ಸಾರಾಂಶ
ಶ್ರಾವಣದಲ್ಲಿ ಆಧ್ಯಾತ್ಮದ ಜ್ಞಾನ ಯಜ್ಞದಲ್ಲಿ ತೇಲಿ. ನವವಿಧ ಶ್ರವಣ ಭಕ್ತಿಯಲ್ಲಿ ಸಾಗಿ ಪುರಾಣ, ಪುಣ್ಯ ಕಥೆ, ಶಾಸ್ತ್ರ. ಉತ್ತಮ ಪಾರಾಯಣ ಕೇಳಿ ಆನಂದಿಸಿ
ಗಜೇಂದ್ರಗಡ: ಒತ್ತಡದ ಬದುಕಿನಲ್ಲಿ ಧಾರ್ಮಿಕ ಪ್ರವಚನ ಆಲಿಸಿದರೆ ಮನಸ್ಸಿನಲ್ಲಿ ನವೋಲ್ಲಾಸ ಮೂಡುತ್ತದೆ ಎಂದು ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.
ಸ್ಥಳೀಯ ಮೈಸೂರು ಮಠದಲ್ಲಿ ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ-ಉಣಚಗೇರಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಾನಗಲ್ ಗುರುಕುಮಾರೇಶ್ವರ ಪುರಾಣ ಪ್ರವಚನ ಉದ್ಘಾಟಿಸಿ ಅವರು ಮಾತನಾಡಿದರು.ಶ್ರಾವಣದಲ್ಲಿ ಆಧ್ಯಾತ್ಮದ ಜ್ಞಾನ ಯಜ್ಞದಲ್ಲಿ ತೇಲಿ. ನವವಿಧ ಶ್ರವಣ ಭಕ್ತಿಯಲ್ಲಿ ಸಾಗಿ ಪುರಾಣ, ಪುಣ್ಯ ಕಥೆ, ಶಾಸ್ತ್ರ. ಉತ್ತಮ ಪಾರಾಯಣ ಕೇಳಿ ಆನಂದಿಸಿ. ಶ್ರಾವಣ ಮಾಸ ಪವಿತ್ರ ಮಾಸ. ಶ್ರವಣವೆಂದರೆ ಒಳ್ಳೆಯದು ಕೇಳುವುದು. ಕೇಳಿದನ್ನು ಬದುಕಿನ ಭಾಗದಲ್ಲಿ ಭದ್ರವಾಗಿ ಇರಿಸಿಕೊಳ್ಳುವುದು. ಒಳ್ಳೆಯದನ್ನು ಕೇಳಿ ಕೆಟ್ಟದನ್ನು ತೊರೆಯಿರಿ ಎಂದ ಅವರು, ಎಲ್ಲರ ಒಳಿತು ಬಯಸುವುದೇ ಮಾನವ ಧರ್ಮ. ಸತ್ಕಾರ್ಯಗಳು ದೇವರಿಗೆ ಪ್ರೀತಿ. ಪುರಾಣಗಳು ಈ ನೆಲದ ಸತ್ವ. ಅವುಗಳ ಒಳ ನೋಟ ಪ್ರವಚನಕಾರರ ಧ್ವನಿಯಿಂದ ಹೀರಿಕೊಳ್ಳಿ. ಸ್ಮರಣ ಕಾವ್ಯಗಳ ಕಥಾ ಹಂದರದಲ್ಲಿ ಮಿನುಗಿ ಇಂದಿನ ಸಾಮಾಜಿಕ ತಲ್ಲಣಗಳ ಜಗದಲ್ಲಿ ಆಧ್ಯಾತ್ಮಿಕ ಸಿಂಚನ ಮನು ಕುಲಕ್ಕೆ ಅಗತ್ಯ. ಧರ್ಮ, ಸಂಪ್ರದಾಯವನ್ನು ಹತ್ತಿಕ್ಕಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಿಲ್ಲ ಎಂದರು. ವೀರಶೈವ-ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಕ್ಕೆ ಮಠಾಧೀಶರನ್ನು ಕೊಟ್ಟರು. ಸುಂದರ ಸಮಾಜ ಕಟ್ಟುವುದೇ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಶಿವಯೋಗ ಮಂದಿರ ಸ್ಥಾಪಿಸಿ, ಅಲ್ಲಿ ಮಠಾಧೀಶರಾಗ ಬಯಸುವವರಿಗೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ತರಬೇತಿ ನೀಡಿದ್ದರು. ಈಗ ಪ್ರತಿ ಊರಲ್ಲೂ ಮಠಾಧೀಶರನ್ನು ಕಾಣುತ್ತಿರುವುದರ ಶ್ರೇಯ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.ಪುರಾಣಿಕರಾದ ಮೈಸೂರಿನ ನಿರಂಜನ ದೇವರು, ಸಂಗೀತಗಾರರು ಸಂತೋಷ ಪಾಟೀಲ, ಸಿದ್ದಲಿಂಗೇಶ ಯತ್ನಳ್ಳಿ ಪುರಾಣ ನೆರವೇರಿಸಿದರು.ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಪುರಾಣ ಸಮಿತಿಯ ಅಧ್ಯಕ್ಷ ದೇವಪ್ಪ ಮಡಿವಾಳರ, ಪ್ರಭು ಚವಡಿ, ಅಮರೇಶ ಗಾಣಿಗೇರ, ಎಸ್.ಎಸ್. ವಾಲಿ, ಕಲ್ಲಪ್ಪ ಸಜ್ಜನರ, ಬಸವರಾಜ ಶೀಲವಂತರ, ಶಿವಕುಮಾರ ಕೊರಧಾನ್ಯಮಠ, ಶರಣಪ್ಪ ರೇವಡಿ, ವಿಜಯ ಬೂದಿಹಾಳ, ಬಸವರಾಜ ಚನ್ನಿ, ಶಿವಕುಮಾರ ಶಶಿಮಠ ಸೇರಿ ಇತರರು ಇದ್ದರು.