ಸಂವಿಧಾನದಡಿ ಸುಭದ್ರ ಜೀವನ ನಡೆಸೋಣ: ದೊಡ್ಡನಗೌಡ ಪಾಟೀಲ

| Published : Jan 27 2025, 12:45 AM IST

ಸಾರಾಂಶ

ಸಮಾನತೆ, ಸ್ವಾತಂತ್ರ್ಯ ಕೊಟ್ಟಿದ್ದು ಅದರ ಅಡಿಯಲ್ಲಿ ನಾವು ಉತ್ತಮ ಬದುಕನ್ನು ಕಟ್ಟಿಕೊಂಡು ಸುಭದ್ರವಾದ ಜೀವನ ನಡೆಸೋಣ.

76ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಡಾ. ಬಿ.ಆರ್. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನವೂ ಸರ್ವಶ್ರೇಷ್ಟವಾಗಿದೆ. ಸಮಾನತೆ, ಸ್ವಾತಂತ್ರ್ಯ ಕೊಟ್ಟಿದ್ದು ಅದರ ಅಡಿಯಲ್ಲಿ ನಾವು ಉತ್ತಮ ಬದುಕನ್ನು ಕಟ್ಟಿಕೊಂಡು ಸುಭದ್ರವಾದ ಜೀವನ ನಡೆಸೋಣ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ನಡೆದ 76ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವೂ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿರುವುದು ಸಂತಸದ ವಿಷಯವಾಗಿದ್ದು, ಎಲ್ಲಾ ಅರ್ಹರಿಗೂ ಈ ಪ್ರಶಸ್ತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುವ ಮೂಲಕ ದಾರಿ ತಪ್ಪುತ್ತಿದ್ದಾರೆ. ಅಂತಹವರಿಗೆ ಬುದ್ದಿ ಹೇಳುವ ಮೂಲಕ ಹಾಳಾಗುತ್ತಿರುವ ಯುವಕರನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಾಗಿದೆ ಹಾಗೂ ಶಿಕ್ಷಕರಾದವರು ಮಕ್ಕಳಲ್ಲಿ ಉತ್ತಮ ಗುಣ ತುಂಬುವ ಕೆಲಸ ಮಾಡಬೇಕು ಎಂದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ನಾವೆಲ್ಲ ಒಂದಾಗಿ ದೇಶದ ಅಭಿವೃದ್ಧಿಗೆ ಪಣ ತೊಡಬೇಕು. ಸಂವಿಧಾನದಡಿಯಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಪೊಲೀಸ್ ಇಲಾಖೆಯಿಂದ ಗೌರವ ಸಮರ್ಪಣೆ ನಡೆಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಸೇರಿದಂತೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆದವು.

ಈ ಸಂದರ್ಭ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಪುರಸಭೆ ಉಪಾಧ್ಯಕ್ಷೆ ನಾಹಿನ ಬೇಗಂ ಮುಲ್ಲಾ, ಪುರಸಭೆ ಸದಸ್ಯರು ಇದ್ದರು. ಬಿಇಒ ಸುರೇಂದ್ರ ಕಾಂಬಳೆ, ಸಿಡಿಪಿಒ ಯಲ್ಲಮ್ಮ ಹಂಡಿ, ತಾಪಂ ಇಒ ಪಂಪಾಪತಿ ಹಿರೇಮಠ, ಪಿಎಸ್‌ಐ ಹನುಮಂತಪ್ಪ ತಳವಾರ, ಮಹಾಲಿಂಗಪ್ಪ ದೋಟಿಹಾಳ, ತಾಜುದ್ದೀನ, ಬಾಲಚಂದ್ರ ಸಂಗನಾಳ, ವೀರಪ್ಪ ಹಾದಿಮನಿ, ಡಾ. ಎಸ್.ವಿ. ಡಾಣಿ, ಸರಸ್ವತಿ, ಶರಣಪ್ಪ ತೆಮ್ಮಿನಾಳ ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕರು ಇದ್ದರು.

ಅಲ್ಲಲ್ಲಿ ಧ್ವಜಾರೋಹಣ:ಪುರಸಭೆ, ಸಂತೆ ಮೈದಾನ, ತಾಪಂ, ಶಾಸಕರ ಕಾರ್ಯಾಲಯ ಸೇರಿದಂತೆ ಅನೇಕ ಶಾಲಾ ಕಚೇರಿಗಳಲ್ಲಿ ಧ್ವಜಾರೋಹಣ ನಡೆಯಿತು.

ಅಭಿವೃದ್ಧಿಗೆ ಬದ್ಧ:

ಕುಷ್ಟಗಿ ಪಟ್ಟಣಕ್ಕೆ ಈಗಾಗಲೇ ಒಂದು ರೈಲ್ವೆ ಮಾರ್ಗವಾಗಿರುವುದು ಸಂತಸ. ಅದೇ ತರನಾಗಿ ಅಭಿವೃದ್ಧಿ ಚಿಂತಕರು ಕುಷ್ಟಗಿ ನರಗುಂದ ಘಟಪ್ರಭಾ ರೈಲು ಹೋರಾಟಕ್ಕಾಗಿ ಜ. 31ರಂದು ಮತ್ತೊಂದು ಸಭೆ ಕರೆದಿದ್ದು, ಈ ಸಭೆಯಲ್ಲಿ ನಾನು ಸಹಿತ ಭಾಗವಹಿಸುತ್ತೇನೆ. ಕುಷ್ಟಗಿ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.