ಸಾಹಿತ್ಯ ಸಮಾಜ ಮುಖಿ ಚಿಂತನೆಗಳನ್ನು ಪ್ರತಿಪಾದಿಸಬೇಕು-ಹೊನ್ನಾಳಿ

| Published : Sep 10 2024, 01:31 AM IST

ಸಾಹಿತ್ಯ ಸಮಾಜ ಮುಖಿ ಚಿಂತನೆಗಳನ್ನು ಪ್ರತಿಪಾದಿಸಬೇಕು-ಹೊನ್ನಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕವಿಗಳು ಸಮಾಜ ಮುಖಿ ಚಿಂತನೆಗಳನ್ನು ಪ್ರತಿಪಾದಿಸಿದಾಗ ಮಾತ್ರ ಜನ ಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ ಎಂದು ಪ್ರಾಧ್ಯಾಪಕ, ಬರಹಗಾರ ಡಾ. ಎಮ್.ಈ. ಶಿವಕುಮಾರ ಹೊನ್ನಾಳಿ ಹೇಳಿದರು.

ರಾಣಿಬೆನ್ನೂರು: ಕವಿಗಳು ಸಮಾಜ ಮುಖಿ ಚಿಂತನೆಗಳನ್ನು ಪ್ರತಿಪಾದಿಸಿದಾಗ ಮಾತ್ರ ಜನ ಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ ಎಂದು ಪ್ರಾಧ್ಯಾಪಕ, ಬರಹಗಾರ ಡಾ. ಎಮ್.ಈ. ಶಿವಕುಮಾರ ಹೊನ್ನಾಳಿ ಹೇಳಿದರು. ನಗರದ ಮೆಡ್ಲೇರಿ ರಸ್ತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸ್ಥಳೀಯ ಮಾತೋಶ್ರೀ ಮಹದೇವಕ್ಕ ಮಂಗಳ ವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ಮತ್ತು ನಲ್ಬೆಳಗು ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದೇವರಾಜ್ ಹುಣಸಿಕಟ್ಟಿ ರಚಿಸಿದ ಹಕೀಮನೊಬ್ಬನ ತಕರಾರು ಎಂಬ ಕವನ ಸಂಕಲನ ಬಿಡುಗಡೆ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಸಮಾರಂಭದಲ್ಲಿ ಅವರು ಮಾತನಾಡಿದರು. ಅಸಹನೆಗಳನ್ನು ಬೇರುಸಮೇತ ಕಿತ್ತುಹಾಕಬೇಕು. ಸಾಹಿತ್ಯ ಕ್ಷೇತ್ರದ ಮೂಲಕ ಸಮಾಜದ ಓರೆಕೋರೆಗಳನ್ನ ತಿದ್ದುವ ಶಕ್ತಿ ಬರುತ್ತದೆ. ಇಂತಹ ಸಾಧ್ಯತೆಗಳನ್ನು ಕವಿ ದೇವರಾಜ ತಮ್ಮ ಕೃತಿಯ ಕವನಗಳ ಮೂಲಕ ವ್ಯಕ್ತ ಪಡಿಸಿದ್ದಾರೆ. ಇಂದಿನ ಬರಹಗಾರರು, ಸಾಹಿತಿಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕವಿತೆಗಳಲ್ಲಿ ನಿರಂತರ ಕೃಷಿ ಇರಬೇಕು. ಮೊನಚು, ನೇರ, ದಿಟ್ಟತನ ಇರಬೇಕು. ಇಂದಿನ ಯುವ ಸಾಹಿತಿಗಳಲ್ಲಿ ಸಾಮಾಜಿಕ ಬದ್ಧತೆ ಕ್ಷೀಣಿಸುತ್ತಿದೆ. ಸಮಾಜಮುಖಿಯಾಗಿರಬೇಕಾದ ಇಂದಿನ ಅನೇಕ ಸಾಹಿತಿಗಳಲ್ಲಿ ಸಾಮಾಜಿಕ ಬದ್ಧತೆ ಕಾಣದಾಗಿದೆ. ಕೆಟ್ಟಿರುವ ಸಮಾಜದ ವ್ಯವಸ್ಥೆ ಬಗ್ಗೆ ಮಾತನಾಡುವಲ್ಲಿ ನಿಷ್ಕ್ರೀಯರಾಗಿದ್ದಾರೆ. ಯಾವುದೇ ಕವನ ಸಾಹಿತ್ಯವಾಗಲಿ ಸ್ವಯಂಪ್ರೇರಿತವಾಗಿ ಅಭ್ಯಾಸ ಮಾಡುವುದರಿಂದ ಮತ್ತು ಅನುಭವದಿಂದ ಮಾತ್ರ ಬರಲು ಸಾಧ್ಯ. ಕಾವ್ಯ ಮತ್ತು ಸಾಹಿತ್ಯಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು.ಕವಿಗಳನ್ನು, ಲೇಖಕರನ್ನು ಓದಿನಲ್ಲಿ ತೊಡಗಿಸುವುದು ಇಂತಹ ಕವಿಗೋಷ್ಠಿಗಳ ಉದ್ದೇಶವಾಗಿದೆ. ಆಧುನಿಕ ಯುಗದಲ್ಲಿ ಎಲ್ಲರೂ ಆಕರ್ಷಣೆಗೆ ಒಳಗಾಗಿರುವುದರಿಂದ ಕವನಗಳನ್ನು ಕೇಳುವವರ ಸಂಖ್ಯೆಯೇ ಕಡಿಮೆಯಾಗಿದೆ ಎಂದರು. ಸಾಹಿತಿ ದೀಪಾ ಗೋನಾಳ ಕೃತಿ ಪರಿಚಯ ಮಾಡಿದರು. ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 20 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ನಾಗರತ್ನ ಚಲವಾದಿ, ಪೂರ್ಣಿಮಾ, ಗೌತಮ್, ಪ್ರೀತಮ ಸಾವಕ್ಕನವರ ಇವರುಗಳ ಸ್ಯಾಕ್ಸೋಫೋನ್ ವಾದನ ಎಲ್ಲರ ಮನಸೂರೆಗೊಂಡಿತು. ಕೃತಿಕಾರ ದೇವರಾಜ ಹುಣಸಿಕಟ್ಟಿ, ಅಭಿಲಾಷ್ ಬ್ಯಾಡಗಿ, ಬಸವರಾಜ ಸಾವಕ್ಕನವರ, ಶಕುಂತಲಾ ಎಫ್. ಕೆ. ಸೋಮಣ್ಣ ಲಮಾಣಿ, ವೀರೇಶ ಜಂಬಗಿ, ನಾಮದೇವ ಕಾಗದಗಾರ, ಮಾರುತಿ ತಳವಾರ, ದಾಕ್ಷಾಯಣಿ ಉದಗಟ್ಟಿ ಉಪಸ್ಥಿತರಿದ್ದರು.