ಕನ್ನಡಪ್ರಭ ವಾರ್ತೆ ದಾವಣಗೆರೆ

ನಿಮ್ಮ ಮುಂದಿನ ಕನಸು, ಗುರಿ, ಸಾಧನೆಗಳು ಮರಳಿನ ಮೇಲೆ ಕಟ್ಟಿದ ಮನೆಗಳಾಗಬಾರದು, ಭದ್ರತೆ ಇರುವುದಿಲ್ಲ. ಕಲ್ಲಿನ ಮೇಲೆ ಕಟ್ಟಿದ ಮನೆಗಳಂತಾಗಲಿ, ಭದ್ರತೆ ಇರುತ್ತದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಮಲ್ಲಿಕಾರ್ಜುನ್ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಇಲ್ಲಿನ ಪಿ.ಜೆ.ಬಡಾವಣೆಯಲ್ಲಿರುವ ಸೆಂಟ್ ಪಾಲ್ಸ್ ಕಾನ್ವೆಂಟ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಸಂಭ್ರಮ ಕಲಾ ವೈಭವ ಉದ್ಘಾಟಿಸಿ ಮಾತನಾಡಿದರು.

ನಿಮ್ಮ ಜೀವನದಲ್ಲಿ ಶಿಕ್ಷಣ, ಕಲಿಕೆ ಕಡೆಗೆ ಹೆಚ್ಚಿನ ಗಮನಹರಿಸಿ. ಕನಸು ಕಾಣಿರಿ, ನಿಮ್ಮ ಮನಸ್ಸು, ನಿಮ್ಮ ಕನಸು ಎಲ್ಲಿವರೆಗೆ ಇರುತ್ತೋ ಅಲ್ಲಿವರೆಗೆ ಓದಿ. ನಿಮ್ಮ ಶಿಕ್ಷಕರ, ತಂದೆ ತಾಯಿಯರ ಸಹಕಾರ ಸದಾ ಇರುತ್ತೆ. ನೀವು ಉನ್ನತ ಸ್ಥಾನಕ್ಕೆ ಹೋಗಿ ಈ ನಾಡಿಗೆ, ಶಾಲೆಗೆ, ನಿಮಗೆ ಪಾಠ ಕಲಿಸಿದ ಗುರುಗಳಿಗೆ, ಪೋಷಕರಿಗೆ ಕೀರ್ತಿ ತನ್ನಿರಿ ಎಂದರು.

ಪ್ರಸ್ತುತ ದಿನಗಳಲ್ಲಿ ನಾನು ನೋಡಿದಂತೆ ವೈದ್ಯಕೀಯ, ತಾಂತ್ರಿಕ, ಯಾಂತ್ರಿಕ, ಐಟಿಐ ವಿಭಾಗ ಸೇರಿದಂತೆ ಎಲ್ಲಾ ಕ್ಷೇತ್ರ ಗಳಲ್ಲಿ ಮಹಿಳೆಯರೇ ಕಾಣುತ್ತಿದ್ದಾರೆ. ಪುರುಷರ ಸಂಖ್ಯೆ ಕಡಿಮೆ ಇದೆ. ನಿಮ್ಮ ಮುಂದಿನ ಸಾಧನೆಗೆ ಈ ವೇದಿಕೆಯ ಮೇಲಿರುವ ನಿಮ್ಮ ಸಿಸ್ಟರ್ಸ್, ಶಿಕ್ಷಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ನಿಮಗೆ ಸ್ಪೂರ್ತಿಯಾಗಲಿದ್ದಾರೆ. ಇನ್ನು10 ವರ್ಷದ ನಂತರ ನಿಮ್ಮನ್ನು ನಾನು ಈ ವೇದಿಕೆಯಲ್ಲಿ ನೋಡುವಂತಾಗಬೇಕು. ಅಂತಹ ಸಾಧಕರು ನೀವಾಗಬೇಕು ಎಂದು ಆಶಿಸಿದರು.


ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಶಾಲೆಯ ಹಳೆಯ ವಿದ್ಯಾರ್ಥಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಕಳೆದ 80 ವರ್ಷಗಳಿಂದ ಈ ವಿದ್ಯಾಸಂಸ್ಥೆ ನಡೆದುಕೊಂಡು ಬರುತ್ತಿದೆ. ಮೊದಲು ಈ ಶಾಲೆಯಲ್ಲಿ ಕೋ- ಏಜುಕೇಶನ್ ಇತ್ತು. ನಾನು ಸಹಾ ಈ ಶಾಲೆ ಹಳೇ ವಿದ್ಯಾರ್ಥಿ. ಅಂದಿನಿಂದ ಈ ಶಾಲೆ ಕಡಿಮೆ ಶುಲ್ಕ, ಉತ್ತಮ ಶಿಕ್ಷಣ, ಶಿಸ್ತು, ಸುರಕ್ಷತೆಗೆ ಹೆಸರಾಗಿದೆ. ಜೊತೆಗೆ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುತ್ತಾ ಬಂದಿದೆ. ಇತ್ತೀಚೆಗೆ ನಡೆದ ಈ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಈ ಶಾಲೆಯಲ್ಲಿ ಓದಿದ ದೇಶ, ವಿದೇಶ, ಹೊರ ರಾಜ್ಯಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಆಗಮಿಸಿದ್ದರು. ನಿಮ್ಮಗಳ ಪರಿಶ್ರಮದಿಂದ ಈ ಶಾಲೆ ಇನ್ನೂ ಉನ್ನತ ಮಟ್ಟಕ್ಕೆ ಬೆಳೆದು ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿಸ್ಟರ್ ಸ್ಟೆಲೋ ಮಾರಿ, ಸಿಸ್ಟರ್ ರಶ್ಮಿ, ಸಿಸ್ಟರ್ ಸುಪ್ರಿಯಾ, ಸಿಸ್ಟರ್ ವೆನಿಸಾ, ಸಿಸ್ಟರ್ ಜೆಸಿಂತಾ, ನಿವೃತ್ತ ಹಿರಿಯ ಶಿಕ್ಷಕಿ ಬಾಲಮಣಿ, ಹಳೆಯ ವಿದ್ಯಾರ್ಥಿಗಳಾದ ಪದ್ಮ ಪ್ರಕಾಶ್, ಗೀತಾ ಮಾಲತೇಶ್, ನಮಿತಾ, ಪುಷ್ಪಲತ, ಶ್ವೇತ, ವರ್ಷಿಣಿ ಜೋಷಿ , ಕೃಪಾರಾಣಿ, ಅಶ್ವಿನಿ ಆಚಾರ್, ಭ್ರಮರಾಂಬಿಕ ಇತರರು ಇದ್ದರು. ಶಿಕ್ಷಕಿ ಜೆಸ್ಸಿ ಸ್ವಾಗತಿಸಿದರೆ, ಕಿರಣ್ ಸಾರ್ ದೈವ ವಾಕ್ಯ ನುಡಿದರು. ಶಿಕ್ಷಕಿ ಎಲಿಸಾ ಅತಿಥಿ ಗಳ ಪರಿಚಯಿಸಿದರು. ಶಿಕ್ಷಕಿ ರಾಗಿಣಿ ವಂದಿಸಿದರು. ನಂತರ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.