ಕನ್ನಡಪ್ರಭ ವಾರ್ತೆ ಲೋಕಾಪುರ

ಅರ್ಥಗರ್ಭಿತ ಶಿವ ಭಜನೆ ಸಮಾಜದಲ್ಲಿ ಜೀವನ ಹೇಗೆ ಸಾಗಿಸಬೇಕೆಂದು ಕಲಿಸುತ್ತದೆ. ನಮ್ಮ ಜೀವನ ಪಾವನವಾಗುತ್ತದೆ ಎಂದು ಗಣಿ ಉದ್ಯಮಿ ಎಂ.ಎಂ. ವಿರಕ್ತಮಠ ಹೇಳಿದರು.

ಪಟ್ಟಣದ ಲೋಕೇಶ್ವರ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಸಹಯೋಗದಲ್ಲಿ ಮಹಾಶಿವರಾತ್ರಿ ಶಿವ ಭಜನೆ ಸಾಂಸ್ಕೃತಿಕ ಸಂಭ್ರಮ-೨೦೨೬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧ್ಯಾತ್ಮಿಕ ಜೀವನ ಅಳವಡಿಸಿಕೊಳ್ಳುವ ಮೂಲಕ ಶಿವ ಭಜನೆ ಮಾಡಿ ಶಿವನಲ್ಲಿ ಪ್ರಾರ್ಥನೆ ಮಾಡಬೇಕೆಂದರು.

ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದ ಕಲೆ ಉಳಿಸಿ ಬೆಳೆಸುವಲ್ಲಿ ಕಲಾವಿದರ ಪಾತ್ರ ಪ್ರಮುಖವಾಗಿದೆ. ಆಧುನಿಕ ಜಗತ್ತಿನಲ್ಲಿ ದೈಹಿಕ ಹಾಗೂ ಮಾನಸಿಕ ಶ್ರಮದಿಂದ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವುದು ದೊಡ್ಡ ದುರಂತವಾಗಿದೆ. ಸಾಂಸ್ಕೃತಿಕ ಕಲೆಗಳನ್ನು ಜೀವಂತಗೊಳಿಸಲು ಕಲಾವಿದರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಂಘದ ಅಧ್ಯಕ್ಷ ಕೃಷ್ಣಾ ಭಜಂತ್ರಿ ಅವರು ಸಾಂಸ್ಕೃತಿಕ ಕಲೆಗಳ ಅಭೂತಪೂರ್ವ ಕಾರ್ಯಕ್ರಮ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಲಾ ತಂಡಗಳ ಪ್ರದರ್ಶನ:


ಮಹಾಶಿವರಾತ್ರಿ ಶಿವ ಭಜನೆ ಸಾಂಸ್ಕೃತಿಕ ಸಂಭ್ರಮ-೨೦೨೬ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳಿಂದ ನಾಡಿನ ಪಾರಂಪರಿಕ ಕಲೆಗಳಾದ ಜಾನಪದ ಗಾಯನ, ಭಜನಾ ಪದ, ಬಿಸುವಕಲ್ಲು ಪದ, ಸಂಪ್ರದಾಯ ಪದ, ಶಹನಾಯಿ ವಾದನ, ಸೋಬಾನ ಪದ, ಶಿವ ಭಜನೆ, ಗಂಗಾಳ ಪದ, ಹಂತಿ ಪದ ಸೇರಿ ನಾನಾ ಕಾರ್ಯಕ್ರಮ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದವು. ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾವಿದರು ಕಲೆ ಪ್ರದರ್ಶಿಸಿದರು.

ಲೋಕೇಶ್ವರ ದೇವಸ್ಥಾನ ಅರ್ಚಕ ಚನ್ನಯ್ಯಾ ಗಣಾಚಾರಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಲ್ಲಿಕಾರ್ಜುನ ಮುದಕವಿ, ಪ್ರಕಾಶ ಚುಳಕಿ, ಪ್ರಮೋದ ತೆಗ್ಗಿ, ಪ್ರವೀಣ ಗಂಗಣ್ಣವರ, ಗೋಪಾಲ ಮೂಲಿಮನಿ, ಸೈಯದ್‌ ನದಾಫ್‌, ಸುರೇಶ ಬನೋಜಿ, ಮಹೇಶ ಹುಗ್ಗಿ, ಗುಣಾಕರ ಶೆಟ್ಟಿ, ಶಿವಾನಂದ ನರಗುಂದ, ಡಾ.ಲೋಕಣ್ಣ ಭಜಂತ್ರಿ, ಸಂಸ್ಥೆ ಅಧ್ಯಕ್ಷ ಹಾಗೂ ಕಲಾವಿದ ಕೃಷ್ಣಾ ಭಜಂತ್ರಿ, ಕಲಾವಿದರು, ಕಲಾ ಪ್ರೇಕ್ಷರು ಇದ್ದರು. ಕೆ.ಪಿ. ಯಾದವಾಡ ಕಾರ್ಯಕ್ರಮ ನಿರೂಪಿಸಿದರು.