ಸ್ನೇಹಿತನನ್ನು ಕೊಲೆಗೈದಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

| Published : Dec 13 2024, 12:46 AM IST

ಸ್ನೇಹಿತನನ್ನು ಕೊಲೆಗೈದಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಾದ, ಪ್ರತಿವಾದ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ನ್ಯಾಯಾಧೀಶ ಕುಮಾರ್ ಎಚ್.ಎನ್. ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕನಕಪುರ

ಸ್ನೇಹಿತನನ್ನೇ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ಐವತ್ತು ಸಾವಿರ ದಂಡ ವಿಧಿಸಿ ಗುರುವಾರ ನ್ಯಾಯಾಲಯ ಆದೇಶ ಹೊರಡಿಸಿದೆ. ಹಾರೋಹಳ್ಳಿ ತಾಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಿಚ್ಚನಕೆರೆ ಗ್ರಾಮದ ಚಿಕ್ಕೇಗೌಡ (38), ಕುಮಾರ್ (28) ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು. ಅದೇ ಗ್ರಾಮದ ಅಣ್ಣಯ್ಯಪ್ಪ(36) ಕೊಲೆಯಾದ ವ್ಯಕ್ತಿ.

ಕೊಲೆಯಾದ ಅಣ್ಣಯ್ಯಪ್ಪ ಮತ್ತು ಆರೋಪಿಗಳಾಗಿದ್ದ ಚಿಕ್ಕೇಗೌಡ ಹಾಗೂ ಕುಮಾರ್ ಸ್ನೇಹಿತರಾಗಿದ್ದು ಅಣ್ಣಯ್ಯಪ್ಪ, ಆರೋಪಿ ಚಿಕ್ಕೇಗೌಡನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ 2018 ನ. 5 ರಂದು ಪಿಚ್ಚನಕೆರೆ ಗ್ರಾಮದಲ್ಲಿ ಆರೋಪಿ ಚಕ್ಕೇಗೌಡ, ಇವರ ಚಿಕ್ಕಪ್ಪನ ಮಗ ಕುಮಾರ್ ಸೇರಿ ಅಣ್ಣಯ್ಯಪ್ಪನನ್ನು ಕೊಲೆ ಮಾಡಿದ್ದಾರೆಂದು ಮೃತರ ಸಹೋದರ ರಾಜೇಶ್ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಗ್ರಾಮಾಂತರ ಠಾಣೆಯ ಅಂದಿನ ಪಿಎಸ್‌ಐ ಮಲ್ಲೇಶ್ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿತರ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಾದ, ಪ್ರತಿವಾದ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ನ್ಯಾಯಾಧೀಶ ಕುಮಾರ್ ಎಚ್.ಎನ್. ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ವಕೀಲ ದೇವರಾಜು ವಾದವನ್ನು ಮಂಡಿಸಿದ್ದರು. ಸೂಕ್ತ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ, ಶಿಕ್ಷೆಯಾಗುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ರಾಮನಗರ ಜಿಲ್ಲಾ ಎಸ್ ಪಿ ಕಾರ್ತಿಕ ರೆಡ್ಡಿ, ಎಡಿಎಸ್ ಪಿ ಗಳಾದ ರಾಮಚಂದ್ರಯ್ಯ, ಗಿರಿ ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ