ಸಾರಾಂಶ
ಕಂಪ್ಲಿಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ
ಕನ್ನಡಪ್ರಭ ವಾರ್ತೆ ಕಂಪ್ಲಿತಂಬಾಕು ಸೇವನೆಯಿಂದ ಆರ್ಥಿಕ ನಷ್ಟ ಜತೆಗೆ ಹಲವಾರು ರೋಗಗಳಿಂದ ದುರ್ಬಲರಾಗುತ್ತೇವೆ. ಆದ್ದರಿಂದ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಂಬಾಕು ಸೇವನೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ರಕ್ತಹೀನತೆ ಉಂಟಾಗಿ ಶ್ವಾಸಕೋಶ, ಕರುಳು ರೋಗಗಳಿಗೆ ಬಲಿಯಾಗಬೇಕಾಗುತ್ತದೆ.ತಂಬಾಕು ಸೇವನೆ ಇತರ ವ್ಯಕ್ತಿಗಳಿಗೂ ಮಾರಕವಾಗಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಆದ್ದರಿಂದ ದುಶ್ಚಟಗಳನ್ನು ಮೆಟ್ಟಿ ನಿಂತು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು. ಜತೆಗೆ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂದು ಹೇಳಿದರು.ಟ್ರಸ್ಟ್ನಿಂದ ಸುಜ್ಞಾನ ನಿಧಿ ಶಿಷ್ಯವೇತನ, ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನೀಡುವ, ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆಟೋಪಕರಣ- ಪೀಠೋಪಕರಣ ಒದಗಿಸುವ ಯೋಜನೆಗಳಿದ್ದು, ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಎಸ್. ರಾಮು ಮಾತನಾಡಿ, ತಂಬಾಕು ಸೇವನೆಯಿಂದ ದೂರವಿದ್ದಲ್ಲಿ ಶ್ವಾಸಕೋಶ ಸಂಬಂಧಿತ ರೋಗಗಳಿಂದ ದೂರವಿರಲು ಸಾಧ್ಯವಿದೆ ಎಂದರು. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಉಪಯುಕ್ತವಾದ ಮಾಹಿತಿ ನೀಡಿದರು.ಕಾಲೇಜಿನ ಪ್ರಾಚಾರ್ಯೆ ರಾಧಾ ಅಧ್ಯಕ್ಷತೆ ವಹಿಸಿ, ಶಾಲಾ ಮಕ್ಕಳಿಗೆ ತಂಬಾಕು ಸೇವನೆ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಂರಕ್ಷಣಾಧಿಕಾರಿ ಗೀತಾ, ತಾಲೂಕು ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ವಿ. ವೀರೇಶ್, ಒಕ್ಕೂಟದ ಅಧ್ಯಕ್ಷೆ ಹನುಮವ್ವ, ಟ್ರಸ್ಟ್ನ ತಾಲೂಕು ಕೃಷಿ ಅಧಿಕಾರಿ ಸಂಜುಕುಮಾರ್, ವಲಯದ ಮೇಲ್ವಿಚಾರಕ ಮಂಜುನಾಥ, ಸೇವಾಪ್ರತಿನಿಧಿಗಳಾದ ಲಕ್ಷ್ಮಿ, ಶಾಹಿದಾ, ಸಿ.ಎಸ್.ಸಿ. ಸೇವಾದಾರ ಶಶಿಕುಮಾರ ಇತರರಿದ್ದರು.