ವಕೀಲರಿಗೆ ಗ್ರಂಥಾಲಯ ಜ್ಞಾನಮಂಟಪ

| Published : Jan 19 2025, 02:18 AM IST

ಸಾರಾಂಶ

ಚನ್ನಪಟ್ಟಣ: ವಕೀಲರಿಗೆ ಗ್ರಂಥಾಲಯ ಜ್ಞಾನಮಂಟಪವಿದ್ದಂತೆ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ವೃತ್ತಿಯಲ್ಲಿ ಪ್ರಬುದ್ಧತೆ ಬೆಳೆಸಿಕೊಂಡು ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರೇಗೌಡ ಸಲಹೆ ನೀಡಿದರು.

ಚನ್ನಪಟ್ಟಣ: ವಕೀಲರಿಗೆ ಗ್ರಂಥಾಲಯ ಜ್ಞಾನಮಂಟಪವಿದ್ದಂತೆ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ವೃತ್ತಿಯಲ್ಲಿ ಪ್ರಬುದ್ಧತೆ ಬೆಳೆಸಿಕೊಂಡು ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರೇಗೌಡ ಸಲಹೆ ನೀಡಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ನಿರ್ಮಿಸಿರುವ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಕೀಲರು ಹೆಚ್ಚು ಕಾನೂನು ಪುಸ್ತಕಗಳನ್ನು ಓದಿ ಜ್ಞಾನ ಬೆಳೆಸಿಕೊಂಡು ತಮ್ಮನ್ನು ನಂಬಿ ಬಂದ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು. ನ್ಯಾಯಾಲಯಕ್ಕೆ ಗ್ರಂಥಾಲಯವೆಂಬುದು ಶೋಭೆಯಾದರೆ, ಅದರಲ್ಲಿ ಅಭ್ಯಾಸ ಮಾಡುವ ವಕೀಲರು ಕಳಶವಿದ್ದಂತೆ. ನೀವು ಎಷ್ಟು ಪುಸ್ತಕಗಳನ್ನು ಓದುತ್ತೀರಾ ಎಂಬುದು ಮುಖ್ಯವಲ್ಲ, ಅದರಲ್ಲಿನ ಅಂಶಗಳನ್ನು ಮನನ ಮಾಡಿಕೊಂಡು ಯಾವ ರೀತಿ ವಾದ ಮಾಡುತ್ತೀರಾ, ಕಕ್ಷಿದಾರರಿಗೆ ಹೇಗೆ ನ್ಯಾಯ ದೊರಕಿಸಿ ಕೊಡುತ್ತೀರಾ ಎಂಬುದು ಮುಖ್ಯ ಎಂದರು.

ವ್ಯಾಜ್ಯಗಳ ಹೆಚ್ಚಳ: ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಹೊಸ ರೀತಿಯ ವ್ಯಾಜ್ಯಗಳು ನ್ಯಾಯಾಲಯಕ್ಕೆ ಬರುವುದು ಹೆಚ್ಚಾಗುತ್ತಿದೆ. ಪ್ರತಿನಿತ್ಯ ಹೊಸ ಬಗೆಯ ವ್ಯಾಜ್ಯಗಳೊಂದಿಗೆ ಜನ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರು ಆಪ್‌ಡೇಟ್ ಆಗುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ವಕೀಲ ವೃತ್ತಿಯ ಕಡೆಗೆ ಸಾಕಷ್ಟು ಮಂದಿ ಆಕರ್ಷಿತರಾಗುತ್ತಿದ್ದು, ವಕೀಲರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಬೇರೆಲ್ಲಾ ಕ್ಷೇತ್ರಗಳಿಗಿಂತ ನ್ಯಾಯಾಂಗ ಕ್ಷೇತ್ರ ಹೆಚ್ಚು ಅವಕಾಶಗಳನ್ನು ನೀಡುತ್ತಿದೆ. ವಕೀಲರು ವೃತ್ತಿಪರತೆ ಬೆಳೆಸಿಕೊಳ್ಳಬೇಕು ಎಂದರು.

ಇತ್ತಿಚ್ಚಿನ ದಿನಗಳಲ್ಲಿ ವಕೀಲ ವೃತ್ತಿಗೆ ಬರುತ್ತಿರುವ ಯುವಕ ಯುವತಿಯರಲ್ಲಿ ಏಕಾಗ್ರತೆ ಮತ್ತು ಕಮಿಟ್‌ಮೆಂಟ್ ಕಡಿಮೆಯಾಗುತ್ತಿದೆ. ಇದರಿಂದ ವೃತ್ತಿಯಲ್ಲಿ ಹಿನ್ನಡೆ ಅನುಭವಿಸುವ ಅಪಾಯವಿದೆ. ನಿರಂತರ ಅಭ್ಯಾಸ ಮಾಡುವ ಜತೆಗೆ ವರ್ಕ್‌ಶಾಪ್‌ಗಳಲ್ಲಿ ಭಾಗವಹಿಸಬೇಕು. ಸಮಯ ಸಿಕ್ಕಾಗ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹೈಕೋರ್ಟ್ ಮಾದರಿಯಲ್ಲೆ ತಲ್ಲೆ ಎತ್ತಿರುವ ಇಲ್ಲಿನ ಭವ್ಯ ನ್ಯಾಯಾಲಯದ ಸುತ್ತಾ ಕಾಂಪೌಂಡ್ ಹಾಗೂ ಗ್ರಂಥಾಲಯ ಬೇಡಿಕೆಗಳಿದ್ದು, ಅದರಲ್ಲೊಂದು ಕೋರಿಕೆ ಈಡೇರಿದೆ ಎಂದರು.

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಚನ್ನಪಟ್ಟಣ ನ್ಯಾಯಾಲಯ ಕಟ್ಟಡ ನಿರ್ಮಾಣದ ವಿಚಾರದಲ್ಲಿ ನಾವು ಸಹ ಅಳಿಲು ಸೇವೆ ಸಲ್ಲಿಸಿದ್ದೆ. ಆದರೆ, ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂಬ ಕೊರಗು ನನ್ನನ್ನು ಕಾಡುತಿತ್ತು. ಆದರೆ ಇಂದು ಗ್ರಂಥಾಲಯ ಉದ್ಘಾಟಿಸುವ ಮೂಲಕ ಆ ಕೊರಗು ನಿವಾರಣೆಯಾಗಿದೆ. ನಾನು ಸದಾ ವಕೀಲರ ಜತೆಗಿದ್ದು, ವಕೀಲರ ಕೆಲಸ ಕಾರ್ಯಗಳಿಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶೆ ರೇಣುಕಾ, ಎಂಎಲ್‌ಸಿ ರವಿ, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವರಾಮ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಗಿರೀಶ್ ಮಾತನಾಡಿದರು. ನ್ಯಾಯಾಧೀಶರಾದ ವೆಂಕಟೇಶಪ್ಪ, ಸವಿತಾ, ಉಷಾರಾಣಿ, ಯೋಗೇಶ್, ನಗರಸಭೆ ಅಧ್ಯಕ್ಷ ವಾಸಿಲ್, ವಕೀಲರ ಸಂಘದ ಕಾರ್ಯದರ್ಶಿ ದೇವರಾಜು, ಉಪಾಧ್ಯಕ್ಷ ಧನಂಜಯ್, ಖಜಾಂಚಿ ಹೇಮಂತ್, ಹಿರಿಯ ವಕೀಲರಾದ ಲಕ್ಷ್ಮಣ್, ಮುಕ್ರಂ, ಹನುಮಂತೇಗೌಡ ಧರ್ಮೆಂದ್ರ ಹಾಜರಿದ್ದರು.

ಪೋಟೊ೧೮ಸಿಪಿಟಿ೨:

ಚನ್ನಪಟ್ಟಣದ ನ್ಯಾಯಾಲಯದ ಅವರಣದಲ್ಲಿನ ಗ್ರಂಥಾಲಯವನ್ನು ಹೈಕೋರ್ಟ್ ನ್ಯಾಯಾಧೀಶ ಶಿವಶಂಕರೇಗೌಡ ಉದ್ಘಾಟಿಸಿದರು.

ಪೋಟೊ೧೮ಸಿಪಿಟಿ೩:

ಚನ್ನಪಟ್ಟಣ ನ್ಯಾಯಾಲಯದ ಅವರಣದಲ್ಲಿ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ಶಿವಶಂಕರೇಗೌಡ, ಶಾಸಕ ಸಿ.ಪಿ.ಯೋಗೇಶ್ವರ್, ಎಂಎಲ್‌ಸಿ ರವಿ ಭಾಗವಹಿಸಿದ್ದರು.