ಕನ್ನಡ ಹೋರಾಟಗಾರರ ಕೇಸ್‌ ವಾಪಸ್ಸಿಗೆ ಸಾಹಿತಿಗಳ ಆಗ್ರಹ

| Published : Nov 09 2025, 02:15 AM IST

ಸಾರಾಂಶ

ಕನ್ನಡ ಪರ ಹೋರಾಟ ಮಾಡಿದವರ ವಿರುದ್ಧ ಸಂಬಂಧವಿಲ್ಲದ ಸೆಕ್ಷನ್‌ಗಳಡಿ ಪೊಲೀಸ್‌ ಇಲಾಖೆ ಕೇಸು ದಾಖಲಿಸಿ ಹೋರಾಟಗಾರರನ್ನು ಕೋರ್ಟ್‌ಗಳಿಗೆ ಅಲೆಯುವಂತೆ ಮಾಡಿದೆ. ಈ ಮೂಲಕ ಕನ್ನಡಪರ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಕನ್ನಡ ಸಾಹಿತ್ಯ ವಲಯ ಆಕ್ರೋಶ ವ್ಯಕ್ತಪಡಿಸಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕನ್ನಡ ಪರ ಹೋರಾಟ ಮಾಡಿದವರ ವಿರುದ್ಧ ಸಂಬಂಧವಿಲ್ಲದ ಸೆಕ್ಷನ್‌ಗಳಡಿ ಪೊಲೀಸ್‌ ಇಲಾಖೆ ಕೇಸು ದಾಖಲಿಸಿ ಹೋರಾಟಗಾರರನ್ನು ಕೋರ್ಟ್‌ಗಳಿಗೆ ಅಲೆಯುವಂತೆ ಮಾಡಿದೆ. ಈ ಮೂಲಕ ಕನ್ನಡಪರ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಕನ್ನಡ ಸಾಹಿತ್ಯ ವಲಯ ಆಕ್ರೋಶ ವ್ಯಕ್ತಪಡಿಸಿದೆ. ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದೆ.

ಪ್ರತಿಭಟನೆ, ಧರಣಿ, ಮುಷ್ಕರ, ಮೆರವಣಿಗೆ, ಮುತ್ತಿಗೆ ಹೀಗೆ ಯಾವುದೇ ಮಾದರಿಯ ಹೋರಾಟವನ್ನು ಶಾಂತಿಯುತವಾಗಿ ನಡೆಸಿದಾಗಲೂ ಕನ್ನಡಪರ ಹೋರಾಟಗಾರರ ವಿರುದ್ಧ ಒಂದಲ್ಲ ಎರಡಲ್ಲ ಹಲವಾರು ಸೆಕ್ಷನ್‌ಗಳಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಕಾನೂನಿನ ಮೂಲಕ ಹೋರಾಟಗಳನ್ನು ಹತ್ತಿಕ್ಕುವುದು ಇದರ ಹಿಂದಿನ ಮರ್ಮ. ಕನ್ನಡದ ಅನುಷ್ಠಾನಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಎಲ್ಲಿಯೂ ಕೇಸು ದಾಖಲು ಮಾಡುತ್ತಿಲ್ಲ. ಇದು ಹೋರಾಟಗಾರರ ಧೈರ್ಯವನ್ನು ಕುಂದಿಸುವ ವ್ಯವಸ್ಥಿತ ಯತ್ನ ಎಂಬುದು ಹಲವು ಸಾಹಿತಿಗಳು ಗಂಭೀರ ಆರೋಪ.

ಕನ್ನಡಕ್ಕಾಗಿ ಎಂದು ಕೇಸ್‌ ಇಲ್ಲ:

ಸರ್ಕಾರ ಮೂರು ಸಾವಿರಕ್ಕಿಂತ ಹೆಚ್ಚು ಕನ್ನಡಪರ ಆದೇಶ ಮಾಡಿದೆ. ಆದರೆ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಆ ಆದೇಶಗಳ ಅನುಷ್ಠಾನದಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ವಿರುದ್ಧ ಪ್ರತಿಭಟನೆ, ಹೋರಾಟ ಮಾಡುವ ಶಕ್ತಿಯಿರುವುದು ಕನ್ನಡಪರ ಹೋರಾಟಗಾರರಿಗೆ ಮಾತ್ರ. ಆದರೆ, ಪೊಲೀಸರು ಕೇಸು ಹಾಕುವಾಗ ಕನ್ನಡ ಅನುಷ್ಠಾನಕ್ಕಾಗಿ ಇವರು ಹೋರಾಟ ಮಾಡಿದ್ದಾರೆ ಎಂದು ಕೇಸು ದಾಖಲು ಮಾಡುವುದೇ ಇಲ್ಲ. ಸಾರ್ವಜನಿಕ ಆಸ್ತಿಗೆ ಹಾನಿ, ಬೆದರಿಕೆ ಸೇರಿದಂತೆ ಇನ್ನಿತರ ಕೇಸುಗಳನ್ನು ಹೂಡುತ್ತಾರೆ. ಅಲ್ಲಿ ಕನ್ನಡಪರದ ವಿಷಯವೇ ಇರುವುದೇ ಇಲ್ಲ. ಇದು ಹೋರಾಟ ಹತ್ತಿಕ್ಕುವ ಪ್ರಯತ್ನವಲ್ಲದೇ ಮತ್ತೇನು ಎನ್ನುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರ ಪ್ರಶ್ನೆ.

ಕನ್ನಡದ ಕಾವಲುಗಾರರಿಗೆ ನ್ಯಾಯ ಸಿಗಲಿ:

ಕನ್ನಡಪರ ಹೋರಾಟಗಾರರು ಕನ್ನಡ ಅನುಷ್ಠಾನಕ್ಕಾಗಿ ಹೋರಾಟ ಮಾಡಿದಾಗ ಕೇಸು ವಾಪಸ್‌ ಪಡೆಯಬೇಕು. ಏಕೆಂದರೆ ಸರ್ಕಾರವೇ ಮಾಡಿರುವ ಆದೇಶ ಅನುಷ್ಠಾನವಾಗದಿದ್ದಾಗ ಅದನ್ನು ಕೇಳುವ ಅಧಿಕಾರ ಪ್ರಜಾಪ್ರಭುತ್ವವಾದಿಗಳಿಗೆ ಇದ್ದೇ ಇರುತ್ತದೆ. ಹೋರಾಟಗಳು, ಪ್ರತಿಭಟನೆಗಳು ನಡೆಯುವಾಗ ಹೊರಗಿನ ಶಕ್ತಿಗಳು ಕೆಲವು ವೇಳೆ ದುರ್ಬಳಕೆ ಮಾಡಿಕೊಂಡಿರಬಹುದು. ಅದಕ್ಕಾಗಿ ಹೋರಾಟಗಾರರನ್ನು ವರ್ಷಾನುಗಟ್ಟಲೆ ಕೋರ್ಟ್‌ಗೆ ಓಡಾಡುವಂತೆ ಮಾಡುವುದು ಒಳ್ಳೆಯದಲ್ಲ. ಸರ್ಕಾರ ಕೇಸುಗಳನ್ನು ವಾಪಸ್‌ ಪಡೆದರೆ ಒಳ್ಳೆಯದು. ಕನ್ನಡದ ಕಾವಲುಗಾರರಿಗೆ ಕೇಸುಗಳಿಂದ ಬಿಡುಗಡೆ ಸಿಗಲೇಬೇಕು ಎಂದು ಒತ್ತಾಯಿಸಿದ್ದಾರೆ.

ಅಹಿಂಸಾತ್ಮಕ ಹೋರಾಟ:

ಕನ್ನಡಪರ ಹೋರಾಟಗಾರರು ಮಾಡಿರುವ ಹೋರಾಟಗಳು ಬಹುಪಾಲು ಅಹಿಂಸಾತ್ಮಕವಾದವು. ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರೆ ರಾಜ್ಯಗಳಲ್ಲಿ ಅನ್ಯಭಾಷಿಕರ ಮೇಲೆ ಹಲ್ಲೆ ಮಾಡಿ, ಊರುಗಳಿಂದ ಓಡಿಸುವಂತಹ ಘಟನೆಗಳು ಕರ್ನಾಟಕದಲ್ಲಿ ನಡೆದಿಲ್ಲ. ಆದರೆ, ನಮ್ಮ ಹೋರಾಟಗಾರರು ದೈಹಿಕ ಹಲ್ಲೆಗಳನ್ನು ಎಲ್ಲಿಯೂ ಮಾಡಿಲ್ಲ. ನಾಮಫಲಕ ಕಿತ್ತು ಹಾಕಿರಬಹುದು, ಅಂಗಡಿ ಮಳಿಗೆಗಳಿಗೆ ನುಗ್ಗಿ ಪ್ರತಿಭಟನೆ ಮಾಡಿರಬಹುದು. ನಿಷೇಧಾಜ್ಞೆ ಉಲ್ಲಂಘಿಸಿ ಹೋರಾಟ ನಡೆಸಿರಬಹುದು. ಇಲ್ಲವೇ ಹೋರಾಟಕ್ಕೆ ಅನುಮತಿ ಪಡೆಯದಿರಬಹುದು. ಎಲ್ಲಿಯೂ ಹದ್ದುಮೀರಿಲ್ಲ. ಆದ್ದರಿಂದ ಸರ್ಕಾರ ಹೋರಾಟಗಾರರ ಮೇಲಿನ ಕೇಸುಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂಬುದು ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್‌ ಅವರ ಅಭಿಪ್ರಾಯ. ಕೋಟ್‌...

ಕನ್ನಡ ಪ್ರೀತಿಗೆ ಗೌರವ ಸಿಗಲಿ

ಬರಹಗಾರರು ಬರೆದು ಮನೆಗೆ ಸೇರಿಕೊಳ್ಳುತ್ತೇವೆ. ಪ್ರಶಸ್ತಿಗಳು, ಗೌರವಗಳು ಸಾಹಿತಿ, ಬರಹಗಾರರಿಗೆ ಸಿಕ್ಕುತ್ತವೆ. ಆದರೆ, ಹೋರಾಟಗಾರರಿಗೆ ಪ್ರಶಸ್ತಿಗಳು ಇಲ್ಲ, ಗೌರವವೂ ಸಿಗುತ್ತಿಲ್ಲ, ಪ್ರಶಂಸೆಯೂ ಇಲ್ಲ. ಹಣವೂ ಸಿಗುವುದಿಲ್ಲ. ಕನ್ನಡ ನಾಡು, ನುಡಿ ಮೇಲಿನ ಪ್ರೀತಿಯನ್ನು ತಮ್ಮ ಕರ್ತವ್ಯವೆಂದು ಕನ್ನಡಿಗರಿಗಾಗಿ ಹೋರಾಡು ಅವರಿಗೆ ಗೌರವ ಸಲ್ಲಬೇಕು. ಸರ್ಕಾರ ಅವರ ಮೇಲಿನ ಕೇಸುಗಳನ್ನು ಹಿಂಪಡೆಯಲೇಬೇಕು.

- ಡಾ.ಎಚ್.ಎಲ್‌.ಪುಷ್ಪಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರುಕೋಟ್‌..ತಪ್ಪು ಸಂದೇಶವಲ್ಲಈ ರೈತರು, ಹಿಂದುಪರ ಸಂಘಟನೆಗಳ ಕೇಸುಗಳನ್ನು ವಾಪಸ್‌ ಪಡೆಯಲಾಗಿದೆ. ಕನ್ನಡಪರ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಸ್‌ ಪಡೆಯುವುದರಿಂದ ಶಾಂತಿಪ್ರಿಯ ನಾಗರಿಕರಿಗೆ ತಪ್ಪು ಸಂದೇಶ ಕೊಟ್ಟಂತೆ ಆಗುವುದಿಲ್ಲ. ಬದಲಿಗೆ ಕನ್ನಡಪರವಾದ ಹೋರಾಟಗಾರರಿಗೆ ಆ ಹಂತದವರೆಗೂ ಮಾನ್ಯ ಮಾಡಿದಂತಾಗುತ್ತದೆ.- ಡಾ.ಬಂಜಗೆರೆ ಜಯಪ್ರಕಾಶ್‌, ಹಿರಿಯ ಸಾಹಿತಿ.