲ್ಲ, ಇದು ಬದಲಾಗಬೇಕಿದೆ. ಅನುದಾನರಹಿತ ಶಾಲೆಗಳಿಗೆ ಸವಲತ್ತು ಕೊಡಿಸುವ ಕುರಿತು ಕಲ್ಯಾಣ ಕರ್ನಾಟಕ ಮಂಡಳಿಯಲ್ಲಿ ಚರ್ಚೆ ಮಾಡಿದ್ದೇವೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಂತಾಗಬೇಕು. ಮಕ್ಕಳಲ್ಲಿಯ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕು. ಪಾಲಕರೂ ಸಹ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಹೆಚ್ಚು ಅನುದಾನ ಕೊಡುವ ಕೆಲಸ ಮಾಡಿದ್ದೇವೆ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಪ್ರಮಾಣ ಅಧಿಕವಾಗಿದ್ದರೂ ಜ್ಞಾನ ಸಂಪಾದನೆ ಮಾತ್ರ ಕಡಿಮೆಯಾಗುತ್ತಿದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದುಕೊಂಡವರಿಗೆಯೇ ಕಷ್ಟಗಳು ಬರುತ್ತವೆ. ಬದುಕಿನಲ್ಲಿ ಎಲ್ಲ ಸವಾಲು ಎದುರಿಸುವ ಧೈರ್ಯ ಗಳಿಸಿಕೊಳ್ಳಬೇಕು. ಇದರಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಇನ್ಸೈಟ್ಸ್ ಐಎಎಸ್ ಸಂಸ್ಥಾಪಕ ವಿನಯಕುಮಾರ ಜಿ.ಬಿ. ಉಪನ್ಯಾಸ ನೀಡಿದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಟಿ.ಎಸ್., ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಕುಸ್ಮಾ ಸಂಘಟನೆಯ ಅಧ್ಯಕ್ಷ ಶಾಹೀದಹುಸೇನ ತಹಸೀಲ್ದಾರ್, ಕಾರ್ಯದರ್ಶಿ ನಾಗರಾಜ ಗುಡಿ, ಪತ್ರಕರ್ತ ಸಿರಾಜ್ ಬಿಸರಳ್ಳಿ, ಮಂಜುನಾಥ ದಿವಟರ್, ಪ್ರವೀಣ ರೋಣದ, ಶಿವಪ್ಪ ಶೆಟ್ಟರ್, ಸುಮನ್ ಎಸ್., ಮಹ್ಮದ್ ಅಲೀಮುದ್ದೀನ್, ಶಿವನಗೌಡ ಪೋಲಿಸ್ ಪಾಟೀಲ್, ರಮೇಶ ಗುಡದಳ್ಳಿ, ಶಿವಾನಂದ ಸೇರಿ ಜಿಲ್ಲೆಯ ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳಿದ್ದರು.

ಹಿರಿಯ ಸಾಧಕರಾದ ಬಸವರಾಜ್ ಬಳ್ಳೊಳ್ಳಿ, ಸಂಗೀತಾ ಕಲ್ಲೇಶರಿಗೆ ಸನ್ಮಾನಿಸಲಾಯಿತು. ೬೦ ಉತ್ತಮ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಪ್ರಶಸ್ತಿ ವಿತರಿಸಲಾಯಿತು.