ಸಾರಾಂಶ
ಗಣತಿಯಲ್ಲಿ ಬಿಟ್ಟು ಹೋದ ಮಾಜಿ ದೇವದಾಸಿಯರನ್ನು ಪಟ್ಟಿಯಲ್ಲಿ ಸೇರಿಸಿ, ಅವರ ಮಕ್ಕಳಿಗೂ ಸರ್ಕಾರದ ನೆರವು ಒದಗಬೇಕು.
ಹಗರಿಬೊಮ್ಮನಹಳ್ಳಿ: ಮಾಜಿ ದೇವದಾಸಿಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಗಳು ಸಿಎಂಗೆ ಪತ್ರ ಚಳವಳಿ ನಡೆಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ಮಾಜಿ ದೇವದಾಸಿಯರ ಮಕ್ಕಳ ಗಣತಿ ಜತೆಗೆ ಕೂಡಲೇ ಪುನರ್ವಸತಿ ಕಲ್ಪಿಸಬೇಕು. ದೇವದಾಸಿ ಪದ್ಧತಿಯನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು. ಗಣತಿಯಲ್ಲಿ ಬಿಟ್ಟು ಹೋದ ಮಾಜಿ ದೇವದಾಸಿಯರನ್ನು ಪಟ್ಟಿಯಲ್ಲಿ ಸೇರಿಸಿ, ಅವರ ಮಕ್ಕಳಿಗೂ ಸರ್ಕಾರದ ನೆರವು ಒದಗಬೇಕು. ಪುನರ್ವಸತಿಯಲ್ಲಿ ಉನ್ನತ ಹಂತದವರೆಗೆ ಉಚಿತ ಹಾಸ್ಟೆಲ್ ಸಹಿತ ಶಿಕ್ಷಣ ಹಾಗೂ ಉದ್ಯೋಗ, ವ್ಯವಸಾಯದಲ್ಲಿ ತೊಡಗುವವರಿಗೆ ತಲಾ ಐದು ಎಕರೆ ನೀರಾವರಿ ಯೋಗ್ಯ ಜಮೀನು ನೀಡಬೇಕು. ಬಡ್ಡಿರಹಿತ ಸಾಲಸೌಲಭ್ಯ ಒದಗಿಸಬೇಕು. ವಿದ್ಯಾವಂತ ನಿರುದ್ಯೋಗಿ ಮಕ್ಕಳಿಗೆ ಮಾಸಿಕ ₹೧೦ ಸಾವಿರ ಭತ್ಯೆ, ಮಾಜಿ ದೇವದಾಸಿಯರ ಮಕ್ಕಳನ್ನು ಮದುವೆಯಾಗುವವರಿಗೆ ₹೫ ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದರು.ತಾಲೂಕಿನ ತಂಬ್ರಹಳ್ಳಿ, ಪಟ್ಟಣ ಸೇರಿದಂತೆ ಹಲವೆಡೆ ಪತ್ರ ಚಳವಳಿ ನಡೆಸಿದರು. ಸಂಘದ ಸದಸ್ಯರಾದ ಚಾಂದ್ಭಿ, ತಿಮ್ಮಕ್ಕ, ಲಕ್ಷ್ಮೀ, ಹನುಮಂತಪ್ಪ, ಮರಿಯಮ್ಮ, ಸುಮಿತ್ರಾ, ರೇಣುಕಾ, ಗೌರಮ್ಮ ಇತರರಿದ್ದರು.