ಮಾಧ್ಯಮದವರೊಂದಿಗೆ ಮಾತನಾಡಿದ ಸೂಫಿ ಹಾಜಿ, ಈ ಮಸೂದೆ ಶಾಸನಸಭೆಯಲ್ಲಿ ಅಂಗೀಕಾರಗೊಂಡಿರುವುದರಿಂದ ಜಮ್ಮಾ ಹಿಡುವಳಿದಾರರ ಬಹುಕಾಲದ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ. ಇದಕ್ಕಾಗಿ ಕೊಡವ ಮುಸ್ಲಿಂ ಸಮುದಾಯದ ಪರವಾಗಿ ಪೊನ್ನಣ್ಣನವರನ್ನು ಸೇರಿದಂತೆ ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗಿನ ಜಮ್ಮಾ-ಬಾಣೆ ಭೂಮಿ ವಿವಾದಗಳ ಪರಿಹಾರಕ್ಕಾಗಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಶಾಸನಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ-2025 ಬೇರೆ ಬೇರೆ ಕಾನೂನುಗಳ ನೆಪಗಳಿಂದ ಮುಂದೆಂದೂ ಜನರಿಗೆ ಅಡ್ಡಿಯಾಗದಿರಲಿ. ಈ ನಿಟ್ಟಿನಲ್ಲಿ ತಿದ್ದುಪಡಿ ಕಾನೂನು ಅನುಷ್ಠಾನಗೊಳಿಸುವ ಸಂದರ್ಭದಲ್ಲೇ ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಈ ತಿದ್ದುಪಡಿ ಮಸೂದೆ ಕೊಡಗಿನ ಜನರ ಭಾವನೆಗೆ ಪೂರಕವಾಗಿ ಶಾಶ್ವತವಾಗಿರಿಸಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಬಳಿ ಮನವಿ ಮಾಡಿದರು.ವಿರಾಜಪೇಟೆ ಶಾಸಕರ ಗೃಹ ಕಚೇರಿಯಲ್ಲಿ ಭಾನುವಾರ ಪೊನ್ನಣ್ಣ ಅವರನ್ನು ಭೇಟಿ ಮಾಡಿದ ಕೆಎಂಎ ಆಡಳಿತ ಮಂಡಳಿ ಪದಾಧಿಕಾರಿಗಳ ನಿಯೋಗ, ಕೊಡಗಿನ ಜಮ್ಮಾ ಹಿಡುವಳಿದಾರರನ್ನು ದಶಕಗಳಿಂದ ಕಾಡುತ್ತಿದ್ದ ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ಕರ್ನಾಟಕ ಕಂದಾಯ ಕಾನೂನು 1964ರ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೊನ್ನಣ್ಣ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸನ್ಮಾನಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸೂಫಿ ಹಾಜಿ, ಈ ಮಸೂದೆ ಶಾಸನಸಭೆಯಲ್ಲಿ ಅಂಗೀಕಾರಗೊಂಡಿರುವುದರಿಂದ ಜಮ್ಮಾ ಹಿಡುವಳಿದಾರರ ಬಹುಕಾಲದ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ. ಇದಕ್ಕಾಗಿ ಕೊಡವ ಮುಸ್ಲಿಂ ಸಮುದಾಯದ ಪರವಾಗಿ ಪೊನ್ನಣ್ಣನವರನ್ನು ಸೇರಿದಂತೆ ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು. ಕೊಡಗಿನಲ್ಲಿ ಜಮ್ಮಾ-ಬಾಣೆ ಭೂಮಿಯು ಕುಟುಂಬ ಆಸ್ತಿಯಾಗಿ, ಜಂಟಿ ಕುಟುಂಬದ ಸದಸ್ಯರ ನಡುವೆ ಹಂಚಿಕೆಯಾಗುತ್ತಿತ್ತು. ಆದರೆ, ಭೂ ದಾಖಲೆಗಳಲ್ಲಿ ಪಟ್ಟೆದಾರರ (ಕುಟುಂಬದ ಮುಖ್ಯಸ್ಥ) ಹೆಸರೇ ಮುಂದುವರೆದು ವಂಶಪರಂಪರೆಯಿಂದ ಬಂದ ಸದಸ್ಯರ ಹೆಸರನ್ನು ಸೇರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಭೂಮಿ ವಹಿವಾಟು, ಉತ್ತರಾಧಿಕಾರ ಮತ್ತು ಸಾಲ ಪಡೆಯುವಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದವು. ಇದೀಗ ತಿದ್ದುಪಡಿ ಮಸೂದೆಯಿಂದ ಕೊಡಗಿನ ಜಮ್ಮಾ-ಬಾಣೆ ಭೂಮಿ ಹೊಂದಿರುವ ಸಾವಿರಾರು ಕುಟುಂಬಗಳ ಬಹುಕಾಲದ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಎಂಬ ಭರವಸೆಯಿರುವುದಾಗಿ ಹೇಳಿದರು.ಶಾಸಕರನ್ನು ಸನ್ಮಾನಿಸಿದ ಸಂದರ್ಭದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ನ ಆಡಳಿತ ಮಂಡಳಿ ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಸಂಘಟನಾ ಕಾರ್ಯದರ್ಶಿ ಮೀತಲ್ತಂಡ ಇಸ್ಮಾಯಿಲ್, ಹಿರಿಯ ನಿರ್ದೇಶಕರಾದ ಚಿಮ್ಮಿಚೀರ ಇಬ್ರಾಹಿಂ ಹಾಜಿ, ನಿರ್ದೇಶಕರಾದ ಮಂಡೇಂಡ ಎ. ಮೊಯ್ದು, ಕೋಳುಮಂಡ ರಫೀಕ್, ಕತ್ತಣಿರ ಅಂದಾಯಿ, ಕುಂಡಂಡ ರಜ್ಹಾಕ್, ಪರವಂಡ ಎ. ಸಿರಾಜ್ ಹಾಗೂ ಕೆಎಂಎ ಸದಸ್ಯರೂ ಆಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಪಟ್ಟಿಯಡ ಎ. ಹನೀಫ್ ಅವರು ಉಪಸ್ಥಿತರಿದ್ದರು.
