ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಶಿಕ್ಷಣ ನಿಂತ ನೀರಾಗದೆ ಹರಿಯುವ ನೀರಿನಂತಾದರೆ ಮಕ್ಕಳು ಭವಿಷ್ಯ ಸುಂದರವಾಗಲಿದೆ ಎಂದು ಅವಿರತ ಪ್ರತಿಷ್ಠಾನದ ಗುರುಪ್ರಸಾದ್ ತಿಳಿಸಿದರು.

ಗೋವಿಂದನಹಳ್ಳಿಯಲ್ಲಿ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಬೆಂಗಳೂರಿನ ಅವಿರತ ಪ್ರತಿಷ್ಠಾನ ಹಾಗೂ ಇಸ್ರೋ ಕಂಪನಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ನೋಟ್‌ ಪುಸ್ತಕ, ಪಠ್ಯಪರಿಕರ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಗಡಿನಾಡು ಪ್ರದೇಶದಿಂದ ರಾಜ್ಯಾದ್ಯಂತ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಓದಲು ಪೂರಕವಾದ ಪಠ್ಯ ಸಾಮಗ್ರಿ ವಿತರಿಸಲಾಗುತ್ತಿದೆ ಎಂದರು.

ಕನ್ನಡದ ಶಾಲೆ, ಸರ್ಕಾರಿ ಶಾಲೆ ಉಳಿಯಲು ಪೋಷಕರು ಮುಂದಾಗಬೇಕಿದೆ. ಮಕ್ಕಳಿಗೆ ಸಂಸ್ಕಾರ ಕಲಿಕೆ ಮುಖ್ಯ. ಇಲ್ಲವಾದರೆ ಭವಿಷ್ಯದಲ್ಲಿ ಸಂಸ್ಕೃತಿ, ಪರಂಪರೆ, ಸನ್ನಡತೆ ಮಾಯವಾಗಲಿದೆ. ನಿಮ್ಮೂರ ನಿಮ್ಮ ಶಾಲೆ ಉಳಿಯಲು ನಮ್ಮ ಸಂಸ್ಥೆ ಸದಾ ಬದ್ಧವಿದೆ ಎಂದರು.

ಮಕ್ಕಳಿಗೆ ಅಂಕದಷ್ಟೆ ಸಂಸ್ಕಾರ ಶಿಕ್ಷಣ ಮುಖ್ಯವಿದೆ. ಮೊಬೈಲ್ ತಲೆ ತಗ್ಗಿಸುವಂತೆ ಭವಿಷ್ಯದಲ್ಲಿ ಮಾಡಲಿದೆ. ತಲೆ ಎತ್ತಿ ಬದುಕಲು ಪುಸ್ತಕವನ್ನು ಮಸ್ತಕಕ್ಕೆ ತುಂಬಿಕೊಳ್ಳಬೇಕು. ಓದುವಾಗ ಕಷ್ಟದ ಬದುಕು ಕಾಡದಿರಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಎಂಬುದು ಸಂಸ್ಥೆ ಆಶಯವಾಗಿದೆ ಎಂದು ಹುರಿದುಂಬಿಸಿದರು.


ಬೆಡದಹಳ್ಳಿ, ಬೆಳ್ಳಿಬೆಟ್ಟ ಕಾವಲು ಸೇರಿದಂತೆ ದಬ್ಬೇಘಟ್ಟ ಗ್ರಾಪಂ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಪಠ್ಯ ಪರಿಕರ ವಿತರಿಸಲಾಯಿತು. ಈ ವೇಳೆ ಸಂತೋಷ್, ಮಲ್ಲೇಶ್, ಇಸ್ರೇ ಕಂಪನಿಯ ಅರುಣ್, ಮಧುಸೂದನ್, ದೀಪಕ್, ಸತ್ಯಕುಮಾರ್, ಮೋಹನ್ ನಿಂಬಾಳ್ಕಾರ್, ದೀಪಾ, ನಿಶಾ, ಶ್ವೇತಾ, ನಾಗಭೂಷಣ, ವಿನೋದ್‌ಕುಮಾರ್, ಗಿರೀಶ್, ಶಶಿಕಿರಣ್, ಶಿಕ್ಷಕ ಜಿ.ಎಸ್. ಮಂಜು ವಿವಿಧ ಶಾಲಾ ಶಿಕ್ಷಕರು ಇದ್ದರು.