ಸಾರಾಂಶ
ಮನುಷ್ಯನ ಜೀವನದಲ್ಲಿ ಸಂತೋಷ ಹಾಗೂ ನಲಿವು ಕ್ಷಣಕ್ಷಣಕ್ಕೂ ಬದಲಾವಣೆ ಆಗುತ್ತಿರುತ್ತವೆ. ಆದರೆ, ನೋವು ಮಾತ್ರ ಶಾಶ್ವತವಾಗಿರುತ್ತದೆ ಎಂದು ವಿಶ್ರಾಂತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಹೇಳಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ಕವನ ನಮ್ಮ ಬದುಕಿನ ಭಾವನೆಗಳ ಹಾಗೂ ನೋವು ನಲಿವುಗಳ ಸಾಧನವಾಗಿದೆ ಎಂದು ವಿಶ್ರಾಂತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘ ಲೀಲಾತಾಯಿ ಜೀವಣ್ಣಗೌಡ ಪಾಟೀಲ ಕುಲಕರ್ಣಿ ದತ್ತಿ ನಿಮಿತ್ತ ಆಯೋಜಿಸಿದ್ದ ‘ಸರೋಜಾ ಕುಲಕರ್ಣಿ ಅವರ ‘ಆಳ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಮನುಷ್ಯನ ಜೀವನದಲ್ಲಿ ಸಂತೋಷ ಹಾಗೂ ನಲಿವು ಕ್ಷಣಕ್ಷಣಕ್ಕೂ ಬದಲಾವಣೆ ಆಗುತ್ತಿರುತ್ತವೆ. ಆದರೆ, ನೋವು ಮಾತ್ರ ಶಾಶ್ವತವಾಗಿರುತ್ತದೆ. ಸರೋಜಾ ಕುಲಕರ್ಣಿ ತಮ್ಮ ಜೀವನದಲ್ಲಿ ಅನುಭವಿಸಿದ ನೋವು ನಲಿವುಗಳನ್ನು ತಮ್ಮ ಕೃತಿ ‘ಆಳ’ ಕವನ ಸಂಕಲನದ ಮೂಲಕ ಓದುಗರಿಗೆ ತಮ್ಮ ನೈಜ ಜೀವನ ದರ್ಶನ ಮಾಡಿಸಿದ್ದಾರೆ ಎಂದರು.ಸಾಹಿತಿ ಪ್ರೊ. ದುಷ್ಯಂತ ನಾಡಗೌಡ ‘ಆಳ’ಕವನ ಸಂಕಲನ ಕೃತಿ ಪರಿಚಯಿಸಿ, ಇದೊಂದು ಗಂಭೀರ ಕವನ ಸಂಕಲನ. ಸರೋಜಾ ಕುಲಕರ್ಣಿ ತಮ್ಮ ಬದುಕಿನ ಸಾಮಾಜಿಕ ಸನ್ನಿವೇಶಗಳನ್ನು ತಾವುಂಡ ನೋವು ನಲಿವುಗಳನ್ನು ಕವನದ ಮೂಲಕ ಮನೋಜ್ಞವಾಗಿ ಅಭಿವ್ಯಕ್ತಗೊಳಿಸಿದ್ದಾರೆ. ಈ ಕವನಗಳು ಓದುಗರ ಮನ ತಟ್ಟುವಂತೆ, ಮುಟ್ಟುವಂತೆ ಇವೆ. ಕಾವ್ಯಗಳು ಸಮಾಜದಲ್ಲಿ ಕಾಲಮಾನಕ್ಕನುಗುಣವಾಗಿ ಹುಟ್ಟುತ್ತವೆ ಎಂದರು.
ಆಳ ಕೃತಿಯ ಲೇಖಕರಾದ ಸರೋಜಾ ಕುಲಕರ್ಣಿ ಹಾಗೂ ಹಿರಿಯ ಸಾಹಿತಿ ಅಭಿಯಂತರ ನರಸಿಂಹ ಪರಾಂಜಪೆ ಸನ್ಮಾನ ಸ್ವೀಕರಿಸಿದರು. ಅತಿಥಿಗಳಾದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಪ್ರೊ. ಎಂ.ವೈ. ಸಾವಂತ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಸಾಹಿತ್ಯ ರಚನೆ ಸಮಾಜಿಕ ಬದಲಾವಣೆಗೆ ಪೂರಕವಾಗಿರಬೇಕು. ಅಲ್ಲಿ ಮಾನವೀಯತೆಯ ತುಡಿತವಿರಬೇಕು. ಸರೋಜಾ ಕುಲಕರ್ಣಿ ಅವರ ಕೃತಿ ರಚನೆಯಲ್ಲಿ ಅವರ ಮನೆತನದ ರಾಜಕೀಯ ಹಾಗೂ ಸಾಂಸ್ಕೃತಿಕ ಹಿನ್ನೆಲೆಯೂ ಇದೆ ಎಂದು ಹೇಳಿದರು.ಶಂಕರ ಕುಂಬಿ ಸ್ವಾಗತಿಸಿದರು. ಮನೋಜ ಪಾಟೀಲ ಪರಿಚಯಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ನರೇಗಲ್ ಸನ್ಮಾನ ಪತ್ರ ಓದಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ ಅತಿಥಿಗಳನ್ನು ಗೌರವಿಸಿದರು. ಪ್ರೊ. ಬಿ.ಎಚ್. ಕೋಟೆಗೌಡರ ವಂದಿಸಿದರು.