ಸತ್ಯ, ಸ್ವಚ್ಚತೆ, ಅಹಿಂಸೆ ಮಂತ್ರಗಳಿಂದ ಜೀವನ ಸುಂದರ

| Published : Feb 17 2025, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮಹಾತ್ಮಾ ಗಾಂಧೀಜಿ ಅವರ ಸತ್ಯ, ಸ್ವಚ್ಛತೆ ಮತ್ತು ಅಹಿಂಸೆ ಎಂಬ ಮಂತ್ರಗಳಿಂದ ಜೀವನ ಸುಂದರವಾಗುತ್ತದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಶಾಂತಾದೇವಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾತ್ಮಾ ಗಾಂಧೀಜಿ ಅವರ ಸತ್ಯ, ಸ್ವಚ್ಛತೆ ಮತ್ತು ಅಹಿಂಸೆ ಎಂಬ ಮಂತ್ರಗಳಿಂದ ಜೀವನ ಸುಂದರವಾಗುತ್ತದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಶಾಂತಾದೇವಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ಎನ್.ಎಸ್.ಎಸ್ ಕೋಶ ಮತು ಗಾಂಧಿ ಅಧ್ಯಯನ ಕೇಂದ್ರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿ ಚಿಂತನೆಗಳ ಮೂಲಕ ಮಾನವೀಯ ಮೌಲ್ಯಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಯ ಜವಾಬ್ದಾರಿ ಎಂಬ ವಿಷಯಾಧಾರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮಾ ಗಾಂಧೀಜಿಯ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸ್ವಚ್ಛತಾ ಕಾರ್ಯಗಳು, ಶಿಕ್ಷಣ ಮತ್ತು ಆರೋಗ್ಯ ಜಾಗೃತಿಯ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿ ಅಭಿಯಾನಗಳ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ. ಸ್ವಯಂ ಸೇವಕರು ಸಣ್ಣ-ಸಣ್ಣ ಸೇವಾ ಕಾರ್ಯಗಳನ್ನು ಮಾಡಿ ಮಹತ್ತರ ಸಾಧನೆಗಳನ್ನು ಸಾಧಿಸಬಹುದು. ಇದರಿಂದ ಸಮಾಜದಲ್ಲಿ ಹೊಣೆಗಾರಿಕೆಯನ್ನು ಬೆಳೆಸುವುದು ಮಾತ್ರವಲ್ಲದೆ, ಯುವಕರಲ್ಲಿ ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವವನ್ನು ಉತ್ತೇಜಿಸುವುದಕ್ಕೂ ಇದು ಸಹಾಯಕವಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ಕರ್ನಾಟಕ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡಿ ಮಾತನಾಡಿ, ಗಾಂಧೀಜಿಯವರು ರಾಜಕೀಯ ಕಾರ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದರು. ಸಂಸದೀಯ ಕೆಲಸ ಮತ್ತು ರಚನಾತ್ಮಕ ಕೆಲಸ. ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಯುವಪೀಳಿಗೆ ದಾರಿ ತಪ್ಪುತ್ತಿರುವುದು ಸತ್ಯ. ಇದರಿಂದ ತಪ್ಪಿಸಿಕೊಳ್ಳಲು ಗಾಂಧೀಜಿಯವರ ವಿಚಾರಗಳ ಬಗ್ಗೆ ಚಿಂತನೆ ಮಾಡುವುದು, ಅವರನ್ನು ಓದಿ, ಅರ್ಥೈಸಿಕೊಳ್ಳುವುದು ಮತ್ತು ಪ್ರಶ್ನೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳು ಉಳಿಯದೆ ಹೋದರೆ, ದೇಶ ಉಳಿಯುವುದಿಲ್ಲ ಎಂಬ ಅವರ ಮಾತು ಇಂದು ಸಹ ಪ್ರಸ್ತುತವಾಗಿದೆ ಎಂದು ತಿಳಿಸಿದರು.ಪ್ರಥಮ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕಾಯಕ ನಿಷ್ಠ ಎಂಬ ವಿಷಯದ ಕುರಿತು ವಿಷಯವನ್ನು ಮಂಡಿಸಿದರು. ಅಧ್ಯಕ್ಷತೆಯನ್ನು ಪ್ರೊ.ಪಿ.ಜಿ.ತಡಸದ ವಹಿಸಿದ್ದರು. ಎರಡನೆಯ ಗೋಷ್ಠಿಯನ್ನು ಡಾ.ಅಬೀದಾ ಬೇಗಂ ಗಾಂಧೀಜಿಯವರ ಪ್ರಸ್ತುತ ಸಮಸ್ಯೆಗಳು ಮತ್ತು ಎನ್.ಎಸ್.ಎಸ್ ಅಧಿಕಾರಿಯ ಜವಾಬ್ದಾರಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಓಂಕಾರ ಕಾಕಡೆ ವಹಿಸಿದ್ದರು. ಮೂರನೇ ಗೋಷ್ಠಿಯಲ್ಲಿ ಲಕ್ಷ್ಮೀದೇವಿ.ವೈ ಮಹಿಳೆಯರ ವ್ಯಕ್ತಿತ್ವ ವಿಕಸನದಲ್ಲಿ ಎನ್.ಎಸ್.ಎಸ್‌ನ ಪಾತ್ರ ಎಂಬ ವಿಷಯದ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ಪ್ರೊ.ಸಕ್ಪಾಲ್ ಹೂವಣ್ಣ ವಹಿಸಿದ್ದರು.ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸ್ಮಾರಕ ನಿಧಿ ಉಪಾಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಎನ್‌ಎಸ್.ಎಸ್ ಕೋಶದ ಸಂಯೋಜಕ ಪ್ರೊ.ಅಶೋಕಕುಮಾರ ಸುರಪುರ, ಅಮರನಾಥ ಪ್ರಜಾಪತಿ, ವಿವಿಧ ಜಿಲ್ಲೆಯ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು.