ಧಾರವಾಡ: ಮಹಿಳೆಯ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿದ್ದರೂ ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಕೊಲೆ, ಮರ್ಯಾದೆ ಹತ್ಯೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಆ್ಯಸಿಡ್ ದಾಳಿ, ಕೊಲೆ ಹೀಗೆ ಬ್ರೂಣಾವಸ್ಥೆಯಿಂದ ಹಿಡಿದು ಮಸಣ ಸೇರುವವರೆಗೂ ಹಲವು ಬಗೆಯ ಅಗೌರವ, ಅನಾದರಗಳಿಗೆ ಮಹಿಳೆ ಬಲಿಯಾಗುತ್ತಿದ್ದಾಳೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಸೆಸ್) ರಾಜ್ಯ ಕಾರ್ಯದರ್ಶಿ ಬನಶ್ರೀ ಬೇಸರ ವ್ಯಕ್ತಪಡಿಸಿದರು.
ಇಲ್ಲಿಯ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ''''''''ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.ಮಹಿಳಾ ದಿನಾಚರಣೆ ಸಂಭ್ರಮದ ದಿನವಲ್ಲ. ಮಹಿಳೆಯರ ಮೇಲೆ ನಡೆಯುವ ವಿವಿಧ ದೌರ್ಜನ್ಯಗಳಿಗೆ ಕೊನೆಹಾಡಲು ಪಣತೊಡುವ ದಿನವಾಗಬೇಕು ಎಂದು ಪ್ರತಿಪಾದಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷರಾದ ಮಧುಲತಾ ಗೌಡರ್ ಮಾತನಾಡಿ, ಹೆಣ್ಣನ್ನು ಪೂಜಿಸುವ ಈ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಅತ್ಯಂತ ಹೀನಾಯ ಸ್ಥಿತಿಗೆ ತಲುಪುತ್ತಿರುವುದೇಕೆ? ಪ್ರಾಣಿ ಪ್ರಪಂಚದಲ್ಲಿ ಜರುಗದ ವಿಕೃತತೆಗಳು ಮನುಷ್ಯ ಸಮಾಜದಲ್ಲಿ ಏಕೆ ಜರುಗುತ್ತಿವೆ? ಒಂದು ಕಡೆ ಪುರುಷ ಪ್ರಧಾನ ಮನೋಧೋರಣೆ, ಮತ್ತೊಂದೆಡೆ ಬಂಡವಾಳಶಾಹಿ ವ್ಯವಸ್ಥೆಯ ಲಾಭದಾಯಕ ನೀತಿಗಳು. ಭಾರತದ ಆರ್ಥಿಕತೆಯಲ್ಲಿ ಶೇ. 93 ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿದ್ದಾರೆ. ಎಲ್ಲರೂ ಪರಸ್ಪರ ಗೌರವಗಳಿಂದ ಬಾಳುವ ಹೊಸ ಸಮಾಜ ತರುವ ದಿಕ್ಕಿನಲ್ಲಿ ಸಾಗಬೇಕಿದೆ ಎಂದರು.ಎಐಎಂಎಸ್ಸೆಸ್ ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೋಕರೆ ಮಾತನಾಡಿದರು. ದೇವಮ್ಮ ದೇವತ್ಕಲ್, ಮುರುಗಮ್ಮ ಗರಗದ, ಫಕೀರವ್ವ ಅರೇರ, ಕಾಶವ್ವ ತಲ್ವಾರ್ ಇದ್ದರು.