ಭಗವಂತನ ಸ್ಮರಣೆ ಮತ್ತು ಆರಾಧನೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹಾಗಾಗಿ ದೇವರೊಲುಮೆ ಸಂಸಾರದಲ್ಲಿನ ಸುಂದರ ಬದುಕಿಗೆ ಕಾರಣವಾಗುತ್ತದೆ ಎಂದು ಜಡೆ ಹಿರೇಮಠ ಮತ್ತು ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಸೊರಬ
ಭಗವಂತನ ಸ್ಮರಣೆ ಮತ್ತು ಆರಾಧನೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹಾಗಾಗಿ ದೇವರೊಲುಮೆ ಸಂಸಾರದಲ್ಲಿನ ಸುಂದರ ಬದುಕಿಗೆ ಕಾರಣವಾಗುತ್ತದೆ ಎಂದು ಜಡೆ ಹಿರೇಮಠ ಮತ್ತು ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಶ್ರೀ ರೇಣುಕಾ ಸಭಾ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಘಟಕದ ವತಿಯಿಂದ ಮತ್ತು ಪ್ರಗತಿಬಂಧು ಸ್ವಸಹಾಯ ಗುಂಪುಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮ ಜಾಗೃತಿಯನ್ನು ಮೂಡಿಸುತ್ತದೆ. ಧರ್ಮದ ಹೊರತಾಗಿ ಮನುಷ್ಯನ ಬದುಕು ಶೂನ್ಯವಾಗುತ್ತದೆ. ಆದ್ದರಿಂದ ಧಾರ್ಮಿಕ ವಿಚಾರಗಳ ಬಗ್ಗೆ ಅರಿವು ಮೂಡಬೇಕಾದರೆ ಮನುಷ್ಯ ಭಗವಂತನಲ್ಲಿ ನಂಬಿಕೆ ಮತ್ತು ಸ್ಮರಣೆ ಮಾಡಬೇಕು ಎಂದ ಅವರು, ಭೂಮಿಯಲ್ಲಿ ಬೀಜ ಬಿತ್ತಿದಾಗ ಅದು ವಿವಿಧ ರೂಪಾಂತರ ಹೊಂದಿ ಬೆಳೆಯುವ ಹಾಗೆ ಮನುಷ್ಯನಲ್ಲಿಯೂ ನೂರಾರು ಭಾವನೆ, ಆಲೋಚನೆ ಮೂಡುತ್ತವೆ. ಇದಕ್ಕೆಲ್ಲ ಪರಿಹಾರ ಭಗವಂತನ ಆರಾಧನೆ ಪರಿಹಾರವಾಗಿದೆ ಎಂದರು.ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ. ತಲ್ಲೂರು ಮಾತನಾಡಿ, ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವಿವಿಧ ಯೋಜನೆಗಳ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ. ಅಲ್ಲದೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮೂಲಕ ಜನರಲ್ಲಿ ಪರಸ್ಪರ ಆತ್ಮೀಯತೆ, ಸ್ನೇಹ ಭಾಂದವ್ಯ ಮತ್ತು ಧಾರ್ಮಿಕ ಶ್ರದ್ಧೆ ಬೆಳೆಯಲು ಕಾರಣವಾಗುತ್ತದೆ ಎಂದರು.
ತಹಸೀಲ್ದಾರ್ ಮಂಜುಳಾ ಹೆಗಡಾಳ್, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮಧುರಾಯ ಜಿ.ಶೇಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ. ದಿನೇಶ್, ಸಮಾಜ ಸೇವಕ ರಾಜು ಹಿರಿಯಾವಲಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಳಿಂಗರಾಜ್, ಸೊರಬ ಘಟಕದ ಯೋಜನಾಧಿಕಾರಿ ಜಯಂತಿ, ಜಿ.ಕೆರಿಯಪ್ಪ, ಉಮೇಶ್ ಪೂಜಾರಿ, ಭರತ್, ವಿವಿಧ ಒಕ್ಕೂಟಗಳ ಮುಖ್ಯಸ್ಥರು ಇದ್ದರು.