ಸಾರಾಂಶ
ಜಿಲ್ಲಾ ಕೇಂದ್ರದಲ್ಲಿ ಅ.17ರಂದು ನಡೆಯುವ ಜಯಂತಿ ಕಾರ್ಯಕ್ರಮ ಹಿನ್ನೆಲೆ ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಎಲ್ಲ ಗಣ್ಯರಿಗೆ ಆಹ್ವಾನ ನೀಡಬೇಕು.
ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಿದ್ರಾಮೇಶ್ವರ ಸೂಚನೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಅ.17ರಂದು ಆಚರಿಸಲಾಗುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡು ಅರ್ಥಪೂರ್ಣ ಆಚರಣೆಗೆ ಕ್ರಮವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ಅ.17ರಂದು ನಡೆಯುವ ಜಯಂತಿ ಕಾರ್ಯಕ್ರಮ ಹಿನ್ನೆಲೆ ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಎಲ್ಲ ಗಣ್ಯರಿಗೆ ಆಹ್ವಾನ ನೀಡಬೇಕು. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಜಯಂತಿ ಆಚರಣೆಗೆ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು. ಮೆರವಣಿಗೆ ಮಾರ್ಗಗಳಲ್ಲಿ ಶುಚಿತ್ವ ಕಾರ್ಯವಾಗಬೇಕು. ಮೆರವಣಿಗೆ ವೇಳೆ ಪೊಲೀಸ್ ಭದ್ರತೆ ಒದಗಿಸಬೇಕು. ಕಾರ್ಯಕ್ರಮ ನಡೆಯುವ ಸಾಹಿತ್ಯ ಭವನದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರಸಭೆಯು ಒದಗಿಸಬೇಕು ಎಂದರು
ವೇದಿಕೆ ಕಾರ್ಯಕ್ರಮದಲ್ಲಿ ನಾಡಗೀತೆ, ಕಲಾವಿದರಿಂದ ಸುಗಮ ಸಂಗೀತ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆಯಬೇಕು. ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳ ಸಹಕಾರ ಅಗತ್ಯವಾಗಿದೆ. ಸಮಾಜದ ಬಂಧುಗಳು ಸೇರಿದಂತೆ ಎಲ್ಲ ಸಮುದಾಯದ ಜನರು ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು ತಳವಾರ ಮಾತನಾಡಿ, ಅ17ರಂದು ಬೆಳಗ್ಗೆ 8.30ಕ್ಕೆ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆಯು ನಗರದ ಶ್ರೀ ಸಿರಸಪ್ಪಯ್ಯನ ಮಠದಿಂದ ಸಾಹಿತ್ಯಭವನದವರೆಗೆ ನಡೆಯಲಿದೆ. ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ, ಪ್ರತಿಭಾನ್ವಿತ ವಿದ್ಯಾರ್ಥಿಗಳು, ಗಣ್ಯರಿಗೆ ಸನ್ಮಾನ, ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಕೊಪ್ಪಳ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ಡಿಡಿಪಿಐ ಶ್ರೀಶೈಲ ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಗದೀಶ ಜೆ.ಎಚ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಸಮಾಜದ ಮುಖಂಡರಾದ ರಾಮಣ್ಣ ಕಲ್ಲನ್ನವರ, ರಾಮಣ್ಣ ಚವಡಕಿ, ಚೆನ್ನಪ್ಪ ತಳವಾರ, ಮಾರ್ಕಂಡೇಶ್ವರ ಕಲ್ಲಣ್ಣನವರ, ಬಸವರಾಜ ಶಹಾಪುರ, ಕೆ.ಎನ್. ಪಾಟೀಲ, ಶರಣಪ್ಪ ನಾಯ್ಕರ, ಸುರೇಶ ಡೊಣ್ಣಿ, ಜೋಗದ ನಾರಾಯಣಪ್ಪ, ಜೋಗದ ಹನುಮಂತಪ್ಪ, ವೀರಭದ್ರಪ್ಪ ನಾಯಕ, ಶೇಖಣ್ಣ ಇಂದ್ರಗಿ, ಬಸನಗೌಡ ಪೋಲಿಸ್ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.