ಸಾರಾಂಶ
ಜಾತಿ ಬೇಧದ ತಾರತಮ್ಯವಿಲ್ಲದೆ ಎಲ್ಲರೂ ಒಂದೇ ಎನ್ನುವ ಮನೋಭಾವ ಹೊಂದಿದ್ದ ಲಿಂಗೈಕ್ಯ ಶಿವಕುಮಾರ ಶ್ರೀಗಳು ತಮ್ಮ ಇಡೀ ಬದುಕನ್ನು ಸಮಾಜ ಸೇವೆಗಾಗಿಯೇ ಮುಡುಪಾಗಿಟ್ಟರು. ನಿರಂತರ ಜನಕಲ್ಯಾಣಕ್ಕಾಗಿ ಶ್ರಮಿಸಿ ಅನ್ನ ದಾಸೋಹ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಮಂದಿಗೆ ಬದುಕು ಕಟ್ಟಿಕೊಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ದಾಸೋಹ ಕಲ್ಪಿಸಿ ಬದುಕು ರೂಪಿಸಿರುವ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರೀಗಳು ದೇಶ ಕಂಡ ಮಹಾನ್ ಶ್ರೇಷ್ಠ ಸಂತ ಎಂದು ವೀರಶೈವ ಲಿಂಗಾಯತ ಸಂಘದ ತಾಲೂಕು ಘಟಕದ ಅಧ್ಯಕ್ಷ ಜೆ.ಎಸ್.ರಾಜಶೇಖರ್ ತಿಳಿಸಿದರು.ಪಟ್ಟಣದ ವೀರಶೈವ ಲಿಂಗಾಯತ ಸಮಾಜದಿಂದ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಶ್ರೀಶಿವಕುಮಾರ ಸ್ವಾಮೀಜಿ 117ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಬಸವಣ್ಣನವರ ಅನುಯಾಯಿಯಾಗಿದ್ದ ಶಿವಕುಮಾರ ಶ್ರೀಗಳು ಆಧ್ಯಾತ್ಮದ ಜೊತೆಗೆ ಬಡ ಜನರ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವ ಮಹಾಪುರುಷರಾಗಿದ್ದರು ಎಂದರು.
ಜಾತಿ ಬೇಧದ ತಾರತಮ್ಯವಿಲ್ಲದೆ ಎಲ್ಲರೂ ಒಂದೇ ಎನ್ನುವ ಮನೋಭಾವ ಹೊಂದಿದ್ದ ಶ್ರೀಗಳು ತಮ್ಮ ಇಡೀ ಬದುಕನ್ನು ಸಮಾಜ ಸೇವೆಗಾಗಿಯೇ ಮುಡುಪಾಗಿಟ್ಟರು. ನಿರಂತರ ಜನಕಲ್ಯಾಣಕ್ಕಾಗಿ ಶ್ರಮಿಸಿ ಅನ್ನ ದಾಸೋಹ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಮಂದಿಗೆ ಬದುಕು ಕಟ್ಟಿಕೊಟ್ಟಿದ್ದಾರೆ ಎಂದರು.ಶ್ರೀಗಳ ಜನ್ಮದಿನದ ಪ್ರಯುಕ್ತ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ನಮನ ಸಲ್ಲಿಸಿದ ಬಳಿಕ ನೆರೆದಿದ್ದ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ಕೋಸಂಬರಿ, ಪಾನಕ ಮತ್ತು ಮಜ್ಜಿಗೆ ವಿತರಿಸಲಾಯಿತು.
ಈ ವೇಳೆ ಸಂಘದ ಉಪಾಧ್ಯಕ್ಷ ನಟೇಶ್ಬಾಬು, ಕಾರ್ಯದರ್ಶಿ ರವಿ, ಪದಾಧಿಕಾರಿಗಳಾದ ಅರುಣ್ಕುಮಾರ್, ಕಗ್ಗೆರೆ ರಾಜಶೇಖರ್, ನಿವೃತ್ತ ಶಿಕ್ಷಕ ನಾಗರಾಜು, ಎನ್.ನಟರಾಜ್ ಸೇರಿದಂತೆ ಅಕ್ಕಮಹಾದೇವಿ ಸಂಘದ ಮಹಿಳಾ ಪದಾಧಿಕಾರಿಗಳು ಇದ್ದರು.