ಜೀವನದಲ್ಲಿ ಸತ್ಯ, ನಿಷ್ಟೆ ಇರಲಿ: ನ್ಯಾಯಾಧೀಶ ಸದಾನಂದ ನಾಯಕ

| Published : Mar 29 2025, 12:30 AM IST

ಜೀವನದಲ್ಲಿ ಸತ್ಯ, ನಿಷ್ಟೆ ಇರಲಿ: ನ್ಯಾಯಾಧೀಶ ಸದಾನಂದ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ನಿತ್ಯ ಜೀವನದಲ್ಲಿ ಅವರವರ ವೃತ್ತಿಗೆ ತಕ್ಕಂತೆ ಶ್ರಮಿಸುತ್ತಾರೆ. ಇದರಲ್ಲಿ ಸತ್ಯ ಮತ್ತು ನಿಷ್ಟೆ ಇದ್ದಾಗ ಮಾತ್ರ ಉತ್ತಮ ಜೀವನ ಸಾಗಿಸಲು ಪೂರಕವಾಗುತ್ತದೆ.

ಗಂಗಾವತಿ:

ಜೀವನದಲ್ಲಿ ಸತ್ಯ, ನಿಷ್ಟೆ ಇದ್ದರೆ ಬದುಕು ಚೆಂದ ಎಂದು ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಧೀಶ ಸದಾನಂದ ನಾಯಕ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರುಗಿದ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾನೂನು ಹಾಗೂ ಜೀವನ ಮೌಲ್ಯಗಳು ವಿಷಯ ಬಗ್ಗೆ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿತ್ಯ ಜೀವನದಲ್ಲಿ ಅವರವರ ವೃತ್ತಿಗೆ ತಕ್ಕಂತೆ ಶ್ರಮಿಸುತ್ತಾರೆ. ಇದರಲ್ಲಿ ಸತ್ಯ ಮತ್ತು ನಿಷ್ಟೆ ಇದ್ದಾಗ ಮಾತ್ರ ಉತ್ತಮ ಜೀವನ ಸಾಗಿಸಲು ಪೂರಕವಾಗುತ್ತದೆ ಎಂದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಮಾತನಾಡಿ, ಮಕ್ಕಳು ಮೊಬೈಲ್‌ನಿಂದ ಹೊರ ಬರುವಂತೆ ಪಾಲಕರು ಮನವೊಲಿಸಬೇಕು. ಬೇಡವಾದಕ್ಕೆ ದೂರುವಿಡುವಂತೆ ಸಲಹೆ ನೀಡಿದರು.

ಪಾಲಕರು ಮಕ್ಕಳನ್ನು ಮಿತ್ರರಂತೆ ಕಾಣಿ, ಅವರಿಗೆ ಉತ್ತಮ ಸಲಹೆ ನೀಡಿ ಮುಂದಿನ ಭವಿಷ್ಯದ ಕಡೆಗೆ ಯೋಚಿಸುವಂತೆ ತಿಳಿಸಬೇಕೆಂದ ಅವರು, ವಯಸ್ಸಿಗೆ ತಕ್ಕಂತೆ ಏನೇನು ಘಟನೆಗಳು ನಡೆಯುತ್ತವೆ. ಗಂಗಾವತಿ ನಗರದಲ್ಲಿ ನಡೆದಿರುವ ಹಲವಾರು ಘಟನೆಗಳು ನಮ್ಮ ಮುಂದೆ ಸಾಕ್ಷಿಯಾಗಿವೆ. ಕಾರಣ ಮಕ್ಕಳ ಬಗ್ಗೆ ಪಾಲಕರು ಜಾಗೃತರಾಗಿರಿ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಮಾತನಾಡಿ, ಸುಪ್ರೀಂಕೋರ್ಟ್‌ನಿಂದ ತಾಲೂಕು ಕೋರ್ಟ್‌ ವರೆಗೂ ಕಾನೂನು ಸೇವಾ ಸಮಿತಿಗಳಿದ್ದು ಸಾರ್ವಜನಿಕರು ಇದರ ಪ್ರಯೋಜನೆ ಪಡೆಯಬೇಕೆಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಇಲ್ಲದಿದ್ದರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೋಡಗಿ ದರೋಡೆ, ಕಳ್ಳತನ, ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ ಎಂದು ತಿಳಿ ಹೇಳಿದರು.

ವಕೀಲ ನಾಗರಾಜ್ ಗುತ್ತೆದಾರ ಆಶಯ ನುಡಿ ವ್ಯಕ್ತಪಡಿಸಿದರು. ಇದೇ ವೇಳೆ ನ್ಯಾಯಾಧೀಶರನ್ನು ಸನ್ಮಾನಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ನಾಯಕ, ಹಿರಿಯ ವಕೀಲರಾದ ಮಲ್ಲಪ್ಪ ಬೆಂಚಮಟ್ಟಿ, ಕೃಷ್ಣ ದೇಶಪಾಂಡೆ, ಸೈಯದ್ ಹಾಸಿಮೂದದೀನ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ರುದ್ರೇಶ ಆರಾಳ, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ, ತಾಲೂಕಾಧ್ಯಕ್ಷ ರುದ್ರೇಶ ಆರಾಳ, ವಕೀಲ ವಿ.ಎಸ್. ಪಾಟೀಲ್, ಮಂಜುನಾಥ ಎಚ್.ಎಂ., ಶರದಕುಮಾರ ದಂಡಿನ ಇದ್ದರು.