. ಮಹಿಳೆಯಲ್ಲಿ ಪ್ರತಿಭೆಗೆ ಯಾವುದೇ ಕೊರತೆ ಇಲ್ಲ. ಆದರೆ, ಸೂಕ್ತ ಅವಕಾಶದ ಅಗತ್ಯವಿದೆ. ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧಿಸಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ ಎಂದು ಹಿರಿಯ ಸಾಹಿತಿ ಸಾವಿತ್ರಿ ಮಜುಂದಾರ ತಿಳಿಸಿದರು.

ಗದಗ: ಸಮಾಜದಲ್ಲಿ ಮಹಿಳೆ ಎರಡು ರೀತಿಯ ಸಾಧನೆಗೆ ಮುಂದಾಗಬೇಕಿದೆ. ಒಂದು ಕೌಟುಂಬಿಕ ಸಾಧನೆಯಾದರೆ ಮತ್ತೊಂದು ಸಾಮಾಜಿಕ ಸಾಧನೆ. ಮಹಿಳೆಯಲ್ಲಿ ಪ್ರತಿಭೆಗೆ ಯಾವುದೇ ಕೊರತೆ ಇಲ್ಲ. ಆದರೆ, ಸೂಕ್ತ ಅವಕಾಶದ ಅಗತ್ಯವಿದೆ. ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧಿಸಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ ಎಂದು ಹಿರಿಯ ಸಾಹಿತಿ ಸಾವಿತ್ರಿ ಮಜುಂದಾರ ತಿಳಿಸಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಹಾಗೂ ಮಹಿಳಾ ಸಬಲೀಕರಣ ಘಟಕದ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆ ಆಧುನಿಕ ಸವಾಲುಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಗೆ ಶಿಕ್ಷಣ, ರಾಜಕೀಯ, ತಂತ್ರಜ್ಞಾನ ಎಲ್ಲದರಲ್ಲೂ ಪ್ರಾತಿನಿಧ್ಯ ಸಿಗುತ್ತಿದೆ. ಆದರೆ. ಹಕ್ಕುಗಳು ಸಿಗುತ್ತಿಲ್ಲ. ಮಹಿಳಾ ಹಕ್ಕುಗಳು ಭಿಕ್ಷೆಯಲ್ಲ ಎನ್ನುವುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಇಂದಿಗೂ ಸಂಪೂರ್ಣ ಸಮಾನತೆ ಸಾಧ್ಯವಾಗಿಲ್ಲ. ಆರ್ಥಿಕ ಸಮಾನತೆಯಂತೂ ಮಹಿಳೆಗೆ ದೂರದ ಬೆಟ್ಟವಾಗಿದೆ. ಹೆಣ್ಣಿನ ಹೆಸರಿನಲ್ಲಿ ಇಂದಿಗೂ ಆಸ್ತಿಯಿಲ್ಲ. ಇದ್ದರೂ ಆದಾಯ ತೆರಿಗೆ ಭಯಕ್ಕಾಗಿ ಸ್ವಲ್ಪ ಆಸ್ತಿ ಮಹಿಳೆಯ ಹೆಸರಿನಲ್ಲಿದೆ. ಹೆಣ್ಣಿನ ವಿದ್ಯೆ ಅಡುಗೆ ಮನೆಗೆ ಸೀಮಿತಗೊಂಡಿದೆ. ಯುದ್ಧದ ಕೆಟ್ಟ ಪರಿಣಾಮಗಳು ಮಹಿಳೆಯ ಮೇಲೆಯೇ ಹೆಚ್ಚು ಎನ್ನುವುದು ಸತ್ಯದ ಸಂಗತಿ. ಪಿತೃತ್ವ ವ್ಯವಸ್ಥೆ ಭಾರತೀಯ ಪರಂಪರೆಯ ಕಪ್ಪುಚುಕ್ಕೆ. ಮಾತೃತ್ವ ವ್ಯವಸ್ಥೆ ಹೊಂದಿರುವ ಕೇರಳ ಇದಕ್ಕೆ ಹೊರತಾಗಿದೆ. ಹೆಣ್ಣು ಅಧಿಕಾರದಲ್ಲಿದ್ದರೂ ಕಡೆಗಣಿಸಲಾಗುತ್ತದೆ. ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಿದರೆ ದೇಶದ ಜಿಡಿಪಿ ಹೆಚ್ಚುತ್ತದೆ. ಎಲ್ಲ ಪುರುಷರೂ ಪುರುಷವಾದಿಗಳಲ್ಲ, ಎಲ್ಲ ಮಹಿಳೆಯರೂ ಸ್ತ್ರೀವಾದಿಗಳಲ್ಲ ಎಂದರು.

ಪ್ರಾ. ಡಾ. ಎ.ಕೆ. ಮಠ ಮಾತನಾಡಿ, ಹೆಣ್ಣನ್ನು ದೇವತೆಯನ್ನಾಗಿ ಮಾಡಿ, ಅವಳಿಂದಲೇ ಎಲ್ಲವನ್ನೂ ಕೇಳಲಾಗುತ್ತದೆ. ತ್ಯಾಗ, ಬಲಿದಾನವನ್ನೂ ಮಹಿಳೆಯಿಂದಲೇ ನಿರೀಕ್ಷಿಸಲಾಗುತ್ತದೆ. ಆದರೆ, ಮಹಿಳೆಯನ್ನು ಮಾನವರಂತೆ ನೋಡಲಾಗುತ್ತಿಲ್ಲ. ಈ ಕಾಲದಲ್ಲೂ ಹೆಣ್ಣು ಮಕ್ಕಳನ್ನ ಗೌರವಿಸಿ ಎಂದು ಕೇಳಬೇಕೆಂದರೆ, ಅದು ನಮ್ಮ ದೌರ್ಭಾಗ್ಯ ಎಂದರು.

ಈ ವೇಳೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ ನಿರೂಪಿಸಿದರು. ಪಲ್ಲವಿ ಪ್ರಾರ್ಥಿಸಿದರು. ಶಿಲ್ಪಾ ಮ್ಯಾಗೇರಿ ಪರಿಚಯಿಸಿದರು. ಪ್ರೊ. ವಿಶಾಲ ತೆಳಗಡೆ ಸ್ವಾಗತಿಸಿದರು. ಪ್ರೊ. ಗೌರಿ ಯಳಮಲಿ ವಂದಿಸಿದರು.