ಸಾರಾಂಶ
ನೈಋತ್ಯ ಮಾನ್ಸೂನ್ ಶುಕ್ರವಾರ ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶ, ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉಳಿದ ಭಾಗಗಳು ಹಾಗೂ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮತ್ತಷ್ಟು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮೇ 25 ರಿಂದ 29ರ ವರೆಗೆ ಕರಾವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆಯ ಪ್ರಮಾಣ ತುಸು ಕಡಿಮೆಯಾಗಿದೆ. ಶುಕ್ರವಾರ ಹಗಲು ಮೋಡ, ಅಲ್ಲಲ್ಲಿ ತುಂತುರು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮೇ 25ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಇಡೀ ದಿನ ಮೋಡ ಕವಿದ ವಾತಾವರಣ, ಅಪರಾಹ್ನ ಮಂಗಳೂರಲ್ಲಿ ಹನಿ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿ ನಸುಕಿನ ಜಾವ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನ ವೇಳೆಗೆ ಒಂದಷ್ಟು ಬಿಸಿಲು ಕಾಣಿಸಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಬಂಟ್ವಾಳದ ಪುದು ಎಂಬಲ್ಲಿ ಮನೆಯೊಂದರ ಕಂಪೌಂಡ್ ಕುಸಿದಿದೆ. ಇನ್ನೊಂದೆಡೆ ಹೈದರ್ ಎಂಬವರ ಅಡುಗೆ ಮನೆ ಕುಸಿದ ಘಟನೆ ಸಂಭವಿಸಿದೆ.ಮಳೆ ಮುಂದುವರಿಕೆ ಸೂಚನೆ:
ನೈಋತ್ಯ ಮಾನ್ಸೂನ್ ಶುಕ್ರವಾರ ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶ, ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉಳಿದ ಭಾಗಗಳು ಹಾಗೂ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮತ್ತಷ್ಟು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮೇ 25 ರಿಂದ 29ರ ವರೆಗೆ ಕರಾವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಮೂಲ್ಕಿಯಲ್ಲಿ ಗರಿಷ್ಠ ಮಳೆ:
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ಮೂಲ್ಕಿಯಲ್ಲಿ ಗರಿಷ್ಠ 42.3 ಮಿಲಿ ಮೀಟರ್ ಮಳೆಯಾಗಿದ್ದು, ದಿನದ ಸರಾಸರಿ ಒಟ್ಟು ಮಳೆ 8.6 ಮಿ.ಮೀ. ದಾಖಲಾಗಿದೆ.ಬೆಳ್ತಂಗಡಿ 4.6 ಮಿ.ಮೀ, ಬಂಟ್ವಾಳ 4.9 ಮಿ.ಮೀ, ಮಂಗಳೂರು 11.2 ಮಿ.ಮೀ, ಪುತ್ತೂರು 8.2 ಮಿ.ಮೀ, ಸುಳ್ಯ 17.3 ಮಿ.ಮೀ, ಮೂಡುಬಿದಿರೆ 14.5 ಮಿ.ಮೀ, ಕಡಬ 4.3 ಮಿ.ಮೀ, ಉಳ್ಳಾಲ 3.7 ಮಿ.ಮೀ. ಮಳೆ ದಾಖಲಾಗಿದೆ.