ಸಾರಾಂಶ
ಗದಗ: 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಕಾಯಕ,ದಾಸೋಹ, ಅನುಭಾವ ಸಿದ್ಧಾಂತಗಳಿಗೆ ಪ್ರಾಮುಖ್ಯತೆ ನೀಡಿದರು, ಅದರಂತೆ ನಮ್ಮ ಮನಸ್ಸು ಶುದ್ಧವಾಗಿಡಲು ಪುರಾಣ ಪ್ರವಚನ ಕೇಳುವುದರಿಂದ ಜ್ಞಾನದ ವಿಕಾಸವಾಗುವುದು ಎಂದು ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.
ನಗರದ ಒಕ್ಕಲಗೇರಿ ಓಣಿಯ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪುರಾಣ ಪ್ರವಚನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಬಸವಣ್ಣನವರು 12ನೇ ಶತಮಾನದಲ್ಲಿ ಮನುಷ್ಯ ಹೇಗೆ ಬದುಕಬೇಕು ಎನ್ನುವ ಬಗ್ಗೆ ವಿಸ್ತಾರವಾಗಿ ಹೇಳಿರುವರು. ಪ್ರತಿಯೊಬ್ಬ ಮನುಷ್ಯ ಕಾಯಕದಲ್ಲಿ ತಲ್ಲೀನರಾಗಬೇಕು. ತಾವು ದುಡಿದಿದ್ದರಲ್ಲಿ ಅಲ್ಪ ಪ್ರಮಾಣವನ್ನಾದರೂ ದಾಸೋಹಕ್ಕೆ ಮೀಸಲಿಡಬೇಕು ಹಾಗೂ ಅನುಭಾವ ಸಿದ್ಧಾಂತದ ಬಗ್ಗೆ ತಿಳಿದುಕೊಳ್ಳಬೇಕು. ಒಂದು ವರ್ಷದಲ್ಲಿ 11 ತಿಂಗಳು ನಾವು ದುಡಿಯುತ್ತಿರುತ್ತೇವೆ, ಒಂದು ತಿಂಗಳು ಜ್ಞಾನದ ವಿಕಾಸಕ್ಕಾಗಿ ಪುರಾಣ ಪ್ರವಚನ ಕೇಳಬೇಕು ಎಂದರು.
ಜಿಲ್ಲಾ ವೀರಶೈವ ಲಿಂಗಾಯತ ಮಹಾಸಮಾಜದ ಅಧ್ಯಕ್ಷ ರಾಜು ಗುಡಿಮನಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಅದ್ಭುತವಾದ ಮಹಿಳೆ ಹಾಗೂ ಒಬ್ಬ ಆದರ್ಶ ಮಹಿಳೆಯಾಗಿ ಬಂದ ನೋವುಗಳನ್ನು ಸಹಿಸಿಕೊಂಡು ಬದುಕಿ ಆದರ್ಶ ಪರವಾಗಿ ಬದುಕಿದರು.ಅಂತವರನ್ನು ನಾವು ಇಂದಿಗೂ ನೆನೆಯುತ್ತಾ ಇರುತ್ತೇವೆ ಎಂದರು.ಪ್ರಗತಿಪರ ರೈತ ಮುರಿಗೆಪ್ಪ ಕರುಗಲ್ಲ ಸಾಂದರ್ಭಿಕವಾಗಿ ಮಾತನಾಡಿದರು. ಈಶ್ವರಿ ವಿಶ್ವವಿದ್ಯಾಲಯದ ಸಾವಿತ್ರಿ ಅಕ್ಕನವರು ರಕ್ಷಾಬಂಧನದ ಕುರಿತು ಮಾತನಾಡಿದರು. ವೇದಮೂರ್ತಿ ಹೇಮರಾಜ ಶಾಸ್ತ್ರಿಗಳು ಪ್ರವಚನ ನೀಡಿದರು.
ಈ ವೇಳೆ ಶಿದ್ಧಲಿಂಗಪ್ಪ ಅರಳಿ, ಗಂಗಾಧರ ನಂದಿಕೋಲಮನಠ, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಚನ್ನಪ್ಪ ನಿಲುಗಲ, ಅಜ್ಜು ಹಿರೇಮಠ, ಶೇಖಪ್ಪ ಹೊಂಬಳ, ಪ್ರಭು ಶೆಟ್ಟರ, ಶಂಕರ ನೀರಲಕೇರಿ, ಅಶೋಕ ಕೋಟಿ, ತೋಟಪ್ಪ ಕರಮೂಡಿ, ಸುರೇಶ ಮಾಳವಾಡ, ಸುನಂದಾ ಜೋಬಾಳೆ, ದೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಶೈಲಾ ಮಾನ್ವಿ, ಸರಸ್ವತಿ ನಂದಿಕೋಲಮಠ, ಅನಸೂಯಾ ಮೇಲಗಿರಿ ಹಾಗೂ ಮುಂತಾದವರು ಇದ್ದರು.ವಿರುಪಾಕ್ಷಪ್ಪ ಅಕ್ಕಿ ಸ್ವಾಗತಿಸಿದರು. ಎಂ.ಎಂ.ಹಿರೇಮಠ ನಿರೂಪಿಸಿ, ವಂದಿಸಿದರು.