ವಚನ ಸಾಹಿತ್ಯ ಭಾಷಾಂತರವಾಗಲಿ: ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ

| Published : Jan 22 2025, 12:32 AM IST

ವಚನ ಸಾಹಿತ್ಯ ಭಾಷಾಂತರವಾಗಲಿ: ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಕಾಲಘಟ್ಟದಲ್ಲಿ ವಚನ ಸಾಹಿತ್ಯವನ್ನು ಅರ್ಥ ಮಾಡಿಸುವವರು ಇರಬೇಕು. ಪ್ರಪಂಚದ ಅನೇಕ ಭಾಷೆಗಳಲ್ಲಿ ವಚನ ಸಾಹಿತ್ಯ ಭಾಷಾಂತರ ಮಾಡುವಂತಾಗಬೇಕು.

ಕಾರವಾರ: ವ್ಯಕ್ತಿಗಳು ವೃತ್ತಿಗೆ ಒತ್ತು ಕೊಡದೆ ಕಾಯಕವನ್ನು ಶ್ರದ್ಧೆಯಿಂದ ಮಾಡಿದರೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಅಂಬಿಗರ ಚೌಡಯ್ಯರಂಥ ಮಹಾನ್ ವ್ಯಕ್ತಿಗಳೇ ಸಾಕ್ಷಿ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ವಚನ ಸಾಹಿತ್ಯವನ್ನು ಅರ್ಥ ಮಾಡಿಸುವವರು ಇರಬೇಕು. ಪ್ರಪಂಚದ ಅನೇಕ ಭಾಷೆಗಳಲ್ಲಿ ವಚನ ಸಾಹಿತ್ಯ ಭಾಷಾಂತರ ಮಾಡುವಂತಾಗಬೇಕು. ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆ, ಅನಿಷ್ಟ ಆಚರಣೆಗಳು, ರೂಢಿ, ಸಂಪ್ರದಾಯಗಳನ್ನು ವಚನ ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆ ಮಾಡಿದವರು ಅಂಬಿಗರ ಚೌಡಯ್ಯ ಆಗಿದ್ದಾರೆ. ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.ದೀವಗಿ ಚೇತನಾ ಸೇವಾ ಸಂಸ್ಥೆಯ ಸಂಚಾಲಕಿ ಎ.ಆರ್. ಭಾರತಿ, ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಶಿಕ್ಷಕಿ ವನಿತಾ ಶೇಟ್, ಅಂಬಿಗರ ಸಮುದಾಯದ ಬಾಬು ಅಂಬಿಗ, ಗಣಪತಿ ಮಾಂಗ್ರೆ ಇದ್ದರು.ಮುರ್ಡೇಶ್ವರ ದೇವರ ಸಮುದ್ರ ಯಾನ

ಕಾರವಾರ: ಪ್ರಸಿದ್ಧ ಕ್ಷೇತ್ರ ಮುರ್ಡೇಶ್ವರ ದೇವರ ಸಮುದ್ರ ಯಾನ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ದೇವಾಲಯದಿಂದ ಮುರ್ಡೇಶ್ವರ ದೇವರ ಉತ್ಸವ ಮೂರ್ತಿಯನ್ನು ಬೋಟ್‌ನಲ್ಲಿ ದೇವಿ ದೇವಾಲಯದ ಸಮೀಪ ಕೊಂಡೊಯ್ಯಲಾಗುತ್ತದೆ. ಮುರ್ಡೇಶ್ವರ ದೇವರು ಮಂಗಲ ವಾದ್ಯಗಳೊಂದಿಗೆ ಬೋಟ್‌ನಲ್ಲಿ ತೆರಳಿ ದೇವಿ ದೇವಾಲಯದ ಬಳಿ ಧಾರ್ಮಿಕ ವಿಧಿ ವಿಧಾನ ಪೂರೈಸಿ ಮತ್ತೊಂದು ದೇವಾಲಯದ ತನಕ ತೆರಳಿ ಸ್ವಸ್ಥಾನಕ್ಕೆ ಮರಳುತ್ತದೆ.ಪ್ರಧಾನ ಅರ್ಚಕ ಜಯರಾಮ ಅಡಿ ಹಾಗೂ ಸದಾನಂದ ಭಟ್ ಅವರು ಪೂಜಾ ಕಾರ್ಯ ನೆರವೇರಿಸಿದರು. ನೇತ್ರಾಣಿ ಸಂಸ್ಥೆಯ ಮುಖ್ಯಸ್ಥ ಗಣೇಶ ಹರಿಕಂತ್ರ ತಮ್ಮದೆ ಸಂಸ್ಥೆಯ ಬೋಟ್ ಒದಗಿಸಿ ಸಮುದ್ರಯಾನ ಸೇವೆ ನೆರವೇರಿಸಿದರು.ಶ್ರದ್ಧೆ, ಭಕ್ತಿಯಿಂದ ಗಣೇಶ ಹರಿಕಂತ್ರ ಅವರೂ ಸಮುದ್ರಯಾನದಲ್ಲಿ ಪಾಲ್ಗೊಂಡಿದ್ದರು. ಸುಮಾರು 40ರಷ್ಟು ಜನರು ಬೋಟ್‌ನಲ್ಲಿ ತೆರಳಿದ್ದರು. ಪ್ರತಿವರ್ಷ ಸಂಪ್ರದಾಯದಂತೆ ದೇವರ ಸಮುದ್ರಯಾನ ನಡೆಯುತ್ತಿದೆ. ಜ. 19ರಂದು ಮುರ್ಡೇಶ್ವರ ದೇವರ ರಥೋತ್ಸವ ನಡೆದಿತ್ತು.