ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಷರದಾಸೋಹ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿಕೊಂಡಿದ್ದ ಬಿಸಿಯೂಟದ ಅಡುಗೆ ಸಹಾಯಕರ ತರಬೇತಿ ಶಿಬಿ

ಕನ್ನಡಪ್ರಭ ವಾರ್ತೆ ತಿಪಟೂರು

ಬಡ ಹಾಗೂ ಸಾಮಾನ್ಯ ವರ್ಗದ ಜನರ ಮತ್ತು ಅವರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ, ಆರ್ಥಿಕ ಸ್ವಾವಲಂಬನೆಗಾಗಿ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣರವರು ಅಕ್ಷರ ದಾಸೋಹದಂತಹ ಮಹತ್ವಪೂರ್ಣವಾದ ಯೋಜನೆಯನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಿದರು ಎಂದು ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಕ್ಷರಿ ತಿಳಿಸಿದರು. ನಗರದ ಎಸ್.ವಿ.ಪಿ. ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಷರದಾಸೋಹ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿಕೊಂಡಿದ್ದ ಬಿಸಿಯೂಟದ ಅಡುಗೆ ಸಹಾಯಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳ ಸರ್ವಾಂಗೀಣ ಸಂವರ್ಧನೆಗಾಗಿ, ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುವ, ಸ್ವಾವಲಂಬನೆ ಬದುಕುಕಟ್ಟಿಕೊಡುವುದಕ್ಕಾಗಿ ಅಕ್ಷರ ದಾಸೋಹದ ಯೋಜನೆಯಡಿಯಲ್ಲಿ ಅಡುಗೆ ಸಹಾಯಕರಾಗಿ ಕರ್ತವ್ಯಕ್ಕೆ ಸರ್ಕಾರ ನೇಮಿಸಿಕೊಂಡಿದೆ. ಸಮರ್ಪಕವಾದ ಸಂಭಾವನೆಯನ್ನು ನೀಡುತ್ತಾ ಗೌರವಯುತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತಾ ಬಂದಿದೆ. ಇದರ ಜೊತೆಗೆ ಕ್ಷೀರ ಭಾಗ್ಯದಂತಹ ಯೋಜನೆಯನ್ನು ಜಾರಿಗೆ ತಂದು ಶಾಲಾ ಮಕ್ಕಳಿಗಾಗಿ ಒಂದೇ ಪರಿಸರದಲ್ಲಿ ಅನ್ನ, ಕ್ಷೀರ ಮತ್ತು ಅಕ್ಷರ ಭಾಗ್ಯಗಳನ್ನು ಕಲ್ಪಿಸಿಕೊಟ್ಟು ಅಭಿವೃದ್ಧಿಗಾಗಿ ಸರ್ಕಾರ ಹೆಚ್ಚು ಒತ್ತುಕೊಟ್ಟಿದೆ. ಇದರಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಹಾಯಕರು ಬಹಳ ಎಚ್ಚರಿಕೆಯಿಂದ ಮಕ್ಕಳುಗಳನ್ನು ನೋಡಿಕೊಂಡು ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು. ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯಮಾತನಾಡಿ, ಸರ್ಕಾರ ಮಕ್ಕಳುಗಳಿಗೆ ಕಡ್ಡಾಯ ಶಿಕ್ಷಣ ನೀಡುವುದು, ಶಾಲೆಗಳಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಮತ್ತು ದಾಖಲಾತಿ ಪ್ರಮಾಣವನ್ನು ನಿಯಮಿತವಾಗಿ ಹೆಚ್ಚಿಸುವುದಕ್ಕಾಗಿ ಅನುಷ್ಠಾನಗೊಳಿಸಿರುವ ಈ ಅಕ್ಷರದಾಸೋಹದ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಬಿಸಿಯೂಟ ತಯಾರಕರು ಶಾಲೆಯಲ್ಲಿ ಇರುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿ ವಿಶ್ವಾಸದಿಂದ ಕಾಣುತ್ತಾ, ತಾಯಿ ಮಮತೆ ತೋರಬೇಕು. ಅಡುಗೆ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಅವಗಡಗಳು, ಅನಾಹುತಗಳು, ಅಪಾಯಗಳು ಸಂಭವಿಸದಂತೆ ಬಹಳ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ರುಚಿಕರವಾದ ಹಾಗೂ ಪೌಷ್ಠಿಕಾಂಶಯುಕ್ತ ಆಹಾರವನ್ನು ತಯಾರಿಸಿ ನೀಡುತ್ತಾ ಅವರ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತುಕೊಡಬೇಕಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್. ತಾರಾಮಣಿ ಮಾತನಾಡಿ, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಕ್ಕಳ ಸರ್ವಾಂಗೀಣ ಏಳಿಗೆಗಾಗಿ ಉಚಿತವಾದ ಪುಸ್ತಕ, ಸಮವಸ್ತ್ರ ಸೇರಿದಂತೆ ಬಿಸಿಯೂಟ, ಕ್ಷೀರಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತಂದಿರುವುದು ಸಂತಸದ ವಿಷಯವಾಗಿದೆ. ಈ ಯೋಜನೆಗಳ ಮಹತ್ವಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂಬಂಧ ಪಟ್ಟ ಸಹಾಯಕರುಗಳು, ಪರಿಚಾರಕರು ಜೋಪಾನವಾಗಿ ಮಕ್ಕಳನ್ನು ನೋಡಿಕೊಂಡು ಈ ಯೋಜನೆಗೆ ಅರ್ಥವನ್ನು ತಂದು ಕೊಡಬೇಕೆಂದು ತಿಳಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ, ಅಡುಗೆ ಸಹಾಯಕರು ತಮ್ಮ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪೂರ್ಣವಾಗಿ ಅರಿತುಕೊಂಡು ಮುಕ್ತ ಮನಸ್ಸಿನಿಂದ ಕರ್ತವ್ಯವನ್ನು ನಿರ್ವಹಿಸುವ ಮನೋಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ.ಈ ಸಂದರ್ಭದಲ್ಲಿ ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ಶಿವಶಂಕರ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ದಕ್ಷಿಣಾಮೂರ್ತಿ, ಅಡುಗೆ ಸಿಬ್ಬಂದಿಯ ತಾಲೂಕು ಘಟಕದ ಅಧ್ಯಕ್ಷೆ ಅನುಸೂಯಮ್ಮ, ಅಗ್ನಿ ಶಾಮಕ ಠಾಣಾಧಿಕಾರಿ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.