ಜವಾಬ್ದಾರಿ ಸ್ಥಾನದಲ್ಲಿರುವವರು ಮಾತನಾಡುವಾಗ ಹಿಡಿತ ಇಟ್ಟುಕೊಳ್ಳಬೇಕು ಎಂದು ಶಾಸಕ ಆರ್‌.ವಿ. ದೇಶಪಾಂಡೆ ಸಂಸದ ಕಾಗೇರಿಗೆ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಶಿರಸಿ

ಜವಾಬ್ದಾರಿ ಸ್ಥಾನದಲ್ಲಿರುವವರು ಮಾತನಾಡುವಾಗ ಹಿಡಿತ ಇಟ್ಟುಕೊಳ್ಳಬೇಕು ಎಂದು ಶಾಸಕ ಆರ್‌.ವಿ. ದೇಶಪಾಂಡೆ ಸಂಸದ ಕಾಗೇರಿಗೆ ತಿರುಗೇಟು ನೀಡಿದರು.

ಶನಿವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ ₹56 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಹಣ ನೀಡುವುದಿಲ್ಲ. ಕಾಂಗ್ರೆಸ್ ಸರ್ಕಾರದ ಸಾಧನೆ ಜನರಿಗೆ ತಿಳಿಸುವ ಉದ್ದೇಶದಿಂದ 1 ಸಾವಿರ ದಿನ ಪೂರೈಸಿದ ಹಿನ್ನೆಲೆ ಹಾವೇರಿಯಲ್ಲಿ ಸಾಧನಾ ಸಮಾವೇಶ ನಡೆಸಲಾಗಿದೆ ಎಂದರು.

ಕುಮಟಾ-ಶಿರಸಿ ಜಿಲ್ಲೆಯ ಮುಖ್ಯ ರಸ್ತೆಯಾಗಿದ್ದು, ಹಲವು ವರ್ಷಗಳಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಖಾನಾಪುರ-ಅನಮೋಡ, ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಇದರ ಕುರಿತು ಕೇಂದ್ರ ಸರ್ಕಾರಕ್ಕೆ ಸಂಸದ ಕಾಗೇರಿ ಪತ್ರ ಬರೆದಿದ್ದಾರೆಯೇ? ತಾವು ಶಾಸಕರಾಗಿದ್ದ ನೀವು ಏನು ಅಭಿವೃದ್ಧಿ ಮಾಡಿದ್ದಿರೀ? ನಾನು ಮಂತ್ರಿಯಾಗಿದ್ದ ವೇಳೆ ಶಿರಸಿ-ಸಿದ್ದಾಪುರದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕೆ ಮಾಡಲು ಏನು ಪುರಾವೆಗಳಿವೆ. ಏನು ಭ್ರಷ್ಟಾಚಾರವಾಗಿದೆ ಎಂಬುದು ಸಾದರಪಡಿಸಿ, ಹೇಳಿಕೆ ನೀಡಲಿ ಎಂದು ಸವಾಲೆಸೆದರು.

ಬೆಳೆವಿಮೆ ಮಾಡಿದ ಬಳಿಕ ಬೆಳೆಯ ಮೇಲೆ ದುಷ್ಪರಿಣಾಮ ಉಂಟಾದರೆ ತಕ್ಷಣ ಸ್ಪಂದಿಸಬೇಕು. ವಿಮೆ ಕಟ್ಟಿಸಿಕೊಳ್ಳುತ್ತಾರೆ. ಪರಿಹಾರ ನೀಡಲು ವಿಳಂಬ ಮಾಡುತ್ತಾರೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಕಂಪೆನಿ ಬೇಜವಾಬ್ದಾರಿಯಿಂದ ವರ್ತಿಸುತ್ತವೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷನಾದ ಮೇಳೆ 3 ವರದಿ ಸಲ್ಲಿಕೆ ಮಾಡಿದ್ದೇನೆ. ಸರ್ಕಾರ ಸ್ವೀಕಾರ ಮಾಡಿದ್ದು, ಅನುದಾನವಿಲ್ಲ. ಅವುಗಳನ್ನು ಸುಖಾಸುಮ್ಮನೆ ಇಟ್ಟಿದ್ದಾರೆ. ಕಾರ್ಯಾರಂಭ ಮಾಡುತ್ತಿಲ್ಲ. ಅವುಗಳನ್ನು ಸ್ಥಗಿತಗೊಳಿಸಲು ಸಲ್ಲಿಕೆ ಮಾಡಲಾಗಿದೆ. ಪ್ರವಾಸೋದ್ಯಮ ಬಹಳ ದೊಡ್ಡ ಉದ್ಯಮ, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರವಾಸೋದ್ಯಮ ಬೆಳೆದಾಗ ಆದಾಯ ಹೆಚ್ಚುತ್ತದೆ ಎಂದರು.

ಎಐಸಿಸಿ ಹಿಂದುಳಿದ ವರ್ಗದ ಸಂಚಾಲಕ ನಾಗರಾಜ ನಾರ್ವೇಕರ್, ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ ದೀಪಕ ಹೆಗಡೆ ದೊಡ್ಡೂರ, ಶಿರಸಿ ಬ್ಲಾಕ್‌ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ ದಾವಣಗೆರೆ, ಪ್ರಮುಖರಾದ ನಾಗರಾಜ ಮಡಿವಾಳ, ರಮೇಶ ದುಭಾಶಿ ಮತ್ತಿತರರು ಇದ್ದರು.ಅಧಿಕಾರದ ಹಿಂದೆ ಓಡಿದವನಲ್ಲ

ಸಚಿವ ಸಂಪುಟ ವಿಸ್ತರಣೆಯಾದರೆ, ನಿಮಗೆ ಮಂತ್ರಿ ಸ್ಥಾನ ದೊರೆಯುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನಾನು ಅಧಿಕಾರದ ಹಿಂದೆ ಓಡಿಲ್ಲ.‌ ಮುಂದೆಯೂ ಓಡುವುದಿಲ್ಲ ಎಂದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಇಬ್ಬರೂ ಹೇಳಿದ್ದಾರೆ. ‌ಹೈಕಮಾಂಡ್ ಇದರ ಬಗ್ಗೆ ನಿರ್ಣಯ ಮಾಡಬೇಕು ಎಂದು ಆರ್‌.ವಿ. ದೇಶಪಾಂಡೆ ಹೇಳಿದರು.