ಮುಂದಿನ ಪೀಳಿಗೆಗಾಗಿ ಒಳ್ಳೆಯ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರ ಜನಪರ ಸಾಹಿತ್ಯ ಪರಿಷತ್ತು ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಮನೆಗೊಂದು ಗ್ರಂಥಾಲಯ ಮತ್ತು ಮನೆ ಮನೆ ಕವಿಗೋಷ್ಠಿ ಆಯೋಜಿಸಿರುವುದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.
- ಹನೂರು ಶಾಸಕ ಎ.ಆರ್. ಮಂಜುನಾಥ್ ನಿವಾಸದಲ್ಲಿ ಕಾರ್ಯಕ್ರಮ । ಕನ್ನಡಪ್ರಭದ ಅಂಶಿ ಪ್ರಸನ್ನಕುಮಾರ್ ಭಾಗಿ
---ಕನ್ನಡಪ್ರಭ ವಾರ್ತೆ ಹನೂರು
ಮುಂದಿನ ಪೀಳಿಗೆಗಾಗಿ ಒಳ್ಳೆಯ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರ ಜನಪರ ಸಾಹಿತ್ಯ ಪರಿಷತ್ತು ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಮನೆಗೊಂದು ಗ್ರಂಥಾಲಯ ಮತ್ತು ಮನೆ ಮನೆ ಕವಿಗೋಷ್ಠಿ ಆಯೋಜಿಸಿರುವುದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.ಹನೂರಿನಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಮತ್ತು ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಂದಿನ ಪೀಳಿಗೆಗಾಗಿ ಪ್ರಾಧಿಕಾರ ಸಾಹಿತ್ಯ ಪರಿಷತ್ತಿನಿಂದ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಹನೂರಿನಲ್ಲಿ ಸುಸಜ್ಜಿತವಾದ ಹೈಟೆಕ್ ಗ್ರಂಥಾಲಯವನ್ನು ನಿರ್ಮಿಸಲು ಮುಂದಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸಾ ಮಾತನಾಡಿ, ಮನೆಗೊಂದು ಗ್ರಂಥಾಲಯ ನಿರ್ಮಿಸುವ ಮೂಲಕ ಭವಿಷ್ಯದ ಮಕ್ಕಳಿಗೆ ಅನುಕೂಲ ಕಲ್ಪಿಸಲು ಪೋಷಕರು ಮುಂದಾಗಬೇಕು. ಮನೆಯಲ್ಲಿ ಪೂಜಾ ಕೊಠಡಿಯ ಜೊತೆಗೆ ಗ್ರಂಥಾಲಯ ಮಕ್ಕಳ ಭವಿಷ್ಯಕ್ಕೆ ಅನುಕೂಲ. ಕನ್ನಡ ಪುಸ್ತಕ ಪ್ರಾಧಿಕಾರದಿಂದ 1 ಲಕ್ಷ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಪುಸ್ತಕದ ಬೀಜ ಬಿತ್ತಿ ಬದುಕು ಬಂಗಾರವಾಗಲಿ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಶಾಸಕ ಮಂಜುನಾಥ್ ಅವರ ಮನೆಯಲ್ಲಿ ಆಯೋಜಿಸಿರುವುದು ಉತ್ತಮವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಎಸ್. ಶಿವರಾಜಪ್ಪ ಮಾತನಾಡಿ, ಶಾಸಕ ಎಂ.ಆರ್. ಮಂಜುನಾಥ್ ಅವರು ಸದ್ದು ಗದ್ದಲವಿಲ್ಲದೆ ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ನಾಗರಿಕರಿಗೆ ನೀಡುತ್ತಿದ್ದಾರೆ. ಜೊತೆಗೆ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಿರುವುದು ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಿದೆ. ಪುಸ್ತಕ ವ್ಯಕ್ತಿತ್ವ ವಿಕಾಸನಕ್ಕೆ ನುಡಿ ಬರೆಯಲಿರುವುದರಿಂದ ಅಧ್ಯಯನದ ಮೂಲಕ ಯುವ ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಪ್ರಾಮಾಣಿಕತೆಯಿಂದ ಪುಸ್ತಕಗಳನ್ನು ಓದಲು ಮನೆಯೇ ಮಂತ್ರಾಲಯ ಎನ್ನುವ ಬದಲು ಮನೆಯ ಗ್ರಂಥಾಲಯ ಎಂದು ಪ್ರತಿಯೊಬ್ಬರು ನಿರ್ಮಾಣ ಮಾಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಅನುಕೂಲ ಕಲ್ಪಿಸಿ ಎಂದರು.
ಮಲೆ ಮಹದೇಶ್ವರರು ಸಿದ್ದಪ್ಪಾಜಿ, ಮಂಟೇಸ್ವಾಮಿ ನೆಲೆಯೂರಿದ ಪವಿತ್ರ ಸ್ಥಳದಲ್ಲಿ ವಿದ್ಯಾರ್ಥಿಗಳಿಂದಲೇ ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನು ರೂಢಿ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳಲು ಸಮಾಜದ ಅಂಕುಡೊಂಕು ತಿದ್ದಲು ಸಾಹಿತ್ಯ ಕ್ಷೇತ್ರ, ಕನ್ನಡ ಹಬ್ಬ ಮನಸ್ಸನ್ನು ಗೆಲ್ಲುವ ರೀತಿಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಿ ಬದುಕು ಹಸನಾಗಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.ಶಾಸಕ ಎಂ.ಆರ್. ಮಂಜುನಾಥ್ ಅವರಿಗೆ ಗೌರವ ಸಮರ್ಪಣೆಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ನಡೆಸಿ ಕೊಟ್ಟರು. ನಂತರ ಅವರು ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಮೈಸೂರಿನ ವಸ್ತು ಪ್ರದರ್ಶನದಲ್ಲಿ ಪುಸ್ತಕ ಮಳಿಗೆಯನ್ನು ತೆರೆದು 93 ಲಕ್ಷ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಮಾಡಿದೆ. ಜನಪ್ರತಿನಿಧಿಗಳ ಮನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಇದರಿಂದಾಗಿ ನಾಗರಿಕರು ಸ್ವಯಂಪ್ರೇರಿತರಾಗಿ ತಮ್ಮ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ತೆರೆಯಲು ಪ್ರೇರೇಪಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮನೆಯ ಮಂತ್ರಾಲಯ ಎನ್ನುವ ಬದಲು ಮನೆಯೇ ಗ್ರಂಥಾಲಯ ಎಂದು ನಿರ್ಮಾಣ ಮಾಡುವ ಮೂಲಕ ಪ್ರತಿಯೊಬ್ಬರು ತಮ್ಮ ಮಕ್ಕಳ ಭವಿಷ್ಯಕ್ಕೆ ಮೊಬೈಲ್ಗಳನ್ನು ಬಿಟ್ಟು ಹವ್ಯಾಸಿ ಪುಸ್ತಕಗಳನ್ನು ಓದುವ ಮೂಲಕ ವಿದ್ಯಾವಂತರನ್ನಾಗಿ ಮಾಡಲು ಮುಂದಾಗಬೇಕು ನಾಗರಿಕರು ಎಂದು ತಿಳಿಸಿದರು.ಜನಪರ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಮಹೇಶ್ ಚಿಕ್ಕಲ್ಲೂರು ಮಾತನಾಡಿ, ತಾಲೂಕಿನಲ್ಲಿ ಮೊದಲ ಬಾರಿಗೆ ಶಾಸಕರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಮತ್ತು ಮನೆ ಮನೆ ಕವಿಗೋಷ್ಠಿ, ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರಿಂದ ಪ್ರೇರಿತ ಪ್ರೇರೇಪಿತರಾಗಿ ನಾಗರಿಕರು ಸಹ ತಮ್ಮ ಮನೆಗಳಲ್ಲಿ ಗ್ರಂಥಾಲಯವನ್ನು ತೆರೆದು ಮಕ್ಕಳ ಭವಿಷ್ಯಕ್ಕೆ ಓದುವ ಹವ್ಯಾಸ ರೂಢಿಸಿಕೊಳ್ಳಲು ಅನುಕೂಲದಾಯಕವಾಗಿದೆ. ಹೀಗಾಗಿ ಮಕ್ಕಳು ಮೊಬೈಲ್ ಮತ್ತು ಟಿವಿ ಅಂತರ್ಜಾಲಗಳಿಂದ ದೂರವಿದ್ದು ಪುಸ್ತಕಗಳನ್ನು ಓದುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಮಲ್ಲೇಶ್ ಮಾಲಿಂಗನ ಕಟ್ಟೆ ಮಾತನಾಡಿ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಉತ್ತಮ ಗ್ರಂಥಾಲಯ ತೆರೆಯಲು ಶಾಸಕರು ಮುಂದಾಲೋಚನೆ ಮಾಡಿ ಇಡೀ ರಾಜ್ಯದಲ್ಲಿಯೇ ಮೊದಲ ಗ್ರಂಥಾಲಯಕ್ಕೆ ನಿರ್ಮಾಣ ಮಾಡಲು ಮುಂದಾಗಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಸಾಲುಂಡಿ ದೊರೆಸ್ವಾಮಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕವಿಗಳಾದ ಡಾ. ಪ್ರೇಮ, ಸದಾನಂದ, ಕಂದವೇಲು, ಪ್ರೇಮ ಸಿದ್ದಯ್ಯನಪುರ ಹಾಗೂ ವಿಜಯ ವಿವಿಧಡೆಯಿಂದ ಆಗಮಿಸಿದ್ದ ಯುವಕವಿಗಳು ಕಾರ್ಯಕ್ರಮದಲ್ಲಿ ಗಮನಸೆಳೆದರು.
---21ಸಿಎಚ್ಎನ್15
ಹನೂರು ಪಟ್ಟಣದ ಶಾಸಕ ಎಂ.ಆರ್. ಮಂಜುನಾಥ್ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಮತ್ತು ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.---
21ಸಿಎಚ್ಎನ್16ಹನೂರು ಪಟ್ಟಣದ ಶಾಸಕ ಎಂ.ಆರ್. ಮಂಜುನಾಥ್ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ನಡೆಸಿ ಅವರನ್ನುಅಭಿನಂದಿಸಲಾಯಿತು.