ಸಮಾಜಮುಖಿಯಾಗಿ ಗುರುತಿಸಿಕೊಳ್ಳಲು ಸಾಹಿತ್ಯ ಸಹಕಾರಿ. ಒಳ್ಳೆಯ ಸಾಹಿತ್ಯ ಓದುವುದನ್ನು ರೂಢಿಸಿಕೊಂಡರೆ ದೊಡ್ಡ ಸಾಧನೆ ಮಾಡುವುದಕ್ಕೆ ಸಾಧ್ಯ.
ಕಾಳಮ್ಮನಗರದಲ್ಲಿ ಪುಸ್ತಕ ಅವಲೋಕನ, ಯುಗಾದಿ ಕವಿಗೋಷ್ಠಿ
ಕನ್ನಡಪ್ರಭ ವಾರ್ತೆ ಯಲ್ಲಾಪುರಸಮಾಜಮುಖಿಯಾಗಿ ಗುರುತಿಸಿಕೊಳ್ಳಲು ಸಾಹಿತ್ಯ ಸಹಕಾರಿ. ಒಳ್ಳೆಯ ಸಾಹಿತ್ಯ ಓದುವುದನ್ನು ರೂಢಿಸಿಕೊಂಡರೆ ದೊಡ್ಡ ಸಾಧನೆ ಮಾಡುವುದಕ್ಕೆ ಸಾಧ್ಯ. ಹಾಗಾಗಿಯೇ ಜೀವನದಲ್ಲಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಮಲೆನಾಡು ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.ಶನಿವಾರ ಪಟ್ಟಣದ ಕಾಳಮ್ಮನಗರದ ಶಿವಶಂಕರ ಸಭಾಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಪುಸ್ತಕ ಅವಲೋಕನ ಹಾಗೂ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಶಿವಲೀಲಾ ಹುಣಸಗಿ ಅವರ ಬೇಲಿಯಾಚಿನ ಪಿಸುಮಾತು ಕೃತಿಯನ್ನು ಸಾಹಿತಿ ಗಣಪತಿ ಭಟ್ ವರ್ಗಾಸರ ಅವಲೋಕಿಸಿ, ಯಾವ ಬಂಧವೂ ಇಲ್ಲದೇ ಬೇಲಿಯಾಚೆ ಬಂದಾಗ ಮಾತ್ರ ಸ್ವತಂತ್ರತೆ, ಮುಕ್ತತೆ ಸಾಧಿಸಬಹುದು. ಪ್ರೀತಿ ಕಾಮವಲ್ಲ. ಪ್ರೀತಿ ಭಾವನೆಯ ಒಡ್ಡೋಲಗವಾಗಿದೆ. ಅಂತರಂಗದಲ್ಲಿ ಅಡಕವಾಗಿರುವ ತುಮುಲದಿಂದ ಹೊರಬರಲು ಬೇಲಿಯಾಚಿಗಿನ ಪಿಸುಮಾತಿನ ಕಾಳಜಿ ಸಂಕಲನದಲ್ಲಿ ವ್ಯಕ್ತವಾಗಿದೆ ಎಂದರು.ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜಾತಿ, ಧರ್ಮ ಸಂಘಟನೆಯ ಹೆಸರಲ್ಲಿ ವಿಘಟನೆ ಆಗುತ್ತಿರುವ ಸಂದರ್ಭದಲ್ಲಿ ಎಲ್ಲರನ್ನೂ ಒಳಗೊಳ್ಳುವ, ಸಾಹಿತ್ಯದ ಮೂಲಕ ಜೋಡಿಸುವ ಕೂಡಿಸುವ ಪ್ರಯತ್ನ ಆಗುತ್ತಿದೆ. ಸಾಹಿತ್ಯ ಬದುಕನ್ನು ಪರಿವರ್ತಿಸುವ ಕೆಲಸ ಮಾಡಬೇಕೆಂದರು.ಸಾಹಿತಿ ಸುಬ್ರಾಯ ಗಾಂವ್ಕರ ಬಿದ್ರೆಮನೆ ಅವರ ಹೊಸಭಾವದ ತೇರು ಕೃತಿಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಅವಲೋಕಿಸಿದರು.ಸಾಹಿತಿ ಸುಬ್ರಾಯ ಗಾಂವ್ಕರ ಬಿದ್ರೆಮನೆ ಮಾತನಾಡಿದರು.
ಸಾಹಿತಿ ಶಿರಸಿಯ ಕೃಷ್ಣ ಪದಕಿ ಅಧ್ಯಕ್ಷತೆ ವಹಿಸಿದ್ದರು.ಯುಗಾದಿ ಕವಿಗೋಷ್ಠಿಯಲ್ಲಿ ಕವಿಗಳಾದ ಡಾ ಸೌಮ್ಯ ಕೆ.ವಿ., ಲೀಲಾಧರ ಮೊಗೇರ, ಗಂಗಾಧರ ಎಸ್.ಎಲ್, ವೆಂಕಮ್ಮ ಗಾಂವ್ಕರ, ಯಮುನಾ ನಾಯ್ಕ, ಮಾನ್ಯ ಭಟ್ಟ, ಸೃಷ್ಠಿ ಮರಾಠಿ, ಅನಿತಾ ನಾಯ್ಕ, ಗಗನಾ ಗೌಡ, ಮಾರುತಿ ಆಚಾರಿ, ರಾಘವೇಂದ್ರ ಪಟಗಾರ, ಸುನಂದಾ ಪಾಟಣಕರ್, ಸುರೇಶ ಕಡೆಮನೆ, ಪ್ರಿಯಾ ಲಮಾಣಿ, ಶ್ರೀಕಾಂತ ನಾಯ್ಕರ್, ಭೂಮಿ ರಾಯ್ಕರ್, ಗೌತಮಿ ನಾರಾಯಣಕರ್, ಪಾರ್ವತಿ ಕಟ್ಟಿಮನೆ, ಉಮಾ ಗೌಡ, ಜಗದೀಶ ಬಂಡಾರಿ, ಗುರುಪ್ರಸಾದ ಕವಿತೆ ವಾಚಿಸಿದರು.ಇದೇ ವೇಳೆ ಯುಗಾದಿ ಕಾವ್ಯ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. ಕನ್ನಡದಲ್ಲಿ ಸಹಿ ಹಾಕುವ ಅಭಿಯಾನ ನಡೆಯಿತು. ಪಾರ್ವತಿ ಕಟ್ಟಿಮನಿ ಪ್ರಾರ್ಥಿಸಿದರು. ರವಿಕುಮಾರ ನಿರೂಪಿಸಿದರು. ಶಿಕ್ಷಣ ಸಂಯೋಜಕ ಸುಧಾಕರ ನಾಯಕ ಸ್ವಾಗತಿಸಿದರು. ತ್ರೇಶಾ ನೋಹಾ ವಂದಿಸಿದರು.