ಸಾರಾಂಶ
ಬ್ಯಾಡಗಿ:ಪ್ರಾಕೃತಿಕ ಪ್ರಪಂಚದ ಮೇಲೆ ನಮ್ಮೆಲ್ಲರ ಬದುಕು ಅವಲಂಬಿತವಾಗಿದ್ದು, ನಾವೆಲ್ಲರೂ ಬದುಕುಳಿಯಬೇಕಾದರೆ ನೈಸರ್ಗಿಕ ಪ್ರಪಂಚದ ಕುರಿತು ವಿಶೇಷ ಕಾಳಜಿ ನಮಗಿರಬೇಕು ಎಂದು ಹಿರೇಕೆರೂರಿನ ಸಿಪಿಐ ಬಸವರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರೇ ಉಸಿರು ತಂಡ ಏರ್ಪಡಿಸಿದ್ದ ‘ಸಸಿ’ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಯಂ ಪ್ರೇರಣೆಯಿಂದ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ನಿಲ್ಲಬೇಕಲ್ಲದೇ ಪರಿಸರ ನಾಶಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲದೃಢ ನಿರ್ಧಾರಗಳನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ ಎಂದರು.ಪರಿಸರದ ವಿರುದ್ಧ ಕಾರ್ಯಾಚರಣೆ: ನ್ಯಾಯವಾದಿ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಜಾಗತಿಕ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ, ಆದರೆ ಇದಕ್ಕೆ ವಿರುದ್ಧವಾಗಿ ಪರಿಸರ ನಾಶವಾಗುತ್ತಿದೆ, ಅವಕಾಶ ಸಿಕ್ಕಾಗಲೆಲ್ಲಾ ಹವಾಮಾನ ವೈಪರೀತ್ಯಗಳು ನಮ್ಮ ಬದುಕನ್ನು ದುಸ್ತರಗೊಳಿಸುತ್ತಿವೆ ಎಂದರು.ಅರಣ್ಯ ಸಂರಕ್ಷಣೆ: ಅರಣ್ಯ ಪ್ರದೇಶವನ್ನು ಹೇಗೆ ಉತ್ತಮವಾಗಿ ಸಂರಕ್ಷಿಸಬಹುದು ಎಂಬುದಕ್ಕೆ ಸರ್ಕಾರಗಳು ತಜ್ಞರ ಅಭಿಪ್ರಾಯವನ್ನು ಪಡೆದುಕೊಳ್ಳುವ ಮೂಲಕ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಪರಿಸರದ ಮೇಲೆ ನಡೆಯು ತ್ತಿರುವ ದಾಳಿಗಳ ವಿರುದ್ಧ ಹಾಗೂ ವಿನಾಶದ ಉದ್ದೇಶದಿಂದ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಕಠಿಣ ಕಾನೂನುಗಳನ್ನು ಜಾರಿಗೊಳಿಸುವ ಕೆಲಸವಾಗಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ನಂದೀಶ್ ವೀರನಗೌಡ್ರ, ಮಲ್ಲೇಶ ಭಂಡಾರಿ, ರೋಟರಿ ಸಂಸ್ಥೆ ಅಧ್ಯಕ್ಷ ಮಾಲತೇಶ ಉಪ್ಪಾರ, ರಮೇಶ ಮೋಟೆಬೆನ್ನೂರ, ಗಣೇಶ್ ವೆರ್ಣೆಕರ, ವೀರೇಶ ಮತ್ತೀಹಳ್ಳಿ, ಪ್ರದೀಪ್ ಸದ್ದಲಗಿ, ಸಿದ್ದಲಿಂಗಪ್ಪ ಗಡಾದ ಇನ್ನಿತರರರು ಉಪಸ್ಥಿತರಿದ್ದರು.