ಈ ಬಾರಿ ದೃಷ್ಟಿ ದೋಷ ನಿವಾರಣೆಯ ಸಂಕಲ್ಪವನ್ನು ವಿಶೇಷ ಕಾಳಜಿಯೊಂದಿಗೆ ಅನುಷ್ಠಾನಗೊಳಿಸುವ ಸಂಕಲ್ಪವನ್ನು ಮಾಡಲಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಉತ್ತಮ ಆರಂಭ ದೊರೆತಿದೆ .

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ವತಿಯಿಂದ ಜಿಲ್ಲಾ ದೃಷ್ಟಿದೋಷ ನಿವಾರಣಾ ವಿಭಾಗದ ಸಹಯೋಗದಲ್ಲಿ 20ಕ್ಕೂ ಅಧಿಕ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ದೃಷ್ಟಿದೋಷ ತಪಾಸಣಾ ಬೃಹತ್‌ ಶಿಬಿರವನ್ನು ಲಯನ್ಸ್‌ ಜಿಲ್ಲೆ 317ಎಫ್‌ನ ನೂತನ ಗೌರ್ನರ್‌ ಆಕಾಶ್‌ ಎ.ಸುವರ್ಣ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ದೃಷ್ಟಿದೋಷ ನಿವಾರಣೆ ವಿಷಯದಲ್ಲಿ ಲಯನ್ಸ್‌ ಕ್ಲಬ್‌ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಇದೀಗ ಮಕ್ಕಳ ದೃಷ್ಟಿ ತಪಾಸಣೆಯ ಮೂಲಕ ಸಂಭವನೀಯ ದೃಷ್ಟಿದೋಷ ತಪ್ಪಿಸುವ ಮಹತ್ವದ ಕೆಲಸಕ್ಕೆ ಮುಂದಾಗಿರುವುದು ಗಣನೀಯ. ಒಂದೇ ದಿನ 20ಕ್ಕೂ ಹೆಚ್ಚು ಶಾಲೆಗಳ ಸಾವಿರಾರು ಮಕ್ಕಳ ದೃಷ್ಟಿ ತಪಾಸಣೆ ನಡೆಸಲಾಗುತ್ತಿರುವುದು ವಿಶೇಷವಾಗಿದೆ. ಕಣ್ಣಿನ ಆರೋಗ್ಯಕ್ಕೆ ಪ್ರತಿಯೊಬ್ಬರೂ ಮಹತ್ವ ನೀಡಲೇ ಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಮಲ್ಟಿಪಲ್‌ ಜಿಲ್ಲೆ 317ರ ಮಾಜಿ ಅಧ್ಯಕ್ಷ ಬಿ.ಎಸ್.ರಾಜಶೇಖರಯ್ಯ ಮಾತನಾಡಿ, ಈ ಬಾರಿ ದೃಷ್ಟಿ ದೋಷ ನಿವಾರಣೆಯ ಸಂಕಲ್ಪವನ್ನು ವಿಶೇಷ ಕಾಳಜಿಯೊಂದಿಗೆ ಅನುಷ್ಠಾನಗೊಳಿಸುವ ಸಂಕಲ್ಪವನ್ನು ಮಾಡಲಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಉತ್ತಮ ಆರಂಭ ದೊರೆತಿದೆ ಎಂದು ಶ್ಲಾಘಿಸಿದರು.

ಲಯನ್ಸ್‌ ಕ್ಲಬ್ ಅಧ್ಯಕ್ಷ ಪ್ರೊ.ರವಿಕಿರಣ್ ಕೆ.ಆರ್ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಸಿ.ಎಂ.ನಾರಾಯಣಸ್ವಾಮಿ, ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಜಿಎಸ್‌ಟಿ ಸಂಯೋಜಕ ಆರ್.ರವಿಚಂದ್ರನ್, ದೃಷ್ಟಿ ವಿಭಾಗದ ಜಿಲ್ಲಾ ಸಂಯೋಜಕ ಕೆ.ಎಸ್.ಅಜಿತ್‌ಬಾಬು, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ದೃಷ್ಟಿ ವಿಭಾಗದ ಜಿಲ್ಲಾ ಪದಾಧಿಕಾರಿಗಳಾದ ಎ.ಕೆ.ಸುರೇಶ್, ಕೆ.ಮನೋಜ್‌ಕುಮಾರ್, ಡಿ.ಕೆ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

37 ಜನರಿಗೆ ಐಒಎಲ್‌ ಶಸ್ತ್ರಚಿಕಿತ್ಸೆ:

ಇದೇ ವೇಳೆ ದೃಷ್ಟಿದೋಷವುಳ್ಳ 37 ಫಲಾನುಭವಿಗಳನ್ನು ಐಒಎಲ್‌ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ವೈದ್ಯರ ದಿನದ ಅಂಗವಾಗಿ ಹಿರಿಯ ವೈದ್ಯೆ ಡಾ.ಪದ್ಮಿನಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಣ್ಣಿನ ತಪಾಸಣಾ ಕೇಂದ್ರದಲ್ಲಿ ಫಲಾನುಭವಿಗಳ ನೇತ್ರ ತಪಾಸಣಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಲಯನ್ಸ್‌ ಕ್ಲಬ್‌ನ ಕಾರ್ಯದರ್ಶಿ ಸುಮಾ, ಖಜಾಂಚಿ ನಾಗರಾಜ್, ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ಜಂಟಿ ಕಾರ್ಯದರ್ಶಿ ಮುಕೇಶ್‌ ಮತ್ತಿತರರು ಉಪಸ್ಥಿತರಿದ್ದರು.