ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಕರ್ಣಾಟಕ ಬ್ಯಾಂಕ್ ನಿರಂತರವಾಗಿ ಪ್ರಗತಿ ಸಾಧಿಸುತ್ತಾ ಮುನ್ನಡೆದಿರುವ ಹಣಕಾಸು ಸಂಸ್ಥೆಯಾಗಿದೆ ಎಂದು ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಟಿ.ಆರ್.ಅರುಣ್ ತಿಳಿಸಿದರು.ಪಟ್ಟಣದ ಬ್ರಾಹ್ಮಣ ಸಮುದಾಯ ಭವನಕ್ಕೆ ಬ್ಯಾಂಕ್ ಕೊಡುಗೆಯಾಗಿ ನೀಡಿರುವ ಲಿಫ್ಟ್ ಸೇವೆಗೆ ಚಾಲನೆ ನೀಡಿ ಮಾತನಾಡಿ, ಬ್ಯಾಂಕ್ ಪ್ರತಿ ತ್ರೈಮಾಸಿಕದಲ್ಲೂ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಬ್ಯಾಂಕಿನ ಆದಾಯದಲ್ಲಿ ಶೇ. 10ರಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂಬ ತನ್ನ ಮೂಲ ಉದ್ದೇಶವನ್ನು ನಿರಂತರವಾಗಿ ಪಾಲನೆ ಮಾಡುತ್ತಾ ಬಂದಿದ್ದು, ಸಮುದಾಯ ಭವನಕ್ಕೆ ಈ ಹಿಂದೆ ಸೋಲಾರ್ ಯಂತ್ರವನ್ನು ನೀಡಿತ್ತು. ಇದೀಗ ಲಿಫ್ಟ್ ಅನ್ನು ಕೊಡುಗೆಯಾಗಿ ನೀಡಿದೆ. ಬ್ಯಾಂಕ್ ವಿವಿಧ ಯೋಜನೆಗಳನ್ನು ರೂಪಿಸಿದ್ದು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು. ಬ್ಯಾಂಕಿನ ಕ್ಲಸ್ಟರ್ ಮುಖ್ಯ ವ್ಯವಸ್ಥಾಪಕ ಟಿ. ಜಯಾನಂದ ದೇವಾಡಿಗ ಮಾತನಾಡಿ, ಪಟ್ಟಣದಲ್ಲಿ 64 ವರ್ಷಗಳ ಹಿಂದೆ ಪ್ರಾರಂಭವಾದ ಇಲ್ಲಿನ ಕರ್ನಾಟಕ ಬ್ಯಾಂಕ್ ಶಾಖೆ ಇಂದು ಬೃಹತ್ ಆಗಿ ಬೆಳೆದು ವಾರ್ಷಿಕ 165 ಕೋಟಿ ರು. ವಹಿವಾಟು ನಡೆಸುತ್ತಿದೆ. ಬ್ಯಾಂಕ್ ಶೀಘ್ರದಲ್ಲೆ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ಒದಗಿಸಲಿದೆ ಎಂದರು. ಬ್ಯಾಂಕಿನ ಶಾಖಾ ವ್ಯವಸ್ಥಾಪಕ ವಿ.ಕೆ.ಶ್ರೀಧರ್, ಸಮುದಾಯ ಭವನದ ಅಧ್ಯಕ್ಷ ಕೆ.ನಂಜುಂಡಸ್ವಾಮಿ ಮಾತನಾಡಿದರು. ಸಮುದಾಯ ಭವನದ ಕಾರ್ಯದರ್ಶಿ ಎ. ಎಸ್. ಹಿರಣ್ಣಯ್ಯ, ಖಜಾಂಚಿ ಎಚ್.ಜಿ. ರಮೇಶ್ ಉಪಸ್ಥಿತರಿದ್ದರು. ಹೈಕೋರ್ಟ್ ವಕೀಲ ಎ. ಎನ್. ಕೃಷ್ಣಸ್ವಾಮಿ, ಉದ್ಯಮಿ ಎ.ಎಸ್. ಸೀತಾರಾಮು ಬ್ಯಾಂಕ್ ಅಧಿಕಾರಿಗಳನ್ನು ಗೌರವಿಸಿದರು. ವಾರ್ಷಿಕ ಸಭೆ: ಬ್ರಾಹ್ಮಣ ಸಮುದಾಯ ಭವನ ಸಮಿತಿಯ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಕೆ. ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಮಿತಿಯ ಕಾರ್ಯಚಟುವಟಿಕೆ, ವಾರ್ಷಿಕ ವರದಿ, ಜಮಾ ಖರ್ಚು, 2024-25ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ, ಸಮಗ್ರ ಬೈಲಾ ತಿದ್ದುಪಡಿ ಕುರಿತು ಮಾಹಿತಿ ನೀಡಲಾಯಿತು. ನಿರ್ದೇಶಕರಾದ ಎ.ಎಸ್. ರಾಮಸ್ವಾಮಿ, ಎ.ಎನ್ ಗಣೇಶಮೂರ್ತಿ, ಕೆ.ವಿ.ರಾಮಕೃಷ್ಣ, ನಾಗಮಣಿ ವೆಂಕಟೇಶಮೂರ್ತಿ, ಉಮಾ ಚಂದ್ರಶೇಖರ್, ಪಿ.ಎಸ್.ಪ್ರಸಾದ್, ಪ್ರಮುಖರಾದ ಎ.ಎಸ್.ರಂಗಸ್ವಾಮಿ, ಕೆ.ವಿ.ನಾಗೇಂದ್ರ, ಚಿದಂಬರ ಬಾಬು ಉಪಸ್ಥಿತರಿದ್ದರು.